ಮಡಿಕೇರಿಯಲ್ಲಿ ಎಸ್ಸೆಸ್ಸೆಫ್ 'ಹಿಂದ್ ಸಫರ್' ಸಮಾವೇಶ

Update: 2019-02-06 11:46 GMT

ಮಡಿಕೇರಿ, ಫೆ.6 : ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಇದರ ಸಾಕ್ಷರತೆ ಮತ್ತು ಸಹಿಷ್ಣುತೆಯ ಭಾರತಕ್ಕಾಗಿ 'ಹಿಂದ್ ಸಫರ್' ಭಾರತ ಯಾತ್ರೆಯ ಸ್ವಾಗತ ಕಾರ್ಯಕ್ರಮವು ಬುಧವಾರ ಮಡಿಕೇರಿಯ ಬಾಲ ಭವನದಲ್ಲಿ ನಡೆಯಿತು.

ಸಮಾರಂಭದಲ್ಲಿ ಮಾತನಾಡಿದ ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಸಿದ್ದೀಕ್ ಮೋಂಟುಗೋಳಿ, ಭಾರತ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಯಾವುದೇ ಧಾರ್ಮಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಭಾರತ ಯಾತ್ರೆ ನಡೆಸಲು ಧೈರ್ಯ ತೋರಿರಲಿಲ್ಲ. ಆದರೆ ಎಸ್ಸೆಸ್ಸೆಫ್ ಸಾಕ್ಷರತೆ ಮತ್ತು ಸಹಿಷ್ಣುತೆಯ ಭಾರತಕ್ಕಾಗಿ, ದೇಶದ 22 ರಾಜ್ಯಗಳಲ್ಲಿ 14,000 ಸಾವಿರ ಕಿ.ಲೋ ಸಂಚರಿಸಿ ಭಾರತ ಯಾತ್ರೆಯನ್ನು ನಡೆಸಿ ಹೊಸ ಇತಿಹಾಸವನ್ನು ಸೃಷ್ಟಿಮಾಡುವುದರ ಮೂಲಕ ಸಹಿಷ್ಣುತೆಯ ಭಾರತ ನಿರ್ಮಾಣ ಮಾಡಲು ಪಣತೊಟ್ಟಿದೆ ಎಂದು ಅಭಿಪ್ರಾಯಪಟ್ಟರು.

ಜ.22ರಂದು ಕಾಶ್ಮೀರದಿಂದ ಪ್ರಾರಂಭಗೊಂಡ ಭಾರತ ಯಾತ್ರೆ ದೇಶದ 22 ರಾಜ್ಯಗಳಲ್ಲಿ ಸಂಚರಿಸಿ, ಶಿಕ್ಷಣದ ಹಾಗೂ ಸಹಿಷ್ಣುತೆಯ ಬಗ್ಗೆ ದೇಶದ ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಭಾರತ ದೇಶ ಸುಂದರವಾದ ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ಆದರೆ ಇಂದಿಗೂ ಗುಡಿಸಲುಗಳಲ್ಲಿ ಜನರು ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವುದು ವಿಷಾದನೀಯವೆಂದರು. ಭಾತರ ಯಾತ್ರೆಯಲ್ಲಿ ಎಲ್ಲಾ ಜಾತಿ ಧರ್ಮಗಳ ಗುರುಗಳು ನಮ್ಮನ್ನು ಬಹಳ ಸಂತೋಷದಿಂದ ಸ್ವಾಗತ ಮಾಡಿಕೊಂಡಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷ ಸಿ.ಟಿ.ಎಂ ತಂಙಲ್ ಮಾತನಾಡಿ, ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು, ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲಾ ಜನಾಂಗದವರು ಜೀವನ ನಡೆಸುತ್ತಿರುವ ಸುಂದರವಾದ ಈ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸಹಿಷ್ಣುತೆ ದೂರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಸ್ಸೆಸ್ಸೆಫ್ ಭಾರತ ಯಾತ್ರೆಯು ಫೆ.7 ರಂದು ಕೇರಳ ಕಲ್ಲಿಕೋಟೆಯಲ್ಲಿ ಸಮಾರೋಪ ಸಮಾರಂಭಗೊಳ್ಳಲಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ನೂತನ ಎಸ್ಸೆಸ್ಸೆಫ್ ಅಧ್ಯಕ್ಷರಾದ ಸಿ.ಟಿ.ಎಂ ತಂಙಲ್ ಹಾಗೂ ಸದಸ್ಯರನ್ನು, ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಹ್ಮೂದ್ ಮುಸ್ಲಿಯಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ರಾಷ್ಟ್ರೀಯ ಎಸ್ಸೆಸ್ಸೆಫ್ ಅಧ್ಯಕ್ಷರಾದ ಶೌಕತ್ ನಹೀಮಿ, ನೂರಾನಿ ಪಶ್ಚಿಮ ಬಂಗಾಳ, ಸಲ್ಮಾನ್ ಖುರ್ಷಿದ್, ಜಿಲ್ಲಾ ಪಂಚಾಯತ್ ಸದಸ್ಯರಾದ ಲತೀಫ್, ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಹಫೀಲ್ ಸಹದಿ, ಎಸ್ಸೆಸ್ಸೆಫ್ ಅಧ್ಯಕ್ಷ ಅಜೀಜ್ ಸಖಾಫಿ, ಹಂಸ ಕೊಟ್ಟಮುಡಿ, ಇಸ್ಮಾಯಿಲ್ ಸಖಾಫಿ ಮತ್ತಿತ್ತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News