ಮೋದಿ-ಶಾ ಅವರ ಮಾಫಿಯಾ ರಾಜ್ ಕೊನೆಗೊಳಿಸುವ ಕಾಲ ಸನ್ನಿಹಿತ: ದಿನೇಶ್‌ ಗುಂಡೂರಾವ್

Update: 2019-01-16 13:45 GMT

ಬೆಂಗಳೂರು, ಜ.16: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಬೀಳಿಸಲು ಅತೃಪ್ತ ಶಾಸಕರಿಗೆ ಗಾಳ ಹಾಕಿರುವ ಬಿಜೆಪಿ ಕನಸು ಭಗ್ನವಾಗಲಿದೆ. ನಮ್ಮ ಸರಕಾರ ಸ್ಥಿರವಾಗಿರಲಿದೆ ಎಂದು ಕರ್ನಾಟಕದ ಜನರಿಗೆ ನಾನು ಭರವಸೆ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವಿಟ್ ಮಾಡಿದ್ದಾರೆ.

ರಾಜ್ಯದಲ್ಲಿ ಕಳೆದೆರಡು ಮೂರು ದಿನಗಳಿಂದ ನಡೆಯುತ್ತಿರುವ ಆಪರೇಷನ್ ಕಮಲ ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದಿನೇಶ್ ಗುಂಡೂರಾವ್, ಮಾಧ್ಯಮಗಳು ಮೈತ್ರಿ ಸರಕಾರದ ಸ್ಥಿರತೆ ಬಗ್ಗೆ ಪ್ರಶ್ನಿಸುವ ಬದಲು, ಬಿಜೆಪಿ ಸರಕಾರ ಉರುಳಿಸಲು ಬಳಸುತ್ತಿರುವ ವಾಮಮಾರ್ಗದ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ. ಬಿಜೆಪಿ ಬಗ್ಗೆ ಯಾಕಿಷ್ಟು ಮೃದು ಧೋರಣೆ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ಸರಕಾರ ಸುಭದ್ರವಾಗಿದ್ದು, ನಮ್ಮ ಪಕ್ಷದ ಒಬ್ಬ ಶಾಸಕರು ಯಾರು ಕೂಡ ರಾಜೀನಾಮೆ ನೀಡುವುದಿಲ್ಲ. ಅಮಿತ್ ಶಾ, ಯಡಿಯೂರಪ್ಪ, ಅವರು ತಮ್ಮ ಭ್ರಷ್ಟ, ಅನೈತಿಕ, ಅಸಂವಿಧಾನಿಕ ವಿಧಾನವನ್ನು ಬಳಸಿಕೊಂಡು ನಮ್ಮ ಸರಕಾರವನ್ನು ಅಸ್ಥಿರಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಆದರೆ, ಅವರ ಈ ದುರುದ್ಧೇಶ ಈಡೇರುವುದಿಲ್ಲ. ಮೋದಿ-ಶಾ ಅವರ ಮಾಫಿಯಾ ರಾಜ್ ಕೊನೆಗೊಳಿಸುವ ಕಾಲ ಸನ್ನಿಹಿತವಾಗಿದೆ ಎಂದು ಅವರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳು ತನ್ನ ವಿಚಾರದಲ್ಲಿ ಕೆಲವು ಊಹಾಪೋಹಾ ಸುದ್ದಿಗಳನ್ನು ಹರಿಬಿಡುತ್ತಿವೆ. ಇದು ನಿಜಕ್ಕೂ ದುರಾದೃಷ್ಟಕರ ಎಂದಿದ್ದಾರೆ. ಅತೃಪ್ತರನ್ನು ಸಂಪರ್ಕಿಸಿಲ್ಲ ಎಂದು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನನ್ನನ್ನು ತರಾಟೆಗೆ ತೆಗೆದುಕೊಂಡರು ಎಂಬ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿವೆ. ಆದರೆ ಕಾಂಗ್ರೆಸ್ ಸಭೆಯಲ್ಲಿ ಈ ರೀತಿಯ ಘಟನೆಗಳು ಯಾವುದೇ ನಡೆದಿಲ್ಲ. ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಯಾರೋ ಈ ರೀತಿ ಸುಳ್ಳು ಸುದ್ದಿ ಪ್ರಕಟಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News