ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣ: ಬಿಜೆಪಿ ನಾಯಕ, ಪುತ್ರ ಸಹಿತ 7 ಮಂದಿ ಸೆರೆ

Update: 2019-02-01 11:05 GMT

ಭೋಪಾಲ್, ಫೆ.1: ಮಧ್ಯ ಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಬಿಜೆಪಿ ಸದಸ್ಯನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕ, ಆತನ ಪುತ್ರ ಮತ್ತು ಐದು ಮಂದಿ ಇತರರನ್ನು ಬಂಧಿಸಲಾಗಿದೆ.

ಬಿಜೆಪಿಯ ಮಂಡಲ ಘಟಕದ ಅಧ್ಯಕ್ಷರಾಗಿದ್ದ ಮನೋಜ್ ಠಾಕ್ರೆ (42) ಎಂಬವರ ಮೃತದೇಹ ಅವರ ಹುಟ್ಟೂರಾದ ಬಾಲ್ವಾಡಿಯ ಗದ್ದೆಯಲ್ಲಿ ಜನವರಿ 20ರಂದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪೊಲೀಸರ ಪ್ರಕಾರ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ತಾರಾಚಂದ್ ರಾಥೋರ್, ಆತನ ಪುತ್ರ ದಿಗ್ವಿಜಯ್ ಸಿಂಗ್ ರಾಥೋರ್ ಸಹಿತ ಹತ್ತು ಮಂದಿ ಈ ಕೊಲೆಯಲ್ಲಿ ಶಾಮೀಲಾಗಿದ್ದಾರೆ. ಮೂರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗೆ ಬಲೆ ಬೀಸಲಾಗಿದೆ.

ತಾರಾಚಂದ್ ಮತ್ತಾತನ ಪುತ್ರ ಇತ್ತೀಚೆಗೆ ಮನೋಜ್ ಗೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಬೆದರಿಕೆ ಹಾಕಿದ್ದರೆನ್ನಲಾಗಿದ್ದು  ಅನಿಲ್ ಸಿಂಗ್ ಎಂಬಾತನಿಗೆ ಸುಪಾರಿ ಹಣವಾದ ರೂ 50,000 ನೀಡಿ ಈ ಕೊಲೆ ನಡೆಸಲಾಗಿದೆಯೆಂದು ಬರ್ವಾನಿ ಎಸ್‍ಪಿ ಯಾಂಗ್ಚೆನ್ ಡೋಲ್ಕರ್ ಭುಟಿಯಾ ಹೇಳಿದ್ದಾರೆ. ಆರೋಪಿಗಳು ಕಲ್ಲಿನಿಂದ ಹೊಡೆದು ಮನೋಜ್ ನನ್ನು ಸಾಯಿಸಿದ್ದರು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News