ಕಾಶ್ಮೀರದದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಯೋಧರಿಗೆ ಗೋಣಿಕೊಪ್ಪದಲ್ಲಿ ನಮನ

Update: 2019-02-15 11:54 GMT

ಮಡಿಕೇರಿ, ಫೆ.15: ಭಾರತವು ಪಾಕ್‍ನೊಂದಿಗೆ ಎಲ್ಲಾ ವ್ಯಾಪಾರ ಒಪ್ಪಂದ, ಕ್ರೀಡೆ, ಸಿನಿಮಾ, ಮನೋರಂಜನೆಗಳನ್ನು ಕಡಿತಗೊಳಿಸಬೇಕು ಎಂದು ಅಭಿಪ್ರಾಯಪಟ್ಟ ಬ್ರಿಗೇಡಿಯರ್ ಮಾಳೇಟೀರ ದೇವಯ್ಯ ಅವರು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಲಾ 10 ರೂ. ದೇಣಿಗೆ ನೀಡುವಂತಾಗಬೇಕು ಎಂದು ಹೇಳಿದರು.

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾಗಿ ಹುತಾತ್ಮರಾದ ಯೋಧರಿಗೆ ಗೋಣಿಕೊಪ್ಪದ ಫೀ.ಮಾ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಪ್ರತಿಮೆ ಎದುರು ಯುಕೊ ಸಂಘಟನೆ ಆಶ್ರಯದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಯೋಧರ ತಂದೆ-ತಾಯಿ, ಸಹೋದರ-ಸಹೋದರಿಯರು, ಮಕ್ಕಳು, ಪತ್ನಿ ಅವರ ನೋವು ದುಃಖದ ಸ್ಥಿತಿಯನ್ನು ಊಹಿಸಲು ಸಾದ್ಯವಿಲ್ಲ. ಅಲ್ಲದೆ ವಾರ್ಷಿಕ ಎರಡು ತಿಂಗಳ ಅವಧಿಯಲ್ಲಿ ರಜೆಯಲ್ಲಿ ಊರಿಗೆ ಬರುವ ಯೋಧರಿಗೆ ಅವರ ಎಲ್ಲಾ ಸೌಲಭ್ಯ, ಸರಕಾರಿ ದಾಖಲೆ ಕೆಲಸ ಕಾರ್ಯಗಳನ್ನು ವಿಶೇಷ ಪ್ರಾಮುಖ್ಯತೆ ನೀಡಿ ಮಾಡಿಕೊಡುವಂತಾಗಬೇಕು. ಇದರಿಂದ ಅವರು ದೇಶಕ್ಕಾಗಿ ಗಡಿಯಲ್ಲಿ ನೆಮ್ಮದಿಯಿಂದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಪುಲ್ವಾಮ ದಾಳಿಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದರೊಂದಿಗೆ ಅವರ ಕುಟುಂಬಕ್ಕೆ ನೈತಿಕ ಬೆಂಬಲವಾಗಿ ದೇಶದ ಪ್ರತಿಯೊಬ್ಬ ನಾಗರಿಕ ನಿಲ್ಲುವ ಮೂಲಕ ದೇಶಾಭಿಮಾನ ಮೂಡಿಸಬೇಕಾಗಿದೆ. ಉಗ್ರವಾದವನ್ನು ಸಂಪೂರ್ಣವಾಗಿ ದಮನ ಮಾಡುವ ಸರಕಾರದ ಕಾರ್ಯಕ್ಕೆ ಬೆಂಬಲ ನೀಡಬೇಕಾಗಿದೆ. ನಮ್ಮ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಗೌರವದಿಂದ ನೆನೆಯುವುದು ನಮ್ಮ ಕರ್ತವ್ಯ ಎಂದು ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನುಡಿದರು.

ಭಯೊತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಾ ಅದಕ್ಕೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದೊಂದಿಗೆ ಭಾರತ ಎಲ್ಲಾ ವ್ಯವಹಾರವನ್ನು ಕಡಿತಗೊಳಿಸಬೇಕು. ಭಯೋತ್ಪಾದನೆಯ ಹುಟ್ಟಡಗಿಸಲು ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಫೀ.ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರಂತಂಡ ಸುಬ್ಬಯ್ಯ ಅವರು, ಜಮ್ಮು ಕಾಶ್ಮಿರದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೈತಿಕ ಬೆಂಬಲ ನೀಡುವ ಮೂಲಕ  ಭಯೋತ್ಪಾದನೆ ವಿರುದ್ಧ ಸರಕಾರ ಕೈಗೊಳ್ಳುವ ಕ್ರಮಕ್ಕೆ ದೇಶದ ಎಲ್ಲಾ ನಾಗರಿಕರು ಒಂದಾಗಿ ಬೆಂಬಲ ನೀಡಬೇಕಾಗಿದೆ ಎಂದರು.  

ಕೊಡಗು ವನ್ಯಜೀವಿ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ ಮಾತನಾಡಿ, ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸೀಮಿತವಾಗಿದ್ದ ಭಯೋತ್ಪಾದನೆ ಇಂದು ದೇಶಾದ್ಯಂತ ವ್ಯಾಪಿಸಿದೆ. ಭಾರತವನ್ನು ನೇರವಾಗಿ ಎದುರಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದೆ ಪ್ರಪಂಚದ 5ನೇ ಬಲಾಢ್ಯ ಸೇನೆಯನ್ನು ಹೊಂದಿರುವ ಭಾರತದ ಎದುರು ಭಯೋತ್ಪಾದನೆ ಮೂಲಕ ಯುದ್ಧ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಯೋತ್ಪಾದನಾ ನಿಗ್ರಹಕ್ಕೆ ಭಾರತ ಶಾಶ್ವತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಾರತ ದೊಡ್ಡಮಟ್ಟದ ಗಂಡಾಂತರವನ್ನು ಎದುರಿಸುವಂತಾಗುತ್ತದೆ. ಆದ್ದರಿಂದ ಸರಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕರ್ನಲ್ ಮುಕ್ಕಾಟಿರ ಅಯ್ಯಣ್ಣ ಮಾತನಾಡಿ, ಕೊಡಗಿನ ಫೀ.ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಅವರಿಗೆ ಅವರ ಸೇವಾವಧಿಯಲ್ಲಿ ಅಂದಿನ ಸರ್ಕಾರ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅಧಿಕಾರ ನೀಡಿದ್ದರೆ ಇಂದು ಈ ಜಿಹಾದಿ ಭಯೋತ್ಪಾದನೆ ಮತ್ತು ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಇರುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಯುಕೊ ಸಂಘಟನೆಯ ಮಚ್ಚಮಾಡ ಅನೀಶ್ ಮಾದಪ್ಪ, ಜಮ್ಮಡ ಗಣೇಶ್ ಅಯ್ಯಣ್ಣ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಕಾಂಡೇರ ಕುಮಾರ್, ಉಳುವಂಗಡ ಲೋಹಿತ್  ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಗೋಣಿಕೊಪ್ಪ ಕೊಡವ ಸಮಾಜದ ಸಿ.ಡಿ. ಮಾದಪ್ಪ, ಕುಣಿಯಂಡ ಭೋಜಮ್ಮ, ಗ್ರಾ.ಪಂ. ಸದಸ್ಯ ನೂರೇರ ರತಿ, ಹಿಂದು ಮಲಯಾಳಿ ಸಮಾಜದ ಶರತ್‍ಕಾಂತ್, ಮಾರ್ಚಂಡ ಗಣೇಶ್ ಪೊನ್ನಪ್ಪ, ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಚೆಪ್ಪುಡಿರ ಮಾಚು, ಕಾಡ್ಯಮಾಡ ನಿವಿನ್, ಪವಿತ್ರ ನಿವಿನ್, ಡಾ. ಕೊಂಗೇಟಿ ಪೊನ್ನಪ್ಪ, ಕಾವೇರಿ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಕುಟ್ಟಂಡ ವಿಜು ಉತ್ತಪ್ಪ, ಕುಳ್ಳಚಂಡ ಚಿಣ್ಣಪ್ಪ, ರಜತ್ ತಿಮ್ಮಯ್ಯ, ಚೇನಿರ ನಾಜ್ ಚಂಗಪ್ಪ, ಕಾಂಡೇರ ಕುಮಾರ್, ಬೊಳಿಯಂಗಡ ಬೋಪಣ್ಣ, ಗುಡಿಯಂಗಡ ಲಿಖಿನ್, ಮಾಣಿರ ಪ್ರತಿಮಾ, ಕೊಕ್ಕಲೆಮಾಡ ಪೊನ್ನಪ್ಪ, ಗೋಣಿಕೊಪ್ಪ ಕಾವೇರಿ ಕಾಲೇಜು ಮತ್ತು ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹುತಾತ್ಮ ಯೋಧರಿಗೆ 2 ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News