ಯರವ ಮತ್ತು ಸೋಲಿಗ ಜನಾಂಗದ ಅಭಿವೃದ್ಧಿ: ಮನೆ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳಿಸಲು ಕೊಡಗು ಡಿಸಿ ಸೂಚನೆ

Update: 2018-12-15 18:42 GMT

ಮಡಿಕೇರಿ, ಡಿ.15: ಯರವ ಮತ್ತು ಸೋಲಿಗ ಜನಾಂಗದ ಅಭಿವೃದ್ಧಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ವಸತಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯರವ ಮತ್ತು ಸೋಲಿಗ ಜನಾಂಗದವರ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಬಗ್ಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಸತಿ ಯೋಜನೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಅರ್ಧಕ್ಕೆ ನಿಂತಿರುವ ಮನೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ನಿರ್ದೇಶನ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಬಸವನಹಳ್ಳಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ಅವರು ಸೋಮವಾರಪೇಟೆ ತಾಲೂಕಿನಲ್ಲಿ 80 ಮನೆಗಳ ನಿರ್ಮಾಣದ ಕಾಮಗಾರಿ ಕುಂಠಿತಗೊಂಡಿದೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು. ತಾಲೂಕು ಐಟಿಡಿಪಿ ಇಲಾಖಾ ಅಧಿಕಾರಿಗಳು ವಸತಿ ಯೋಜನೆ ಅನುಷ್ಠಾನ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. 

ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯಲ್ಲಿ ಹಣದ ಕೊರತೆಯಿಲ್ಲ. ಆದರೆ ಕಾಲ ಕಾಲಕ್ಕೆ ಹಣ ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಆರಂಭವಾಗುವ ವಸತಿ ಕಾಮಗಾರಿಗಳನ್ನು ಲ್ಯಾಂಪ್ ಸೊಸೈಟಿಗೆ ವಹಿಸುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.   ಕುಡಿಯುವ ನೀರು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ನೀಡುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. 

ಈ ಬಗ್ಗೆ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಕುಡಿಯುವ ನೀರು ಸಂಬಂಧ ಕುಂದಾ ಬಸವೇಶ್ವರ ಕಾಲೋನಿ, ಚಿಕ್ಕ ರೇಷ್ಮೆ ಕಾಲೋನಿ, ಕಾವೇರಿ ಗಿರಿಜನ ಕಾಲೋನಿ, ರಾಮ, ಟಿ.ಶೆಟ್ಟಿಗೇರಿ, ದೇವರಕಾಡು ಗಿರಿಜನ ಕಾಲೋನಿಗಳಲ್ಲಿ ಕುಡಿಯುವ ನೀರು ಒದಗಿಸಬೇಕಿದೆ ಎಂದು ಅವರು ತಿಳಿಸಿದರು. ಯರವ ಮತ್ತು ಸೋಲಿಗ ಜನಾಂಗದವರಿಗೆ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಕಂಪ್ಯೂಟರ್ ತರಬೇತಿ, ಹೊಲಿಗೆ ತರಬೇತಿ, ಬ್ಯೂಟೀಷಿಯನ್ ತರಬೇತಿ, ಸಾರಣೆ, ಬಾರ್‍ಬೆಂಡಿಂಗ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮೋದನೆ ನಿಡಬೇಕಿದೆ ಎಂದರು. 

ಸೋಮವಾರಪೇಟೆ ತಾಲೂಕಿನಿಂದ 1 ಹಾಗೂ ವಿರಾಜಪೇಟೆ ತಾಲೂಕಿನಿಂದ 2 ಫಲಾನುಭವಿಗಳಿಗೆ ಶೇ.75ರ ಸಹಾಯಧನ ರೂ.3.33 ಲಕ್ಷದಂತೆ ರೂ.10 ಲಕ್ಷವನ್ನು ಟಾಟಾ ಗೂಡ್ಸ್ ಆಟೋ ವಿತರಣೆ ಮಾಡಲು ನಿಗಧಿಪಡಿಸಲಾಗಿದ್ದು, ವಿರಾಜಪೇಟೆ ತಾಲೂಕಿನ 2 ಫಲಾನುಭವಿಗಳು ನಿಗದಿಪಡಿಸಿರುವ ಸಹಾಯಧನದಲ್ಲಿ ಮಾರುತಿ ಓಮಿನಿ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಐಟಿಡಿಪಿ ಇಲಾಖೆ ಅಧಿಕಾರಿ ಅವರು ಸಭೆಯ ಗಮನಕ್ಕೆ ತಂದರು. 

ಜಿ.ಪಂ.ಸದಸ್ಯರು ಹಾಗೂ ಮಡಿಕೇರಿ ತಾಲೂಕು ಲ್ಯಾಂಪ್ ಸೊಸೈಟಿ ಅಧ್ಯಕ್ಷ ಕುಮಾರ, ವಿರಾಜಪೇಟೆ ತಾಲೂಕು ಲ್ಯಾಂಪ್ ಸೊಸೈಟಿ ಅಧ್ಯಕ್ಷ ರಾಮು ಅವರು ವಸತಿ ಕಾಮಗಾರಿಗಳ ಅನುಷ್ಠಾನ ಮತ್ತು ಯರವ ಮತ್ತು ಸೋಲಿಗ ಜನಾಂಗದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಬೇಕಿದೆ ಎಂದು ಅವರು ತಿಳಿಸಿದರು.  

ಜೇನುಕುರುಬರ ಸಮಾವೇಶ ಹಮ್ಮಿಕೊಳ್ಳಲು ಅನುದಾನ ನಿಗದಿಯಾಗಿದ್ದು, ಕಾರ್ಯಕ್ರಮ ಆಯೋಜನೆಗೆ ಸಹಕಾರಕ್ಕೆ ಎಸ್.ಎನ್.ರಾಜಾರಾವ್ ಅವರು ಕೋರಿದರು. ವಿರಾಜಪೇಟೆ ತಾಲೂಕು ಐಟಿಡಿಪಿ ಅಧಿಕಾರಿ ಚಂದ್ರಶೇಖರ, ಸೋಮವಾರಪೇಟೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶೇಖರ್ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News