ವ್ಯಕ್ತಿಯ ಕೊಲೆಗೈದು ದೇವಸ್ಥಾನದಲ್ಲಿ ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Update: 2019-02-13 18:39 GMT

ಮಂಡ್ಯ,ಫೆ.13: ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಶ್ರೀ ಮುತ್ತುರಾಯಸ್ವಾಮಿ ದೇವಸ್ಥಾನದ ಬಳಿ ಮಲಗಿದ್ದ ವ್ಯಕ್ತಿಯನ್ನು ಕೊಲೆ ಮಾಡಿ, ದೇವಸ್ಥಾನದಲ್ಲಿ ದರೋಡೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮದ್ದೂರು ತಾಲೂಕು ದೊಡ್ಡಹೊಸಗಾವಿ ಗ್ರಾಮದ ಉಮೇಶ ಉ.ಕಿರಣ್(24) ಮಾಗಡಿ ತಾಲೂಕಿನ ಅಗಲುಕೋಟೆ ಹ್ಯಾಂಡ್‍ ಪೋಸ್ಟ್ ನ ಸುರೇಶ ಉ. ವೆಂಕಟೇಶ್ (22) ಗಿರೀಶ್ ಉ.ಗಂಗಪ್ಪ (34) ಹಾಗೂ ರವಿ ಉ.ಶಂಕರ (20) ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ಕಳೆದ ಜ.14ರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ತೊಪ್ಪನಹಳ್ಳಿ ಗ್ರಾಮದ ಶ್ರೀ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಬಂದಿದ್ದು, ದೇವಸ್ಥಾನದ ಬಳಿ ಮಲಗಿದ್ದ ಬಸವಯ್ಯ ಎಂಬಾತನನ್ನು ಕೊಲೆ ಮಾಡಿ ನಂತರ ದರೋಡೆ ಮಾಡಿ ಪರಾರಿಯಾಗಿದ್ದರು.

ಈ ಪ್ರಕರಣ ತನಿಖೆ ನಡೆಸಲು ಎಎಸ್ಪಿ ಬಲರಾಮೇಗೌಡ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಮದ್ದೂರು ಸಿಪಿಐ ಎನ್.ವಿ ಮಹೇಶ್ ಅವರ ನೇತೃತ್ವದ ತಂಡವು ಆರೋಪಿಗಳನ್ನು ತುಮಕೂರು ಬಳಿ ಪತ್ತೆ ಹಚ್ಚಿ ಬಂಧಿಸಲಾಯಿತು. ಬಂಧಿತರಿಂದ 10 ಸಾವಿರ ನಗದು ಹಾಗೂ 5 ಚಿನ್ನದ ತಾಳಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಗದು ಹಾಗೂ ಚಿನ್ನದ ತಾಳಿಗಳ ಒಟ್ಟು ಮೌಲ್ಯ 60 ಸಾವಿರ ರೂ.ಗಳಾಗಿದೆ ಎಂದು ವಿವರಿಸಿದರು.

ಆರೋಪಿಗಳ ಮೇಲಿನ ಹಿಂದಿನ ಕೇಸುಗಳನ್ನು ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಯಿತು. ಇದೇ ಆರೋಪಿಗಳು ಬೆಸಗರಹಳ್ಳಿ ಠಾಣಾ ವ್ಯಾಪ್ತಿಯ ಬೆಳತೂರು ಸೋಮೇಶ್ವರ ದೇವಸ್ಥಾನ, ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರಕೋಟೆ ಚೆಕ್ಕೆರೆ ಪಟ್ಟಲದಮ್ಮ ದೇವಸ್ಥಾನ, ಹಳೇಹಳ್ಳಿ ಮಾಯಮ್ಮ ದೇವಸ್ಥಾನ, ಮದ್ದೂರು ಠಾಣಾ ವ್ಯಾಪ್ತಿಯ ಚನ್ನೇಗೌಡನದೊಡ್ಡಿಯ ಶನೈಶ್ಚರಸ್ವಾಮಿ ದೇವಸ್ಥಾನ ಹಾಗೂ ಗೆಜ್ಜಲಗೆರೆ ಪಟ್ಟಲದಮ್ಮ ದೇವಸ್ಥಾನಗಳಲ್ಲಿ ದರೋಡೆ ನಡೆಸಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಎಸ್ಪಿ ಬಲರಾಮೇಗೌಡ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಶೈಲೇಂದ್ರ ಹಾಗೂ ಮದ್ದೂರು ಸಿಪಿಐ ಎನ್.ವಿ. ಮಹೇಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News