ನಂಜನಗೂಡು ಬಿಜೆಪಿ ಶಾಸಕರಿಂದ ಅಂಬೇಡ್ಕರ್ ರಿಗೆ ಅಗೌರವ: ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್

Update: 2019-03-05 06:29 GMT

ಮೈಸೂರು, ಮಾ.5: ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಹಳಿಗೆ ಪುಷ್ಪಾರ್ಚನೆ ಮಾಡುವ ವೇಳೆ ಅಗೌರವ ತೋರಿದ್ದಾರೆ ಎಂಬ ವೀಡಿಯೋ ಸಾಮಾಜಿಕ ತಾಣದಲ್ಲಿ ಬಾರಿ ವೈರಲ್ ಆಗಿದೆ.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಶನಿವಾರ ನಂಜನಗೂಡಿಗೆ ಬಂದಿದ್ದ ವೇಳೆ ನಂಜನಗೂಡು-ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ತೆರಳಿದ್ದರು. ಈವೇಳೆ ಮೊದಲಿಗೆ ಪ್ರಿಯಾಂಕ ಖರ್ಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಾರೆ.  ಸಂಸದ ಆರ್.ಧ್ರುವನಾರಾಯಣ್ ಕೂಡಾ ಪುಷ್ಪಾರ್ಚನೆ ಮಾಡುತ್ತಾರೆ. ಆದರೆ ನಂತರ ಶಾಸಕ ಹರ್ಷವರ್ಧನ್  ಬೇಕಾಬಿಟ್ಟಿಯಾಗಿ ಒಂದು ಕೈಯಲ್ಲಿ ಅಂಬೇಡ್ಕರ್ ಪುತ್ಹಳಿಯತ್ತ ಹೂವು ಚೆಲ್ಲಿ ಪಕ್ಕದಲ್ಲೇ ಇದ್ದ ಪ್ರಿಯಾಂಕ ಖರ್ಗೆ ಜೊತೆ ಅಲ್ಲೇ ಮಾತಿಗಿಳಿಯುತ್ತಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗಳಾಗುತ್ತಿದೆ.

ರಾಜ್ಯಕಂಡ ಧೀಮಂತ ದಲಿತ ನಾಯಕ ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರ ಮೊಮ್ಮಗ ಹಾಗೂ ಮತ್ತೊಬ್ಬ ದಲಿತ ನಾಯಕ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಅಳಿಯರಾಗಿರುವ ಹರ್ಷವರ್ಧನ್ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

 ಕೆಲಸದ ಒತ್ತಡದಿಂದ ಪ್ರಮಾದ: ಶಾಸಕ ಹರ್ಷವರ್ಧನ್ 

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅಂದು ನನ್ನ ಕೆಲಸದ ಒತ್ತಡ ಮತ್ತು ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಷಯ ತಿಳಿಸಬೇಕಿರುವುದರಿಂದ ಇಂತಹ ಪ್ರಮಾದ ನನ್ನಿಂದ ಆಗಿದೆ. ಅದಕ್ಕೆ ಸಾರ್ವಜನಿಕರಲ್ಲಿ ಕ್ಷಮೆ ಕೋರುತ್ತೇನೆ ಎಂದು ಶಾಸಕ ಹರ್ಷವರ್ಧನ್ ಹೇಳಿದ್ದಾರೆ.

ಈ ಕುರಿತು 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಅವರು, ಅಂದು ನನಗೆ ಸಾಕಷ್ಟು ಕೆಲಸದ ಇತ್ತಡ ಇತ್ತು. ಮುಡಾ ಬಜೆಟ್ ನಲ್ಲಿ ಭಾಗವಹಿಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ 2 ಗಂಟೆಗೆ ಎಂದು ಆತುರವಾಗಿ ಆಗಮಿಸಿದೆ. ಆದರೆ ಕಾರ್ಯಕ್ರಮ ತಡವಾಗಿ ಪ್ರಾರಂಭವಾಗಿ 6 ಗಂಟೆಗೆ ಮುಗಿಯಿತು. ಸಚಿವ ಪ್ರಿಯಾಂಕ ಖರ್ಗೆಯವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಕ್ಷಣ ಎಚ್.ಡಿ.ಕೋಟೆಗೆ ತೆರಳುವವರಿದ್ದರು. ಅಲ್ಲಿ ಸಾಕಷ್ಟು ಜನರು ಸೇರಿದ್ದರಿಂದ ಒತ್ತಡ ಜಾಸ್ತಿ ಇತ್ತು ಮತ್ತು ಸಚಿವರಿಗೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡುಕೊಳ್ಳುವ ವೇಳೆ ನಾನು ಕೈ ಮುಗಿಯಲಿಲ್ಲ. ಹಾಗಾಗಿ ನಾನು ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ನಾನು ಸಾಕಷ್ಟು ಗೌರವವನ್ನು ಅಂಬೇಡ್ಕರ್ ಅವರ ಬಗ್ಗೆ ಹೊಂದಿದ್ದೇನೆ. ಈ ಬಗ್ಗೆ ನನ್ನ ಫೇಸ್ ಬುಕ್ ಸ್ಟೇಟಸ್ ನಲ್ಲಿ ಕ್ಷಮೆ ಕೋರಿದ್ದೇನೆ. ಕೆಲವರು ಉದ್ದೇಶಪೂರ್ವಕವಾಗಿ ಈ ವಿಷಯವನ್ನು ದೊಡ್ಡದು ಮಾಡಿ ಚರ್ಚೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News