ಹಕ್ಕು ಪತ್ರ ವಿತರಣೆಗೆ ಬಹುಜನ ಕಾರ್ಮಿಕ ಸಂಘ ಆಗ್ರಹ: ಫೆ.8 ರಂದು ಪ್ರತಿಭಟನೆ

Update: 2019-02-04 11:05 GMT

ಮಡಿಕೇರಿ, ಫೆ.4 : ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೆಮಾಡು ಸೇರಿದಂತೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಜಾಗ ಮಂಜೂರಾತಿ ಕೋರಿ ಸಲ್ಲಿಕೆಯಾಗಿರುವ ಸಾವಿರಾರು 94ಸಿ ಮತ್ತು 94ಸಿಸಿ ಅರ್ಜಿಗಳು ತಾಲೂಕು ಕಚೇರಿಗಳಲ್ಲಿ ಧೂಳು ಹಿಡಿಯುತ್ತಾ ಬಿದ್ದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಬಹುಜನ ಕಾರ್ಮಿಕರ ಸಂಘ, ಅರ್ಜಿಗಳ ಶೀಘ್ರ ವಿಲೇವಾರಿಗೆ ಆಗ್ರಹಿಸಿ ಫೆ.8ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮೊಣ್ಣಪ್ಪ, ರಾಜ್ಯದ ಕಂದಾಯ ಇಲಾಖೆಯು 2014ರಲ್ಲಿ ಗ್ರಾಮೀಣ ನಿವಾಸಿಗಳಿಗೆ 94ಸಿಸಿ ಆದೇಶ ಜಾರಿಗೆ ತಂದು 5 ವರ್ಷ ಪೂರ್ಣಗೊಂಡಿದ್ದರೂ, 94ಸಿ ಮತ್ತು 94ಸಿಸಿ ಯಡಿ 2014ರಲ್ಲಿ ಸಲ್ಲಿಕೆಯಾಗಿರುವ ಅದೆಷ್ಟೋ ಅರ್ಜಿಗಳು ಇನ್ನೂ ಕೂಡ ಇತ್ಯರ್ಥವಾಗದೆ ಹಾಗೆಯೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೊದ್ದೂರು ಪಂಚಾಯತ್ ವ್ಯಾಪ್ತಿಯ ಪಾಲೆಮಾಡು ಕಾನ್ಶಿರಾಂ ನಗರದ ಸುಮಾರು 150 ಮಂದಿ ನಿವೇಶನ ಮಂಜೂರಾತಿಗಾಗಿ 94ಸಿ ಅರ್ಜಿಗಳನ್ನು ಸಲ್ಲಿಸಿದ್ದರು, ಇಲ್ಲಿವರೆಗೂ ಜಾಗ ಮಂಜೂರಾಗಿಲ್ಲ. ಅರ್ಜಿ ಸಲ್ಲಿಸಿದ ಫಲಾನುಭವಿಗಳು ಕಚೇರಿಗಳಿಗೆ ಅಲೆದು ಬೇಸತ್ತು ಹೋಗಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಕಚೇರಿ ಅಧಿಕಾರಿಗಳೊಂದಿಗೆ ಈ ಬಗ್ಗೆ ವಿಚಾರಿಸಿದಾಗ, ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಮನೆ ನಿರ್ಮಾಣದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಹಕ್ಕುಪತ್ರಗಳಿಗೆ ಸಂಬಂಧಿಸಿದ ಕೆಲಸ ನಡೆಯುತ್ತಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಡವರ ಪರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದ ಅವರು, ಕೊಡಗಿನ ಜನ ಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮುಂದಿನ ಐದು ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಫೆ.8 ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. 

ಪಾಲೆಮಾಡುವಿನಲ್ಲಿ ಕಳೆದ 10 ವರ್ಷಗಳಿಂದ ಸ್ಮಶಾನ ಜಾಗಕ್ಕಾಗಿ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಸ್ಮಶಾನ ಜಾಗದ ಆರ್‍ಟಿಸಿಯಲ್ಲಿ ನಮೂದಾಗಿದ್ದ ‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ’ 2 ಏಕರೆ ಸ್ಮಶಾನ ಜಾಗ ಇದೆ ಎನ್ನುವುದನ್ನು ಉಪ ವಿಭಾಗಾಧಿಕಾರಿಗಳು ತೆಗೆದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ಸರ್ಕಾರದ ಆದೇಶದಂತೆ ಮಾಡಲಾಗಿದೆ ಎಂದು ಉತ್ತರ ನೀಡಿದ್ದಾರೆ, ಆದರೆ ಯಾವುದೇ ದಾಖಲೆಯನ್ನು ನೀಡಿಲ್ಲ. ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್ ರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಕರ್ತವ್ಯಲೋಪ ಎಸಗಿರುವ ಉಪ ವಿಭಾಗಾಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಮೊಣ್ಣಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಹೊದ್ದೂರು ಗ್ರಾ.ಪಂ. ಉಪಾಧ್ಯಕ್ಷರಾದ ಪಿ.ಎ. ಕುಸುಮಾವತಿ, ಪಾಲೆಮಾಡು ಮಾಯಾದೇವಿ ಮಹಿಳಾ ಸಂಘದ ಸದಸ್ಯರಾದ ಬೋಜಮ್ಮ, ಯಶೋಧ, ಮಾಯದೇವಿ ಮಹಿಳಾ ಸಂಘದ ಸಲಹೆಗಾರರಾದ ಲಕ್ಷ್ಮಿ ಹಾಗೂ ಕಾರ್ಯದರ್ಶಿ ವೀಣಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News