ಕಲಬುರಗಿ: ರಾಜ್ಯ ಮಟ್ಟದ 'ಮಕ್ಕಳ ವಿಜ್ಞಾನ ಸಮಾವೇಶ' ಉದ್ಘಾಟನೆ

Update: 2018-12-15 07:40 GMT

ಕಲಬುರಗಿ, ಡಿ.15: ವಿದ್ಯಾರ್ಥಿಗಳು ಕೇವಲ ಓದಿನ ಬಗ್ಗೆ ಗಮನ ಕೊಡದೆ ವೈಜ್ಞಾನಿಕ ಜವಾಬ್ದಾರಿ ಬೆಳೆಸಿಕೊಂಡು ಮುಂದುವರಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಕರಾವಿಪ ಜಿಲ್ಲಾ ಸಮಿತಿ, ಗುಲಬರ್ಗಾ ವಿವಿ ಕಲಬುರಗಿ ಸಹಯೋಗದಲ್ಲಿ ಗುವಿ ಕಲಬುರಗಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 26ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ - 2018  ಅನ್ನು ಇಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ಮೂರು ಪ್ರಮುಖ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ವಿಷಯದ‌ ಬಗ್ಗೆ ಕುತೂಹಲ ಬೆಳೆಸಿಕೊಂಡು, ಪ್ರಶ್ನೆ ಕೇಳುವ ಮೂಲಕ ಉತ್ತರ ಕಂಡುಕೊಳ್ಳಬೇಕು ಹಾಗೂ ಮಾಡಿದ ತಪ್ಪಿನ ಬಗ್ಗೆ ಮತ್ತು ವೈಫಲ್ಯದ ಬಗ್ಗೆ ಹೆದರಿಕೆಯಿಲ್ಲದೇ ಮುಂದುವರಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಪ್ರಿಯಾಂಕ್ ಖರ್ಗೆ ನುಡಿದರು.

ಪ್ರಪಂಚದ ಹೆಸರಾಂತ ವಿಜ್ಞಾನಿಗಳಾದ ಸರ್ ಥಾಮಸ್ ಎಡಿಸನ್ ಹಾಗೂ ಸರ್‌ ಸಿ.ವಿ.ರಾಮನ್ ಅವರ ಉದಾಹರಣೆ ನೀಡಿದ ಸಚಿವರು, ಈ ಇಬ್ಬರು ಮಹನೀಯರು ಹಲವಾರು ಬಾರಿ ವೈಫಲ್ಯ ಕಂಡರೂ ಛಲಬಿಡದೇ ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಸತತ ಪ್ರಯತ್ನ ಮಾಡಿದ್ದರಿಂದ ಯಶಸ್ಸು ಕಂಡರು. ಅದೇ ರೀತಿ  ವಿದ್ಯಾರ್ಥಿಗಳು ಕೂಡಾ ಸೋಲಿನ ಬಗ್ಗೆ ಹೆಚ್ಚಿನ‌ ಭಯ ಪಡದೆ ಸತತ ಪ್ರಯತ್ನ ಮಾಡುವ ಮೂಲಕ ಯಶಸ್ಸು ಸಾಧಿಸಬೇಕು ಎಂದು ಕರೆ ಕೊಟ್ಟರು.

ರಾಜ್ಯ ಸರಕಾರ ಶೈಕ್ಷಣಿಕ ಕ್ಷೇತ್ರದ  ಉತ್ತೇಜನಕ್ಕೆ ತೆಗೆದುಕೊಂಡ ಕ್ರಮಗಳನ್ನು ವಿವರಿಸಿದ ಅವರು ಮೊಟ್ಟಮೊದಲ ಬಾರಿಗೆ ಪದವಿಪೂರ್ವ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಳಲು ಧನಸಹಾಯ ಮಾಡುವ ಪ್ರಬುದ್ಧ ಯೋಜನೆ ಜಾರಿಗೆ ತರಲಾಗಿದ್ದು ಬಡ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಪ್ರಸಕ್ತ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುವಂತೆ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ಪ್ರಗತಿಪರ ವಿಚಾರಗಳನ್ನು ಹೊಂದಿದ ವಿದ್ಯಾರ್ಥಿಗಳು ಸಮಾಜಕ್ಕೆ ರಾಜ್ಯಕ್ಕೆ ರಾಷ್ಟ್ರಕ್ಕೆ ಮಾದರಿಯಾಗಬಲ್ಲರು. ಅಂತಹ ವಿದ್ಯಾರ್ಥಿಗಳಿಗೆ ಸರಕಾರ ಸಂಪೂರ್ಣ ನೆರವು ನೀಡಲಿದೆ ಎಂದ ಪ್ರಿಯಾಂಕ್ ಖರ್ಗೆ, ಜಿಲ್ಲಾಡಳಿತ ಈ ಕುರಿತು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಮಲ್ಲಮ್ಮ ಎಸ್. ವಳಕೇರಿ, ಶಾಸಕ ಬಸವರಾಜ ಮತ್ತಿಮೂಡ, ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಕುಲಪತಿ ಆರ್.ನಿರಂಜನ್, ಹುಲಿಕಲ್ ನಟರಾಜ್, ಎಸ್. ವಿ ಸಂಕನೂರು, ಶರಣಗೌಡ ಮಾಲೀ ಪಾಟೀಲ್ ಸೇರಿದಂತೆ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News