ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಭಾವ ವ್ಯಕ್ತವಾಗುತ್ತಿದೆ: ಡಾ.ಎಚ್.ಸಿ.ಮಹದೇವಪ್ಪ

Update: 2019-02-02 17:24 GMT

ಮೈಸೂರು,ಫೆ.2: ರಾಜ್ಯದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂಬ ಭಾವ ನನಗೆ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಸುತ್ತೂರು ಜಾತ್ರಾಮಹೋತ್ಸವದ ಭಜನಾ ಮೇಳದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ನನಗೆ ಅನ್ನಿಸುತ್ತಿದೆ. ಹಲವು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿರುವುದರಲ್ಲಿ ತಪ್ಪೇನಿಲ್ಲ, ಸಂಖ್ಯಾಬಲದ ಕೊರತೆಯಿಂದ ಮುಖ್ಯಮಂತ್ರಿಯಾಗಿಲ್ಲ. ಕಾಂಗ್ರೆಸ್ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಅಷ್ಟೆ. ಎರಡೂ ಪಕ್ಷಗಳು ಮತ್ತು ನಾಯಕರುಗಳಲ್ಲಿ ಸಮನ್ವಯತೆ ಇರಬೇಕು. ಹಾಗಾಗಿ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರೇ ಹಾಲಿ ಮುಖ್ಯಮಂತ್ರಿಗಳು ಎಂದು ಹೇಳಿದರು.

ಸಿದ್ದರಾಮಯ್ಯ ಆಶೀರ್ವಾದ ಪಡೆದ ನಟ ದರ್ಶನ್
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ನಟ ದರ್ಶನ್ ಆಶೀರ್ವಾದ ಪಡೆದರು. ಸುತ್ತೂರು ಜಾತ್ರಾಮಹೋತ್ಸವದ ಭಜನಾ ಮೇಳದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ವೇದಿಕೆ ಮೇಲಿದ್ದ ಸಿದ್ದರಾಮಯ್ಯ ಅವರ ಬಳಿ ಹೋಗಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಅವರು, ಜೆ.ಎಸ್.ಎಸ್ ಸಂಸ್ಥೆಯ ವಿದ್ಯಾರ್ಥಿ ನಾನು, ನಮ್ಮ ತಂದೆ ಆನಾರೋಗ್ಯಕ್ಕೆ ತುತ್ತಾದ ವೇಳೆ ನಾನು ಜೆ.ಎಸ್.ಎಸ್. ಶಾಲೆಗೆ ಸೇರಿ ವಿದ್ಯಾಭ್ಯಾಸ ಮಾಡಿದೆ. ಆ ಸಂದರ್ಭದಲ್ಲಿ ಸುತ್ತೂರು ಸ್ವಾಮಿಗಳು ನಮಗೆ ಸಹಾಯ ಮಾಡಿದರು ಎಂದು ಭಾವುಕರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News