ಸಮಪರ್ಕ ಬರ ನಿರ್ವಹಣೆಗೆ ಸಚಿವ ದೇಶಪಾಂಡೆ ಸೂಚನೆ

Update: 2019-01-29 15:56 GMT

ಬೆಳಗಾವಿ, ಜ.29: ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ, ಕುಡಿಯುವ ನೀರಿನ ಸಮಸ್ಯೆ, ಜನರು ಗುಳೆ ಹೋಗುವಂತಹ ಸಮಸ್ಯೆಗಳಿದ್ದು, ಎಲ್ಲ ಅಧಿಕಾರಿಗಳು ಕ್ರೀಯಾಶೀಲವಾಗಿ ಬರ ನಿರ್ವಹಣೆಯ ಕೆಲಸ ಮಾಡಬೇಕಾಗುತ್ತದೆ ಎಂದು ಬರ ಅಧ್ಯಯನ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಮಂಗಳವಾರ ಜಿಲ್ಲೆಯ ಆಯ್ದ ಬರಪೀಡಿತ ಪ್ರದೇಶಗಳ ವಸ್ತುಸ್ಥಿತಿ ಅಧ್ಯಯನ ನಡೆಸಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿದ ಹಾನಿ ಹಾಗೂ ಬರ ನಿರ್ವಹಣೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.

ಮುಂದಿನ ಏಳು ದಿನಗಳಲ್ಲಿ ಹೆಚ್ಚು ಇಳುವರಿ ಇರುವ ಕೊಳವೆ ಬಾವಿಗಳನ್ನು ಗುರುತಿಸಿಕೊಳ್ಳಬೇಕು. ಕೊಳವೆ ಬಾವಿ ಮಾಲಕರೊಂದಿಗೆ ಒಪ್ಪಂದ ಮಾಡಿಕೊಂಡು ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲ ತಹಶೀಲ್ದಾರರಿಗೆ ಅವರು ಸೂಚನೆ ನೀಡಿದರು.

ಬರಪೀಡಿತ ತಾಲೂಕುಗಳಲ್ಲಿ ನೂರು ದಿನಗಳಿಂದ ನೂರಾ ಐವತ್ತು ದಿನಗಳಿಗೆ ಕೆಲಸ ನೀಡಲು ಆದೇಶ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಂಡು ಜನರಿಗೆ ಸ್ಥಳೀಯವಾಗಿ ಕೆಲಸ ನೀಡಬೇಕು ಎಂದು ದೇಶಪಾಂಡೆ ತಿಳಿಸಿದರು. ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಗ್ರಾಮವಾರು ಕಡ್ಡಾಯವಾಗಿ ಪ್ರವಾಸಮಾಡಬೇಕು. ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಬೇಕು. ಬರ ನಿರ್ವಹಣೆಗೆ ತ್ವರಿತವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಲೂಕಾವಾರು ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ, ಜನರಿಗೆ ಉದ್ಯೋಗ ಕಲ್ಪಿಸುವ ಕುರಿತಂತೆ ಚರ್ಚಿಸಿ ಕ್ರಮವಹಿಸಬೇಕು. ಬರ ಪರಿಹಾರಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ. ನೀವು ಬೇಡಿಕೆ ಸಲ್ಲಿಸಿದರೆ ಅನುದಾನ ಒದಗಿಸಲಾಗುವುದು ಎಂದು ಅವರು ಹೇಳಿದರು.

ಪ್ರತಿ ಜಿಲ್ಲಾಡಳಿತಕ್ಕೆ ಕುಡಿಯುವ ನೀರು ನಿರ್ವಹಣೆಗಾಗಿ ಕನಿಷ್ಠ ಐದು ಕೋಟಿ ರೂ. ಅನುದಾನ ಲಭ್ಯವಿರುವಂತೆ ಬಿಡುಗಡೆ ಮಾಡಲಾಗಿದೆ. ಪ್ರತಿ ತಾಲೂಕು ಆಡಳಿತದಲ್ಲಿ 25 ರಿಂದ 40 ಲಕ್ಷ ರೂ.ವರೆಗೆ ಅನುದಾನ ಲಭ್ಯವಿರುದಾಗಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಾಹಿತಿ ಒದಗಿಸಿದ್ದಾರೆ. ಜನರಿಗೆ ತೊಂದರೆಯಾಗದಂತೆ ಬರ ನಿರ್ವಹಣೆ ಮಾಡಿ ಎಂದು ದೇಶಪಾಂಡೆ ಸಲಹೆ ನೀಡಿದರು.

ಕಳೆದ 18 ವರ್ಷದಲ್ಲಿ 14 ವರ್ಷಗಳ ಕಾಲ ರಾಜ್ಯ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬರ ಪರಿಸ್ಥಿತಿ ನಿರ್ವಹಣೆಯ ಇತಿಹಾಸದ ಆಧಾರದ ಮೇಲೆ ಸಮಸ್ಯಾತ್ಮಕ ಹಳ್ಳಿಗಳು ಯಾವುವು, ಯಾವ ಕಾಲದಲ್ಲಿ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ಮೊದಲೆ ನಿಮಗೆ ತಿಳಿದಿರುತ್ತದೆ. ಈ ಕುರಿತಂತೆ ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ಸಮಸ್ಯೆ ಎದುರಾಗುವ ಮುನ್ನವೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಅವರು ಹೇಳಿದರು.

ಮುಂಗಾರು ಹಂಗಾಮಿನಲ್ಲಿ 16,600 ಕೋಟಿ ರೂ. ಬೆಳೆ ನಷ್ಟವಾಗಿರುವ ಕುರಿತಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮಾರ್ಗಸೂಚಿಯಂತೆ 2,434 ಕೋಟಿ ರೂ. ಪರಿಹಾರವನ್ನು ಕೇಳಿದ್ದೇವೆ. ಆದರೆ, ಕೇವಲ 949.49 ಕೋಟಿ ರೂ.ಗಳನ್ನು ಮಾತ್ರ ನೀಡಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News