ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ ಚಿದಂಬರಂ, ಕಾರ್ತಿ ಮಧ್ಯಂತರ ರಕ್ಷಣೆ ವಿಸ್ತರಣೆ
ಹೊಸದಿಲ್ಲಿ, ಪೆ. 18: ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ದಾಖಲಿಸಿದ ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರಿಗೆ ಬಂಧನದಿಂದ ಮದ್ಯಂತರ ರಕ್ಷಣೆಯನ್ನು ದಿಲ್ಲಿ ನ್ಯಾಯಾಲಯ ಮಾರ್ಚ್ 8ರ ವರೆಗೆ ವಿಸ್ತರಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 5, 6, 7 ಹಾಗೂ 12ರಂದು ವಿಚಾರಣೆಗೆ ಹಾಜರಾಗುವಂತೆ ಕಾರ್ತಿ ಚಿದಂಬರಂಗೆ ನಿರ್ದೇಶಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿಗೆ ತಿಳಿಸಿದೆ. ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಕಾರ್ತಿ ಚಿದಂಬರಂ ತನ್ನ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಏರ್ಸೆಲ್ ಮ್ಯಾಕ್ಸಿಸ್ ಹಾಗೂ ಐಎನ್ಎಕ್ಸ್ ಮಾಧ್ಯಮ ಪ್ರಕರಣಗಳಿಗೆ ಸಂಬಂಧಿಸಿ 5,6,7 ಹಾಗೂ 12ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಜನವರಿ 30ರಂದು ಸುಪ್ರೀಂ ಕೋರ್ಟ್ ಕಾರ್ತಿ ಅವರಿಗೆ ನಿರ್ದೇಶಿಸಿತ್ತು.
ಮಾರ್ಚ್ 5,6,7,12ರಂದು ವಿಚಾರಣೆಗೆ ಹಾಜರಾದ ಬಳಿಕ ಮಾರ್ಚ್ 12ರ ನಂತರ ವಿಚಾರಣೆ ನಡೆಸುವಂತೆ ಜ್ಯಾರಿ ನಿರ್ದೇಶನಾಲಯದ ಪರ ವಿಶೇಷ ಅಭಿಯೋಜಕ ಎನ್.ಕೆ. ಮಟ್ಟಾ ಹಾಗೂ ನಿತೇಶ್ ರಾಣಾ ನ್ಯಾಯಾಲಯದಲ್ಲಿ ಮಾನವಿ ಮಾಡಿದ್ದಾರೆ.