ಯುವಜನತೆಗೆ ಪಕೋಡಾ ಮಾರುವಂತೆ ಹೇಳಿದ ಪ್ರಧಾನಿ ಈಗ ಮೀಸಲಾತಿ ಘೋಷಿಸಿದ್ದಾರೆ: ಶಿವಸೇನೆ ವ್ಯಂಗ್ಯ

Update: 2019-01-10 07:38 GMT

ಮುಂಬೈ, ಜ.10: ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ ಸರಕಾರಿ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಶೇ.10 ಮೀಸಲಾತಿಯೊದಗಿಸಲು ಸಂವಿಧಾನ ತಿದ್ದುಪಡಿಗೆ ಸಂಸತ್ತು ಅನುಮೋದನೆ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಶಿವಸೇನೆ, ಈ ಕ್ರಮ ಮೋದಿ ಸರಕಾರಕ್ಕೆ ದುಬಾರಿಯಾಗಲಿದೆ ಎಂದು ಎಚ್ಚರಿಸಿದೆ.

“ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೂ ಮೀಸಲಾತಿ ನೀಡಲಾಗಿದೆ. ಆದರೆ ಉದ್ಯೋಗಗಳೆಲ್ಲಿ?” ಎಂದು ಸೇನೆ ಪ್ರಶ್ನಿಸಿದೆ. ``ಯುವಜನರಿಗೆ ಪಕೋಡಾ ಮಾರುವಂತೆ ಹೇಳಿದ ಪ್ರಧಾನಿ ಅಂತಿಮವಾಗಿ ಆರ್ಥಿಕವಾಗಿ ದುರ್ಬಲರಿಗೆ ಶೇ 10 ಮೀಸಲಾತಿ ನೀಡುವಂತಾಯಿತು'' ಎಂದು ಶಿವಸೇನೆ ತನ್ನ ಮುಖವಾಣಿ  ಸಾಮ್ನಾದ ಸಂಪಾದಕೀಯದಲ್ಲಿ ಮಾರ್ಮಿಕವಾಗಿ ಬರೆದಿದೆ.

``ಅಧಿಕಾರದಲ್ಲಿರುವವರು  ಉದ್ಯೋಗ ಸೃಷ್ಟಿ ಮತ್ತು ಬಡತನ ನಿವಾರಣೆಯಲ್ಲಿ ವಿಫಲರಾದಾಗ ಅವರು ಮೀಸಲಾತಿ ಮೂಲಕ ಜನರ ವಿಶ್ವಾಸ ಸಂಪಾದಿಸಲು ಯತ್ನಿಸುತ್ತಾರೆ'' ಎಂದು ಶಿವಸೇನೆ ಆರೋಪಿಸಿದೆ.

“ಈ ನಿರ್ಧಾರವನ್ನು ಮತಗಳ ಮೇಲೆ ಕಣ್ಣಿರಿಸಿ ತೆಗೆದುಕೊಳ್ಳಲಾಗಿದ್ದರೆ ಅದು ದುಬಾರಿಯಾಗಿ ಪರಿಣಮಿಸುವುದು. ಶೇ 10 ಮೀಸಲಾತಿ ನಂತರ ಅರ್ಹ ಯುವಜನತೆಗೆ ಏನಾದರೂ ಲಾಭವಿದೆಯೇ?. ದೇಶದಲ್ಲಿನ ಉದ್ಯೋಗ ಪ್ರಮಾಣದಲ್ಲಿ ಸಮತೋಲನ ಸಾಧಿಸಲು ಪ್ರತಿ ವರ್ಷ ಸುಮಾರು 80ರಿಂದ 90 ಲಕ್ಷ ಹೊಸ ಉದ್ಯೋಗಾವಕಾಶಗಳ ಅಗತ್ಯವಿದೆ. ಕಳೆದ ಎರಡು ವರ್ಷಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುವ ಬದಲು ಕಡಿಮೆಯಾಗಿವೆ. ಅಮಾನ್ಯೀಕರಣ ಮತ್ತು ಜಿಎಸ್‍ಟಿಯಿಂದಾಗಿ 1.5 ಕೋಟಿಯಿಂದ 2 ಕೋಟಿ ತನಕ ಉದ್ಯೋಗ ನಷ್ಟವಾಗಿವೆ. ಯುವಜನತೆಯಲ್ಲಿ ಅಸಹಾಯಕತೆಯ ಭಾವನೆಯಿದೆ'' ಎಂದು ಸಂಪಾದಕೀಯ ತಿಳಿಸಿದೆ.

“2018ರಲ್ಲಿ ರೈಲ್ವೆಯಲ್ಲಿ 90 ಲಕ್ಷ ಉದ್ಯೋಗಗಳಿಗೆ 2.8 ಕೋಟಿ ಜನರು ಅರ್ಜಿ ಸಲ್ಲಿಸಿದ್ದರು. ಮುಂಬೈ ಪೊಲೀಸ್ ಇಲಾಖೆಯ 1,137 ಹುದ್ದೆಗಳಿಗೆ  ನಾಲ್ಕು ಲಕ್ಷಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದರೆ ಹಲವಾರು ಮಂದಿಗೆ ಅಗತ್ಯಕ್ಕಿಂತ ಹೆಚ್ಚು ಶೈಕ್ಷಣಿಕ ಅರ್ಹತೆಯಿತ್ತು'' ಎಂದು ಶಿವಸೇನೆ ನೆನಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News