ಆಸ್ತಿ ವಿವಾದ ಹಿನ್ನೆಲೆ: ತಮ್ಮನನ್ನು ಕಡಿದು ಕೊಂದ ಅಣ್ಣ
Update: 2019-02-14 07:34 GMT
ವಿಜಯಪುರ, ಫೆ. 14: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಸಿದ್ದರಾಮ ಶಿವಪ್ಪ ಬಳಬಟ್ಟಿ (32) ಮೃತರು ಎಂದು ಗುರುತಿಸಲಾಗಿದೆ. ಸಹೋದರ ನಿಂಗಪ್ಪ ಬಳಬಟ್ಟಿ ಕೊಲೆ ಆರೋಪಿ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ: ಇಂದು ಮುಂಜಾನೆ ಸಿದ್ದರಾಮ ಸ್ನಾನ ಮಾಡಿ ಮನೆಯಿಂದ ಹೊರ ಬರುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಸಹೋದರ ನಿಂಗಪ್ಪ ಸಿದ್ದರಾಮ ಮೇಲೆ ದಾಳಿ ಮಾಡಿ ಕುತ್ತಿಗೆಗೆ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆಸ್ತಿ ವಿಚಾರವಾಗಿ ಈ ಹಿಂದಿನಿಂದಲೂ ದಾಯಾದಿಗಳ ನಡುವೆ ಕಲಹ ನಡೆಯುತ್ತಿತ್ತು ಎಂದು ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸಿಂದಗಿ ಠಾಣೆ ಪೊಲೀಸರು ತಿಳಿಸಿದ್ದಾರೆ.