ಟಾಟಾ ಏಸ್-ಬೈಕ್ ಮುಖಾಮುಖಿ ಢಿಕ್ಕಿ: ಬೈಕ್ ಸವಾರ ಮೃತ್ಯು

Update: 2018-12-22 17:33 GMT

ನಾಗಮಂಗಲ, ಡಿ.22: ಬೈಕ್ ಮತ್ತು ಟಾಟಾ ಏಸ್ ವಾಹನದ ನಡುವೆ ಮುಖಾಮುಖಿ ಢಿಕ್ಕಿಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ದಂಜಕ್ಕನಹಳ್ಳಿ ಗೇಟ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

ತಾಲೂಕಿನ ಕರಡಹಳ್ಳಿ ಗ್ರಾಮದ ಬಸವರಾಜು ಅವರ ಪುತ್ರ ಅಭಿಷೇಕ್(21) ಸಾವನ್ನಪ್ಪಿರುವ ಯುವಕ. ಇದೇ ಗ್ರಾಮದ ಕುಳ್ಳೇಗೌಡರ ಮಗ ರವಿಕುಮಾರ್(34) ಗಾಯಗೊಂಡಿದ್ದಾರೆ.

ರಾತ್ರಿ ಸುಮಾರು 7ರ ಸಮಯದಲ್ಲಿ ಕಾರ್ಯನಿಮಿತ್ತ ಕರಡಹಳ್ಳಿಯಿಂದ ನಾಗಮಂಗಲ ಕಡೆಗೆ ತೆರಳುತ್ತಿದ್ದ ವೇಳೆ ಮಂಡ್ಯಕ್ಕೆ ಹೋಗುತ್ತಿದ್ದ ಟಾಟಾ ಏಸ್ ವಾಹನ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದೆ. ತಕ್ಷಣವೇ ಸ್ಥಳೀಯರು ವಾಹನ ತಡೆದು ನಿಲ್ಲಿಸಿದ್ದಾರೆ.

ಗಾಯಗೊಂಡ ಅಭಿಷೇಕ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಮತ್ತು ಗಂಭೀರ ಗಾಯಗೊಂಡ ರವಿಕುಮಾರ್ ಗೆ ಪಟ್ಟಣದ ಜನರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ಸಂಬಂದ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News