ನಾಗರಿಕ ಸೇವೆಗಳಿಗೆ ಶೇ.60ರಷ್ಟು ಸರಕಾರಿ ಅಧಿಕಾರಿಗಳ ಮಕ್ಕಳೇ ಆಯ್ಕೆ !

Update: 2018-12-15 16:46 GMT

#ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆದಿರುವ ಎಲ್ಲಾ ಅಭ್ಯರ್ಥಿಗಳೂ ಅನುತ್ತೀರ್ಣ !

ಬೆಂಗಳೂರು, ಡಿ.15: ನಾಗರಿಕ ಸೇವೆಗಳಿಗೆ ಆಯ್ಕೆ ಆಗುವ ಒಟ್ಟು ಅಭ್ಯರ್ಥಿಗಳಲ್ಲಿ ಶೇ.60 ರಷ್ಟು ಅಭ್ಯರ್ಥಿಗಳು ಸರಕಾರಿ ಅಧಿಕಾರಿಗಳ ಮಕ್ಕಳೇ ಆಗಿದ್ದು, ಶೇ.30 ರಷ್ಟು ವ್ಯಾಪಾರೋದ್ಯಮಿಗಳ ಮಕ್ಕಳು, ಶೇ.10 ರಷ್ಟು ಉಳಿದ ವೃತ್ತಿಯಲ್ಲಿರುವವರ ಮಕ್ಕಳು, ಶೇ.10 ರಷ್ಟು ಇತರೆ, ಕೃಷಿಕರು ಮತ್ತು ಕಾರ್ಮಿಕರ ಮಕ್ಕಳು ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಐಎಎಸ್, ಐಪಿಎಸ್ ಮತ್ತಿತರ ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆಗಳಲ್ಲಿ 2011 ರಿಂದ ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆದಿರುವ ಒಬ್ಬ ಅಭ್ಯರ್ಥಿಯೂ ಉತ್ತೀರ್ಣರಾಗಿಲ್ಲ. ಕೇವಲ ಇಂಗ್ಲಿಷ್ ಮಾಧ್ಯಮದಲ್ಲಿ ಬರೆದಿರುವವರೇ ಆಯ್ಕೆ ಆಗುತ್ತಿದ್ದಾರೆ. ಕನ್ನಡ ಮಾತ್ರವಲ್ಲ ಇತರ ಭಾರತೀಯ ಭಾಷೆಗಳಲ್ಲಿ ಬರೆಯುವ ವಿದ್ಯಾರ್ಥಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎನ್ನುತ್ತಾರೆ ಈ ಕುರಿತು ಅಧ್ಯಯನ ನಡೆಸಿರುವ ಮನುಕುಮಾರ್ ರಾಜೇಅರಸ್. ಇವರು ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಇಂಗ್ಲಿಷ್ ಬದಲಿಗೆ ಆಯಾ ರಾಜ್ಯಗಳ ಭಾಷೆಗಳಲ್ಲೇ ನಡೆಸಬೇಕು ಎಂಬ ಹೋರಾಟ ನಡೆಸುತ್ತಿದ್ದಾರೆ.

ಭಾಷೆ ಮಾತ್ರವಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯೂ ಗ್ರಾಮೀಣರು, ಹಿಂದುಳಿದವರು ಮತ್ತು ಶೋಷಿತರು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಯ್ಕೆ ಆಗಲು ಸಾಧ್ಯವಾಗುತ್ತಿಲ್ಲ. ಹಣವಂತರು ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ಮಾತ್ರ ಆಯ್ಕೆಯಾಗುತ್ತಿದ್ದಾರೆ ಎಂದರು.

ನಗರ ಪ್ರದೇಶದವರೇ ಹೆಚ್ಚು ಆಯ್ಕೆ: ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಆಯ್ಕೆಯಾಗುತ್ತಿರುವವರಲ್ಲೂ ತಾರತಮ್ಯವಿದೆ. ಶೇ.70 ರಷ್ಟು ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಆದರೆ, ಅಲ್ಲಿಂದ ಐಎಎಸ್, ಐಪಿಎಸ್ ಮತ್ತಿತರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಶೇ.30 ರಷ್ಟು, ಇದರಲ್ಲೂ ಶೇ.20 ರಷ್ಟು ಅಭ್ಯರ್ಥಿಗಳು ಮಾತ್ರ ಹಳ್ಳಿಗಳಲ್ಲಿ ಶಾಲೆ ಓದಿರುತ್ತಾರೆ. ಶೇ.5 ರಷ್ಟು ಅಭ್ಯರ್ಥಿಗಳು ಮಾತ್ರ ಗ್ರಾಮಾಂತರ ಪ್ರದೇಶದಲ್ಲಿ ಪದವಿ ಪಡೆದಿರುತ್ತಾರೆ. ಉಳಿದ ಶೇ.85 ರಷ್ಟು ಅಭ್ಯರ್ಥಿಗಳು ಅಕ್ಕಪಕ್ಕದ ಪಟ್ಟಣ ಮತ್ತು ನಗರಗಳಲ್ಲಿ ಶಿಕ್ಷಣ ಪಡೆದಿರುತ್ತಾರೆ ಎಂದು ಹೇಳಿದರು.

ನಗರ ಪ್ರದೇಶಗಳ ಅಭ್ಯರ್ಥಿಗಳಿಗೆ ಅನುಕೂಲಕರ ಪ್ರಶ್ನೆ ಪತ್ರಿಕೆ:  ನಗರದ ನಾಗರಿಕ ಸೇವೆಗಳ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳಿವೆ. ಇಂಗ್ಲಿಷ್ ಮಾಧ್ಯಮದಲ್ಲಿ ಬರೆಯುವ ನಗರ ಪ್ರದೇಶಗಳ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪ್ರಶ್ನೆ ಪತ್ರಿಕೆ ರೂಪಿಸಲಾಗುತ್ತದೆ. ಅಭ್ಯರ್ಥಿಗಳನ್ನೂ ಅದಕ್ಕೆ ತಕ್ಕಂತೆ ತರಬೇತಿ ನೀಡಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳ ಭಾರತೀಯ ಭಾಷೆಗಳಲ್ಲಿ ಬರೆಯುವ ಅಭ್ಯರ್ಥಿಗಳು ನಗರ ಪ್ರದೇಶಗಳ ಅಭ್ಯರ್ಥಿಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಮನುಕುಮಾರ್ ರಾಜೇಅರಸ್ ತಿಳಿಸಿದರು.

ಸರಕಾರ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳು: ಇಂಗ್ಲಿಷ್ ಮತ್ತು ಹಿಂದಿಗಳನ್ನು ಅಧಿಕೃತ ಭಾಷೆ ಸ್ಥಾನದಿಂದ ಮುಕ್ತಗೊಳಿಸಿ, ಕೇಂದ್ರ ಮತ್ತು ರಾಜ್ಯದ ಎಲ್ಲ ಶಾಲೆಗಳಲ್ಲಿ ಏಕರೂಪತೆಗಾಗಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಬೇಕು. ಪ್ರತಿಯೊಂದು ರಾಜ್ಯವೂ ಅಲ್ಲಿನ ರಾಜ್ಯ ಭಾಷೆಯನ್ನೇ ಅಧಿಕೃತ ಪ್ರಥಮ ಭಾಷೆಯನ್ನಾಗಿ ಅಂಗೀಕರಿಸಬೇಕು. ಇಂಗ್ಲಿಷನ್ನು ತೃತೀಯ ಭಾಷೆಯಾಗಿ ಕಡ್ಡಾಯಗೊಳಿಸಬಹುದು ಹಾಗೂ ಇಂಗ್ಲಿಷ್ ಅಥವಾ ಇತರ ಯಾವುದೇ ವಿದೇಶಿ ಭಾಷೆಗಳನ್ನು ವ್ಯಾವಹಾರಿಕ ದೃಷ್ಟಿಯಿಂದ ಮಾತ್ರ ಬಳಸಬೇಕು.

1990 ರಲ್ಲಿ ಉತ್ತೀರ್ಣರಾಗಿ ಆಯ್ಕೆಯಾದವರು

►ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದವರು ಶೇ.45 ರಷ್ಟು.

► ಹಿಂದಿಯಲ್ಲಿ ಬರೆದವರು ಶೇ.25 ರಷ್ಟು.

►ಇತರೆ ಭಾರತೀಯ ಭಾಷೆಗಳಲ್ಲಿ ಬರೆದವರು ಶೇ.30 ರಷ್ಟು.

2015 ರಲ್ಲಿ ಆಯ್ಕೆಯಾದವರು

► ಇಂಗ್ಲಿಷ್ ಮಾಧ್ಯಮ ಶೇ.94 ರಷ್ಟು.

►ಹಿಂದಿ ಮಾಧ್ಯಮ ಶೇ.0.4 ರಷ್ಟು.

► ಕನ್ನಡ ಅಥವಾ ಇತರೆ ಭಾರತೀಯ ಭಾಷೆಗಳ ಪ್ರಮಾಣ ಶೂನ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News