ಶಿಕ್ಷಣ ಸಂಸ್ಥೆಗಳು ಮತೀಯ ಮತ್ತು ಜಾತೀಯ ಗುಣವನ್ನು ತೊಡೆಯಬೇಕು: ಅರವಿಂದ ಮಾಲಗತ್ತಿ

Update: 2019-01-07 17:59 GMT

ಮ್ರೈಸೂರು,ಜ.7: ಸಾಮಾಜಿಕ ಸಮಾನತೆ ತರಬೇಕೆಂದು ಹೇಳಿದರೆ ಸಾಲದು, ನಮ್ಮೊಳಗಡೆ ಇರುವ ಮತೀಯ ಮತ್ತು ಜಾತೀಯ ಗುಣವನ್ನು ಎಲ್ಲಿಯವರೆಗೆ ಶೈಕ್ಷಣಿಕ ಸಂಸ್ಥೆಗಳು ತೊಡೆಯುವುದಿಲ್ಲವೋ ಅಲ್ಲಿಯವರೆಗೆ ವಸ್ತುನಿಷ್ಠ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬಿಎಂಶ್ರೀ ಸಭಾಂಗಣದಲ್ಲಿ ಸೋಮವಾರ  “ಪುನಶ್ಚೇತನ” ವಿಮರ್ಶಾ ಲೇಖನಗಳ ಸಂಗ್ರಹದ ಕೃತಿಯನ್ನು ಲೋಕಾರ್ಪಣೆ, “ಕನ್ನಡ ಸಾಹಿತ್ಯ : ಬೋಧನೆ ಮತ್ತು ಸಂಶೋಧನೆಯ ಹೊಸ ಸಾಧ್ಯತೆಗಳು” ರಾಷ್ಟ್ರೀಯ ವಿಚಾರ ಸಂಕಿರಣ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಜಾತೀಯ ಮತ್ತು ಮತೀಯ ಗುಣವನ್ನು ತೊಡೆಯದಿದ್ದಲ್ಲಿ ವೈದ್ಯರ ರೀತಿ ಕೆಲಸ ಮಾಡುವ ಅಧ್ಯಾಪಕರು ವೈದ್ಯಕೀಯತನದಲ್ಲಿ ಸೋಲುವುದು ಖಚಿತ ಎಂದರು. ಸಂವಿಧಾನದ ನೀತಿ, ಧಾರ್ಮಿಕ ಸಂವಿಧಾನದ ನೀತಿ ಎರಡೂ ಜೊತೆಯಾಗಿ ಹೋಗಬೇಕು. ಆದರೆ ಅವೆರಡೂ ಜೊತೆಯಾಗಿ ಹೋಗುತ್ತಿಲ್ಲ. ಸಾಮಾಜಿಕ ಸಮಾನತೆ ಸಾಧಿಸದೇ ಹೋದರೆ ಸಾಮಾಜಿಕ ದಂಗೆಯಾಗಲಿದೆ. ಶಿಕ್ಷಣ ಸಂಸ್ಥೆಗಳು ಜನತೆಯ ಶಿಕ್ಷಣ ಸಂಸ್ಥೆಗಳಾಗಬೇಕಾದರೆ ಜಾತಿ ಜನಾಂಗದಿಂದ ಹೊರತಾಗಿ ಕೆಲಸ ಮಾಡಬೇಕು ಎಂದು ಡಾ.ಅಂಬೇಡ್ಕರ್ ತಿಳಿಸಿದ್ದರು ಎಂದರು. 

ವಿಶ್ವವಿದ್ಯಾನಿಲಯಗಳು ಹೇಗಿರಬೇಕು ಎಂಬುದನ್ನು ಅಂಬೇಡ್ಕರ್ ಅವರು ವಿವರಿಸಿದ್ದಾರೆ. ಬೋಧಕ ವಿವಿ ಬೇರೆ, ಬೋಧಕರ ವಿವಿ ಬೇರೆ, ಬೋಧಕ ವಿವಿಯಲ್ಲಿ ಅಲ್ಲಿನ ಆಡಳಿತವೇ ವಿವಿಯನ್ನು ನಡೆಸುವಂತದ್ದು, ಅಲ್ಲಿನ ಶಿಕ್ಷಣ ಯಾಂತ್ರಿಕ. ಕೊಟ್ಟಿದ್ದನ್ನಷ್ಟೇ ಬೋಧಿಸುವುದು, ಆದರೆ ಬೋಧಕರ ವಿವಿಯಲ್ಲಿ ಆಡಳಿತ ಮತ್ತು ಶಿಕ್ಷಣ ಪರಸ್ಪರ ಸಹಯೋಗದೊಂದಿಗೆ ನಡೆಸಿಕೊಂಡು ಹೋಗುವ ಶಿಕ್ಷಣ ಕ್ರಮ. ಇವರಿಬ್ಬರ ಸಮಾಗಮದ ಪ್ರಕ್ರಿಯೆಯ ಶಿಕ್ಷಣ ಸಂಸ್ಥೆಗಳು ರೂಪುಗೊಂಡಾಗ ಅವು ಹೆಚ್ಚು ಕ್ರೀಯಾಶೀಲವಾಗುತ್ತವೆ. ಯಾವಾಗಲೂ ತನ್ನತನವನ್ನು ಉಳಿಸಿಕೊಳ್ಳುವ ಶಿಕ್ಷಣ ಸಂಸ್ಥೆಗಳಾಗುತ್ತವೆ ಎಂದು ತಿಳಿಸಿದರು.

ಆದರೆ ಇತ್ತೀಚಿನ ದಿನಗಳಲ್ಲಿ ವಿವಿಗಳು ಶಿಕ್ಷಣದ ಪ್ರಾಯೋಗಿಕ ಶಾಲೆಗಳಾಗಿವೆಯೇನೋ ಎಂಬ ಆತಂಕವನ್ನು ವ್ಯಕ್ತಪಡಿಸಿದರು. ಮಾಧ್ಯಮಗಳು ಸಂಚಲನವನ್ನು ನಿಯಂತ್ರಿಸುವುದು ಬಿಟ್ಟು ಕರ್ನಾಟಕದ ಸುದ್ದಿಗಳು ಕರ್ನಾಟಕದಾದ್ಯಂತ ವಿಸ್ತರಿಸುವಂತೆ ಮಾಡಬೇಕು ಎಂದರು.

ಕೃತಿಯನ್ನು ಬಿಡುಗಡೆಗೊಳಿಸಿದ ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಮಾತನಾಡಿ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಅಧ್ಯಾಪಕ ಪಾತ್ರ ಪ್ರಮುಖ. ಮಕ್ಕಳ ಮತ್ತು ಯುವ ಸಮುದಾಯದ ಬದುಕಿನ ಶಿಲ್ಪಿಗಳು ಶಿಕ್ಷಕರೇ. ನಮ್ಮ ಸಮಾಜ ಅವರಿಂದಲೇ ಬಹಳಷ್ಟು ಸೇವೆಗಳನ್ನು ನಿರೀಕ್ಷಿಸುತ್ತದೆ. ಈ ಹಿನ್ನೆಲೆಯಲ್ಲಿ ಅಧ್ಯಾಪಕರ ಸಮುದಾಯದ ಮೇಲೆ ಜವಾಬ್ದಾರಿಯಿದೆ ಎನ್ನುವುದನ್ನು ಮರೆಯುವಂತಿಲ್ಲ. ಆಳವಾದ ಅಧ್ಯಯನ, ಬರವಣಿಗೆ ಮತ್ತು ಚಟುವಟಿಕೆಗಳು ಅಧ್ಯಾಪಕರ ಬೋಧನಾ ಸಾಮರ್ಥ್ಯವನ್ನು ವೃದ್ಧಿಸುತ್ತವೆ. ವಿದ್ಯಾರ್ಥಿಗಳ ಜ್ಞಾನದಾಹವನ್ನು ನೀಗಿಸುತ್ತವೆ. ಅಧ್ಯಾಪಕ ವರ್ಗದ ಮುಖ್ಯ ಗುರಿ ಕರ್ತವ್ಯ. ಈ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಿರುವುದು ಅನಿವಾರ್ಯವೂ ತುರ್ತು ಕ್ರಮವೂ ಆಗಿದೆ ಎಂದರು.

ಈ ಸಂದರ್ಭ ಶ್ರೀಮುರುಘಾಮಠ ಶೂನ್ಯ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾಶರಣರು, ವಿಶ್ರಾಂತ ಪ್ರಾಧ್ಯಾಪಕ, ಪ್ರೊ.ಎನ್.ಎಸ್.ತಾರಾನಾಥ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ, ಕೃತಿಯ ಪ್ರಧಾನ ಸಮಪಾದಕ ಪ್ರೊ.ನೀಲಗಿರಿ ತಳವಾರ್, ಕೃತಿಯ ಸಂಪಾದಕರಾದ ಡಾ.ಸಿ.ಟಿ.ಜಯಣ್ಣ, ಡಾ.ಜಿ.ಎಸ್.ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News