ಕೊಡಗಿನ ಸಂತ್ರಸ್ತರಿಗಾಗಿ ನಿರ್ಮಾಣಗೊಳ್ಳಲಿದೆ ಭೂಕಂಪನ ನಿರೋಧಕ ತಂತ್ರಜ್ಞಾನದ ಮನೆಗಳು

Update: 2018-12-06 12:52 GMT

ಮಡಿಕೇರಿ, ಡಿ.6: ಜಿಲ್ಲೆಯ ಭೂ ಕುಸಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ತೀರಾ ವಿಳಂಬವಾಗುತ್ತಿದೆ ಎಂದು ಆರೋಪದ ನಡುವೆ ಸಂತ್ರಸ್ತರ ಹೋರಾಟ ಸಮಿತಿಯೂ ರಚನೆಗೊಂಡಿದ್ದು, ಹೋರಾಟಕ್ಕೆ ಅಣಿಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಮನೆಗಳ ನಿರ್ಮಾಣ ಕಾರ್ಯಕ್ಕೆ ಡಿ.7 ರಂದು ಚಾಲನೆ ನೀಡಲು ಮುಂದಾಗಿದೆ.

ಜಿಲ್ಲೆಯ ಭೂ ಕುಸಿತ ಸಂತ್ರಸ್ಥರಿಗಾಗಿ ಸರ್ಕಾರದ ಆಹ್ವಾನದ ಮೇರೆಗೆ ವಿವಿಧ ಕಂಪೆನಿಗಳು 6 ಮನೆಗಳ ಮಾದರಿಗಳನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಕಳಿಸಿಕೊಟ್ಟಿತ್ತಿ. ಅವುಗಳಲ್ಲಿ ರಾಜ್ಯ ಸರ್ಕಾರದ ಅಧೀನದ ರಾಜೀವ್ ಗಾಂದಿ ಗ್ರಾಮೀಣ ವಸತಿ ನಿಗಮ ನಿಯಮಿತ ವಿನೂತನ ತಂತ್ರಜ್ಞಾನ ಬಳಸಿ ನಿರ್ಮಿಸಿದ ಮನೆಯ ಮಾದರಿ ಆಯ್ಕೆಯಾಗಿದೆ. ಖಾಸಗಿ ಕಂಪೆನಿಗಳ ಪೈಪೋಟಿಯ ನಡುವೆಯೂ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ನಿರ್ಮಾಣದ ಮಾದರಿ ಆಯ್ಕೆಯಾಗಿರುವುದು ಗಮನಾರ್ಹ.

ವಿಶೇಷ ತಂತ್ರಜ್ಞಾನದ ಮನೆ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಜಿಲ್ಲೆಯ 840 ಸಂತ್ರಸ್ತರಿಗಾಗಿ ವಿವಿಧೆಡೆಗಳಲ್ಲಿ ಮನೆಗಳು ನಿರ್ಮಾಣಗೊಳ್ಳಲಿವೆ. ರಾಜೀವ್ ವಸತಿ ನಿಗಮ ನಿರ್ಮಿಸಿರುವ ಈ ಮನೆಗಳ ವಿಶೇಷತೆ ಏನೆಂದರೆ ಇವುಗಳ ಮೇಲೆ ಅಪಾರ ಪ್ರಮಾಣದ ಮಣ್ಣು ಕುಸಿದರೂ ಇವು ಕುಸಿಯುವುದಿಲ್ಲ. ಇತರ ಸಾಂಪ್ರದಾಯಿಕ ಟಾರಸಿ ಮನೆಗಳ ನಿರ್ಮಾಣದಲ್ಲಿ ಪಿಲ್ಲರ್ ಗಳನ್ನು ಬಳಸಲಾಗಿದ್ದರೆ ಇದರಲ್ಲಿ ಪಿಲ್ಲರ್ ಇರುವುದಿಲ್ಲ.

ಆರ್‍ಸಿಸಿ ಛಾವಣಿಗೆ ಬಳಸಲಾಗಿರುವ ಕಬ್ಬಿಣದ ಕಂಬಿಗಳು ಗೋಡೆಯಿಂದ ನೆಲದವರೆಗೂ ಇಳಿದಿವೆ. ಅಂದರೆ 40 ಅಡಿ ಕಬ್ಬಿಣದ ರಾಡನ್ನೇ ತುಂಡರಿಸದೇ ಹಾಗೆಯೇ ಬಾಗಿಸಿ ಬಳಸಲಾಗಿದೆ. ಇದರಿಂದ ಮನೆ ಹೆಚ್ಚು ಗಟ್ಟಿ ಮುಟ್ಟಾಗಿದ್ದು, ಯಾವುದೇ ಭಾಗದಿಂದ ಮನೆಗೆ ಒತ್ತಡ ಅಪ್ಪಳಿಸಿದರೂ ಅಪಾಯವಿಲ್ಲ. ರಾಜೀವ್ ವಸತಿ ನಿಗಮ ಇದೇ ತಂತ್ರಜ್ಞಾನದಲ್ಲಿ ಕನಕಪುರ ಹಾಗೂ ಇತರೆಡೆಗಳಲ್ಲಿ ಸಿಂಗಲ್ ಬೆಡ್ ರೂಮಿನ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಕೊಡಗಿನ ಸಂತ್ರಸ್ತರಿಗೆ ತಲಾ 9.85 ಲಕ್ಷ ರೂ. ವೆಚ್ಚದಲ್ಲಿ ಎರಡು ಬೆಡ್ ರೂಮುಗಳ ಮನೆ ನಿರ್ಮಾಣ ಮಾಡಲಾಗುತ್ತಿದ್ದು, ಇದು ದೇಶದಲ್ಲೇ ಪ್ರಥಮ ಎಂದು ಪುರ್ವಸತಿ ವಿಭಾಗದ ಹೆಚ್ಚುವರಿ ಜಿಲ್ಲಾದಿಕಾರಿ ಎಂ.ಕೆ.ಜಗದೀಶ್ ಅವರು ಹೇಳಿದರು.

ದೇಶದಲ್ಲಿ ಸಂತ್ರಸ್ತರಿಗಾಗಿ ಈ ವರೆಗೆ ಸಿಂಗಲ್ ಬೆಡ್ ರೂಮ್‍ನ ಮನೆಗಳನ್ನು ಮಾತ್ರ ನಿರ್ಮಿಸಿಕೊಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಎರಡು ಬೆಡ್ ರೂಂ ಗಳನ್ನು ನಿರ್ಮಿಸಲಾಗುತ್ತಿದೆ. ಅಷ್ಟೇ ಅಲ್ಲ ಈ ಮನೆಗಳ ಮೇಲ್ಚಾವಣಿಯನ್ನು ಸಮತಟ್ಟಾಗಿ ನಿರ್ಮಿಸಲಾಗುತ್ತಿದ್ದು ಇದರಿಂದಾಗಿ ಫಲಾನುಭವಿಗಳು ಮುಂದಿನ ದಿನಗಳಲ್ಲಿ ಇದರ ಮೇಲೆ ಇನ್ನೊಂದು ಅಂತಸ್ತು ನಿರ್ಮಿಸಿಕೊಳ್ಳಬಹುದಾಗಿದೆ.

ಮನೆ ನಿರ್ಮಾಣದ ತಂತ್ರಜ್ಞಾನದ ಕುರಿತು ಮಹಿತಿ ನೀಡಿದ ಯೋಜನಾ ನಿರ್ದೆಶಕ ಹೆಚ್.ಶ್ರೀನಿವಾಸ್ ಅವರು ಇಡೀ ಮನೆಯು 5 ರಿಂದ 6 ಇಂಚಿನಷ್ಟು ಕಾಂಕ್ರೀಟ್ ಗೋಡೆಯನ್ನು ಹೊಂದಿದ್ದು ಇದರ ನಿರ್ಮಾಣದಲ್ಲಿ ಕಲ್ಲು ಅಥವಾ ಇಟ್ಟಿಗೆಯನ್ನು ಬಳಸುವುದಿಲ್ಲ ಎಂದರು. ಇಡೀ ಮನೆಯೇ ಕಾಂಕ್ರೀಟ್ ಕೋಶದಂತೆ ಮತ್ತು ಮೊನೊಲಿಥಿಕಲ್ ನಂತೆ ಇದ್ದು ಇದು ಸಂಪೂರ್ಣ ಭೂಕಂಪ ನಿರೋಧಕವಾಗಿದೆ ಎಂದರು. ಮನೆಗಳ ನಿರ್ಮಾಣಕ್ಕೆ ಸಂಪೂರ್ಣವಾಗಿ ಇತರ ಕಾಂಕ್ರೀಟ್ ನಿರ್ಮಾಣಕ್ಕೆ ಬಳಸುವಂತೆಯೇ ಕಬ್ಬಿಣದ ಮೌಲ್ಡ್ ಗಳನ್ನು ಬಳಸಲಾಗುವುದು. ಈ ಮೌಲ್ಡ್ ಗಳನ್ನು ಬಿಚ್ಚಿದ ಕೂಡಲೇ ಮನೆ ನಿರ್ಮಾಣವಾದಂತೆಯೇ ಎಂದು ಶ್ರೀನಿವಾಸ್ ಹೇಳಿದ್ದು, ಈ ಮನೆಯ ನಿರ್ಮಾಣಕ್ಕೆ 20 ದಿನ ಬೇಕಾಗುತ್ತದೆ ಎಂದರು.

ಕಾಂಕ್ರೀಟ್ ಗೋಡೆಗಳ ನಿರ್ಮಾಣದ ಸಂದರ್ಭದಲ್ಲೇ ವಿದ್ಯುತ್ ಸಂಪರ್ಕದ ಹಾಗೂ ನೀರಿನ ಪೈಪ್ ಗಳನ್ನೂ ಅಳವಡಿಸುವುದರಿಂದ ವೆಚ್ಚವೂ ಕಡಿಮೆ ಹಾಗೂ ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. ಮನೆಯ ಕಿಟಕಿಗಳಿಗೆ ಅಲ್ಯುಮೀನಿಯಂ ಹಾಗೂ ಬಾಗಿಲುಗಳಿಗೆ ಪರಿಸರ ಸ್ನೇಹಿ ಮರ ಬಳಸಲಾಗುವುದು ಎಂದರು.

ಈ ಮಾದರಿಯ ಭೂಕಂಪ ನಿರೋಧಕ ಮನೆಗಳನ್ನು ವಿಶ್ವದಾದ್ಯಂತ ನಿರ್ಮಿಸಲಾಗುತ್ತಿದ್ದು, ರಾಜೀವ್ ವಸತಿ ನಿಗಮ 2012 ರಿಂದ ರಾಜ್ಯದಲ್ಲಿ ಸುಮಾರು 3,500 ಮನೆಗಳನ್ನು ನಿರ್ಮಿಸಿದೆ. ಆಂಧ್ರ ಪ್ರದೇಶದ ವಸತಿ ನಿಗಮವು ಆಂಧ್ರ ರಾಜ್ಯಾದ್ಯಂತ ಇಂತಹ 4 ಲಕ್ಷ ಮನೆಗಳನ್ನು ನಿರ್ಮಿಸಿದೆ.
ಕರ್ನಾಟಕ ರಾಜ್ಯ ಸರ್ಕಾರ ಕೊಡಗಿನ ಸಂತ್ರಸ್ತರಿಗಾಗಿ ಸಕಾಲದಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟರೆ ಉದ್ದೇಶಿತ ಯೋಜನೆ ಯಶಸ್ವಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News