ರಾಮಮಂದಿರ ಪರ ಘೋಷಣೆ: ರಾಜ್‌ನಾಥ್‌ಸಿಂಗ್ ಭಾಷಣಕ್ಕೇ ಅಡ್ಡಿ!

Update: 2018-12-24 03:42 GMT

ಲಕ್ನೋ, ಡಿ.24: "ರಾಮಮಂದಿರ ನಿರ್ಮಾಣವಾದರಷ್ಟೇ ಬಿಜೆಪಿಗೆ ನಮ್ಮ ಮತ" ಎಂಬ ಘೋಷಣೆಗಳನ್ನು ಕೂಗಿ ಗೃಹಸಚಿವ ರಾಜನಾಥ್ ಸಿಂಗ್ ಅವರ ಭಾಷಣಕ್ಕೆ ಸುಮಾರು ನಾಲ್ಕು ನಿಮಿಷ ಕಾಲ ಅಡ್ಡಪಡಿಸಿದ ಘಟನೆ ಲಕ್ನೋದಲ್ಲಿ ರವಿವಾರ ನಡೆದಿದೆ.

ಲಕ್ನೋದಿಂದ ಲೋಕಸಭೆಗೆ ಆಯ್ಕೆಯಾಗಿರುವ ರಾಜ್‌ನಾಥ್ ಸಿಂಗ್ ತಮ್ಮ ಸ್ವಕ್ಷೇತ್ರದಲ್ಲಿ ಯುವ ಕುಂಭ ಸಮಾರಂಭದಲ್ಲಿ ಭಾಷಣ ಆರಂಭಿಸುತ್ತಿದ್ದಂತೆ ಈ ಮುಜುಗರದ ಸನ್ನಿವೇಶ ಎದುರಿಸುವಂತಾಯಿತು. ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ರಾಮಮಂದಿರ ಪರ ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದರು.

"ಜೋ ಮಂದಿರ್ ಬನ್ವಾಯೇಗಾ ವೋಟ್ ಉಸ್ಸಿ ಕೋ ಜಾಯೇಗಾ" (ಯಾವ ಪಕ್ಷ ರಾಮಮಂದಿರ ನಿರ್ಮಾಣ ಮಾಡುತ್ತದೆಯೋ ಆ ಪಕ್ಷಕ್ಕೆ ನಮ್ಮ ಮತ) ಎಂಬ ಘೋಷಣೆ ಇಡೀ ಸಭಾಂಗಣದಲ್ಲಿ ಮಾರ್ದನಿಸಿತು.

ಸಂಘಟಕರು ಸಭಿಕರಿಗೆ ಸುಮ್ಮನಿದ್ದು, ರಾಜನಾಥ್ ಸಿಂಗ್ ಭಾಷಣ ಆಲಿಸುವಂತೆ ಮಾಡಿಕೊಂಡ ಮನವಿ ಕೂಡಾ ಫಲ ನೀಡಲಿಲ್ಲ. ಬಳಿಕ ರಾಜ್‌ನಾಥ್ ತಮ್ಮ ಭಾಷಣ ನಿಲ್ಲಿಸಿ, ಸಭಿಕರು ನಿಶ್ಶಬ್ದ ಕಾಪಾಡಿದರಷ್ಟೇ ಭಾಷಣ ಮುಂದುವರಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News