'ಬರಗಾಲ' ಚರ್ಚೆಗೆ ಅವಕಾಶ ನಿರಾಕರಣೆ: ಪರಿಷತ್ ಸದಸ್ಯರ ನಡುವೆ ಮಾತಿನ ಚಕಮಕಿ

Update: 2018-12-11 11:45 GMT

ಬೆಳಗಾವಿ, ಡಿ.11: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ ಇದ್ದು, ಜನರು ಗೊಳೆ ಹೊರಟಿದ್ದಾರೆ. ಈ ಸಂಬಂಧ ಚರ್ಚಿಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಮಂಡಿಸಿದ ನಿಲುವಳಿ ಸೂಚಿಯನ್ನು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿರಸ್ಕರಿಸಿದ್ದರಿಂದ ಕೆಲಕಾಲ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಮಂಗಳವಾರ ಬೆಳಗ್ಗೆ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಹೊರಟ್ಟಿ ಪ್ರಶ್ನೋತ್ತರ ಕಲಾಪವನ್ನು ಪ್ರಾರಂಭಿಸಲು ಮುಂದಾದಂತೆ ಕೋಟಾ ಶ್ರೀನಿವಾಸ್ ಪೂಜಾರಿ ಅವರು ನಿಯಮ 68ರಡಿ ಬರಗಾಲದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಕೋರಿದರು. ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಬರಗಾಲವಿದೆ. ಜನರಿಗೆ ಕುಡಿಯಲು ನೀರು, ಜಾನುವಾರುಗಳಿಗೆ ಮೇವು, ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಗುಳೇ ಹೋಗುತ್ತಿದ್ದಾರೆ. ಸರ್ಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೊರಟ್ಟಿ, ಸದನವನ್ನು ನಿಯಮದ ಪ್ರಕಾರವೇ ನಡೆಸಬೇಕು. ಮೊದಲು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳುವೆ. ನಂತರ ನಿಮಗೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡುತ್ತೇನೆ. ಹೀಗಾಗಿ ನಿಮ್ಮ ಪ್ರಸ್ತಾವನೆಯನ್ನು ತಿರಸ್ಕರಿಸುತ್ತೇನೆ ಎಂದರು.

ಇದನ್ನು ಒಪ್ಪದ ಕೋಟಾ ಶ್ರೀನವಾಸ ಪೂಜಾರಿ ಕೆಲ ವಿಶೇಷ ಸಂದರ್ಭಗಳಲ್ಲಿ ಪ್ರಶ್ನೋತ್ತರ ಅವಧಿಗೂ ಮುನ್ನ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಿರುವ ಉದಾಹರಣೆಗಳಿವೆ. ಹಿಂದಿನ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡಿದ ನಿದರ್ಶನವಿದೆ. ನೀವು ಏಕಾಏಕಿ ನಿಲುವಳಿ ಸೂಚನೆಯನ್ನು ತಿರಸ್ಕಾರ ಮಾಡುತ್ತೇನೆ ಎಂದು ಹೇಳಿದ್ದು ಸರಿಯಲ್ಲ ಎಂದರು.

ಈ ಹಂತದಲ್ಲಿ ಪ್ರತಿಪಕ್ಷದ (ಬಿಜೆಪಿ) ಸದಸ್ಯರು ಸಭಾಪತಿಯವರು ತಮ್ಮ ಆದೇಶವನ್ನು ಪನರ್ ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದಾಗ ಜೆಡಿಎಸ್ ಸದಸ್ಯರು ಆಕ್ಷೇಪಿಸಿದರು. ಪೀಠದಿಂದ ಒಂದು ಬಾರಿ ಆದೇಶ ನೀಡಿದಾಗ ಮತ್ತೆ ಮತ್ತೆ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ದಯವಿಟ್ಟು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಿ ಎಂದು ಮನವಿ ಮಾಡಿದರು.

ನಾನು ಪ್ರಶ್ನೋತ್ತರ ಅವಧಿ ಮುಗಿದ ನಂತರ ಚರ್ಚೆಗೆ ಅವಕಾಶ ಕಲ್ಪಿಸುತ್ತೇನೆ. ಈ ಪೀಠದಿಂದ ಆದೇಶ ನೀಡಿದ ಮೇಲೆ ಅದನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಎಲ್ಲ ಸದಸ್ಯರು ಮೊದಲು ಪೀಠಕ್ಕೆ ಗೌರವ ಕೊಡಿ ಎಂದು ಹೊರಟ್ಟಿ ಸೂಚಿಸಿದರು. ಇದಕ್ಕೆ ಇನ್ನಷ್ಟು ಕೆರಳಿದ ಶ್ರೀನಿವಾಸ್ ಪೂಜಾರಿ, ನಾವು ಪೀಠಕ್ಕೆ ಅಗೌರವ ಸೂಚಿಸುತ್ತಿಲ್ಲ. ಹಿಂದೆ ಇದೇ ಪೀಠದಿಂದ ಆದೇಶ ನೀಡಿದಾಗ ಅದನ್ನು ಪುನಃ ಪರಿಶೀಲನೆ ಮಾಡಿದ ಪ್ರಸಂಗಗಳಿವೆ. ನೀವು ಹೀಗೆ ಏಕಾಏಕಿ ವಿರೋಧ ಪಕ್ಷದ ನಾಯಕರ ಹಕ್ಕುಗಳನ್ನು ಮೊಟಕುಗೊಳಿಸಬೇಡಿ. ನಾನು ಹೇಳಿದ್ದೇ ಸರಿ ಎನ್ನುವುದಾದರೆ ನಾವು ಅಸಹಾಯಕರಾಗುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News