ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಎಸ್‌ಡಿಪಿಐ ಹೋರಾಟ: ಇಲ್ಯಾಸ್ ಮುಹಮ್ಮದ್ ತುಂಬೆ

Update: 2019-03-05 16:15 GMT

ಬೆಂಗಳೂರು, ಮಾ.5: ರಾಜ್ಯದಲ್ಲಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳನ್ನು ಮರು ವಶಪಡಿಸಲು ಎಸ್‌ಡಿಪಿಐ ನಿರಂತರ ಹೋರಾಟ ಮಾಡಲಿದೆ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದರು.

ಮಂಗಳವಾರ ನಗರದ ದಾರುಸ್ಸಲಾಂ ಸಭಾಂಗಣದಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿಯು ಆಯೋಜಿಸಿದ್ದ ‘ವಕ್ಫ್ ಬಚಾವೋ ಆಂದೋಲನ’ದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲವು ರಾಜಕೀಯ ನಾಯಕರ ಮೇಲೆ ವಕ್ಫ್ ಆಸ್ತಿ ಒತ್ತುವರಿ, ಮಾರಾಟದ ಆರೋಪವಿದೆ. ಮುಸ್ಲಿಮ್ ಸಮುದಾಯದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ದಾಖಲಾತಿ ಕ್ರಮ ಬದ್ಧಗೊಳಿಸುವ ಬಗ್ಗೆ ಜಾಗತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್, ಸಮುದಾಯದ ಹಿರಿಯರು ವಕ್ಫ್ ಆಸ್ತಿಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಮುಂದಿನ ಪೀಳಿಗೆಗೆ ಈ ಆಸ್ತಿಗಳನ್ನು ಉಳಿಸಿ ಸದ್ಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲನಾ ಅತೀಖುರ್ರಹ್ಮಾನ್, ಒಮ್ಮೆ ಅಲ್ಲಾಹನ ಹೆಸರಲ್ಲಿ ವಕ್ಫ್ ಮಾಡಲಾದ ಆಸ್ತಿಗಳು ಶಾಶ್ವತವಾಗಿ ಸಮುದಾಯದ ಸೊತ್ತಾಗಿರುತ್ತವೆ. ಅದರ ಮಾರಾಟ, ದುರ್ಬಳಕೆಗೆ ಅವಕಾಶವಿಲ್ಲ ಎಂದರು.

ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಮಾತನಾಡಿ, ಇಸ್ಲಾಮಿನಲ್ಲಿ ನ್ಯಾಯ ಪಾಲನೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಸಮಾಜದಲ್ಲಿ ಶಾಂತಿ-ಸಮಾಧಾನ ಮತ್ತು ನ್ಯಾಯ ಪಾಲನೆಗೆ ಹೋರಾಡುವ ಎಸ್‌ಡಿಪಿಐನ ವಕ್ಫ್ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಮಾತನಾಡಿ, ಬಿಜೆಪಿಯು ಅನ್ವರ್ ಮಾನಿಪ್ಪಾಡಿ ವರದಿ ಬಗ್ಗೆ ಅನಾವಶ್ಯಕ ರಾಜಕೀಯ ಮಾಡುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ವಕ್ಫ್ ಆಸ್ತಿಗಳ ಕಬಳಿಕೆ ನಡೆದಿದೆ. ಬಿಜೆಪಿ ಮೊದಲು ಆ ರಾಜ್ಯದ ಒತ್ತುವರಿ ತೆರವುಗೊಳಿಸಿ ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸಲಿ ಎಂದರು.

ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷೆ ಪ್ರೊ.ನಾಝ್ನೀನ್ ಬೇಗಮ್, ಸಾಮಾಜಿಕ ಹೋರಾಟಗಾರರಾದ ಸರ್ದಾರ್ ಅಹ್ಮದ್ ಖುರೇಷಿ, ಇಲ್ಯಾಸ್ ಆರ್‌ಟಿಓ, ಇಮ್ರಾನ್ ರಫಾಯಿ, ಇನಾಯತುಲ್ಲಾ ಶಾಬಂದ್ರಿ ಮತ್ತಿತರರು ವಕ್ಫ್ ಹೋರಾಟದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಡಾ.ಮೆಹಬೂಬ್ ಶರೀಫ್, ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಅಬ್ದುಲ್ ಮಜೀದ್ ಖಾನ್, ಕೋಶಾಧಿಕಾರಿ ಜಾವೀದ್ ಆಝಾಂ, ಅಬ್ದುಲ್ ರಹೀಮ್ ಪಟೇಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News