ರೈತರ ಸಾಲಮನ್ನಾಗೆ 24,170 ಕೋಟಿ ಒದಗಿಸಲಾಗಿದೆ: ಹೆಚ್.ಡಿ. ಕುಮಾರಸ್ವಾಮಿ

Update: 2019-03-05 16:59 GMT

ಕೋಲಾರ, ಮಾ.06: ರಾಜ್ಯದ ಅನ್ನದಾತರಾದ ರೈತರನ್ನು ಋಣಮುಕ್ತರನ್ನಾಗಿ ಮಾಡಲು ದಿಟ್ಟ ನಿರ್ಧಾರ ಕೈಗೊಂಡು 48 ಸಾವಿರ ಕೋಟಿಗೂ ಹೆಚ್ಚು ಸಾಲವನ್ನು ಮನ್ನಾ ಮಾಡಲಾಗಿದ್ದು, ಇದರಲ್ಲಿ 2018-19 ನೇ ಸಾಲಿನಲ್ಲಿ 11,170 ಕೋಟಿ ರೂ.ಗಳನ್ನು ಹಾಗೂ  2019-20 ನೇ ಸಾಲಿನ ಬಜೆಟ್‍ನಲ್ಲಿ 13 ಸಾವಿರ ಕೋಟಿಗಳನ್ನು ಸಾಲಮನ್ನಾಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಇಂದು ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ, ಎಂ.ವಿ.ಕೆ ಗೋಲ್ಡನ್ ಡೇರಿ ಶಂಕುಸ್ಥಾಪನೆ ಹಾಗೂ 19 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ/ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾನು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಸಾಲಮನ್ನಾದಿಂದ ಹಿಂದೆ ಸರಿಯುತ್ತೇನೆ ಎಂದು ಅಪಪ್ರಚಾರ ಮಾಡಲಾಯಿತು. ಆದರೆ ಈ ನಾಡಿನ ರೈತರ ಋಣತೀರಿಸುವ ಉದ್ದೇಶದಿಂದ ಸಾಲಮನ್ನಾದಂತಹ ದೊಡ್ಡ ಯೋಜನೆಯನ್ನು ಘೋಷಿಸಲಾಯಿತು. ನಾನು ಸಾಲಮನ್ನಾ ಘೋಷಿಸುವ ಮುಂಚೆ ರಾಷ್ಟ್ರೀಕೃತ ಬ್ಯಾಂಕುಗಳು ರೈತರು ಸಾಲ ಪಾವತಿಸಿದರೆ ಶೇ. 50 ರಷ್ಟು ರಿಯಾಯಿತಿ ನೀಡುತ್ತೇವೆ ಎಂದು ಜೂನ್ ತಿಂಗಳಿನಲ್ಲಿ ಜಾಹೀರಾತು ನೀಡಿದ್ದರು. ಸಾಲಮನ್ನಾ ಘೋಷಿಸಿದ ನಂತರ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆದು ಸರ್ಕಾರ ರೈತರ ಸಾಲ ಪಾವತಿಸಿದರೆ ಶೇ. 50 ರಷ್ಟು ರಿಯಾಯಿತಿ ನೀಡುವುದಾಗಿ ಒಪ್ಪಿಕೊಂಡು ನಂತರ ಮಾತಿನಿಂದ ಹಿಂದೆ ಸರಿದರು. ಆದರೂ ದಿಟ್ಟ ನಿರ್ಧಾರ ಮಾಡಿ ರೈತರ ಸಾಲಮನ್ನಾ ಮಾಡಲಾಗಿದೆ ಎಂದರು. 

ರಾಜ್ಯವು ಬಹುತೇಕ ಬರಕ್ಕೆ ತುತ್ತಾಗಿದ್ದು, ಮುಂಗಾರಿನಲ್ಲಿ 20 ಸಾವಿರ ಕೋಟಿ, ಹಿಂಗಾರಿನಲ್ಲಿ 13 ಸಾವಿರ ಕೋಟಿ ನಷ್ಟವಾಗಿದ್ದು, 2 ಸಾವಿರ ಕೋಟಿ ಸಹಾಯಧನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ 949 ಕೋಟಿ ನೀಡುವುದಾಗಿ ಭರವಸೆ ನೀಡಿ ಈಗ 400 ಕೋಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು. 

ಕೋಲಾರ ಜಿಲ್ಲೆಯು ರೇಷ್ಮೆ, ತರಕಾರಿ ಹಾಗೂ ಹಾಲು ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇದ್ದರೂ ಇರುವ ನೀರಿನಲ್ಲೇ ಕಷ್ಟ ಪಟ್ಟು ಹಣ್ಣು, ತರಕಾರಿಗಳನ್ನು ಬೆಳೆಯುತ್ತಾರೆ ಹಾಗೂ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಮುಂದಿನ ಏಪ್ರಿಲ್‍ನಿಂದ ಹಾಲು ಉತ್ಪಾದಕರ ಸಂಘಗಳಿಗೆ ಪ್ರತಿ ಲೀಟರ್ ಹಾಲಿನ ಖರೀದಿಗೆ ನೀಡುತ್ತಿದ್ದ 5 ರೂಗಳ ಪ್ರೋತ್ಸಾಹ ಧನವನ್ನು 6 ರೂಗಳಿಗೆ ಹೆಚ್ಚಿಸಲಾಗುವುದು. ಪ್ರತಿ ವರ್ಷ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವಾಗಿ 2500 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ.  ರಾಜ್ಯ ಸರ್ಕಾರವು ಕ್ಷೀರ ಭಾಗ್ಯ ಯೋಜನೆಯಡಿ ಹಾಲನ್ನು ಖರೀದಿಸಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಕೋಲಾರದಲ್ಲಿ ಗೋಲ್ಡನ್ ಡೇರಿ ಸ್ಥಾಪನೆಗೆ ಸರ್ಕಾರದ ವತಿಯಿಂದ 50 ಕೋಟಿಗಳ ಸಹಾಯಧನವನ್ನು ಒದಗಿಸಲಾಗುವುದು ಎಂದು ಘೋಷಿಸಿದರು. 

ಜಿಲ್ಲೆಯಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆಯುತ್ತಿದ್ದು, ರೈತರು ರೇಷ್ಮೆ ಬೆಳೆಗಳಿಗೆ ಉತ್ತಮ ಬೆಳೆ ದೊರೆಯುತ್ತಿಲ್ಲ. ಸರ್ಕಾರ ಅಗತ್ಯ ಬೆಂಬಲ ಬೆಲೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಬಸವರಾಜ್ ವರದಿ ಪ್ರಕಾರ ಬೆಲೆ ನಿಗದಿಯು ಅವೈಜ್ಞಾನಿಕವಾಗಿದೆ ಎಂದು ರೈತರು ಮನವಿ ಸಲ್ಲಿಸಿದ್ದು, ಈ ಬಗ್ಗೆ ಚರ್ಚಿಸಲು ನಾಳೆ ವಿಧಾನಸೌಧದಲ್ಲಿ ಸಭೆ ಕರೆಯಲಾಗಿದೆ. ರೈತರು ಸಭೆಯಲ್ಲಿ ಭಾಗವಹಿಸಿ ಯಾವ ಬೆಲೆಯನ್ನು ನಿಗದಿಪಡಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಬಹುದಾಗಿದೆ ಎಂದು ತಿಳಿಸಿದರು. 

ಕೋಲಾರ ಜಿಲ್ಲೆಯಲ್ಲಿ ಟೊಮೊಟೋವನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಟೊಮೊಟೋ ಸಂಗ್ರಹಿಸಲು ಸಂಸ್ಕರಣಾ ಘಟಕ ಸ್ಥಾಪಿಸಲು 20 ಕೋಟಿ ರೂಗಳನ್ನು ನೀಡಲಾಗಿದೆ. ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಪುನಶ್ಚೇತನಕ್ಕೆ 100 ಕೋಟಿ ರೂಗಳನ್ನು ಒದಗಿಸಲಾಗಿದೆ. ಕೋಲಾರ, ಬಿಜಾಪುರ, ರಾಯಚೂರು ಹಾಗೂ ಮಂಡ್ಯ ಜಿಲ್ಲೆಗಳನ್ನು ಪೈಲಟ್ ಪ್ರಾಜೆಕ್ಟ್ ಆಗಿ ತೆಗೆದುಕೊಂಡು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಮನೆ ಮನೆಗೆ ನೀರು ಒದಗಿಸಲು 4 ಸಾವಿರ ಕೋಟಿರೂಗಳನ್ನು ಒದಗಿಸಲಾಗಿದೆ. ಕೋಲಾರದಲ್ಲಿ ಹೊರ ವರ್ತುಲ ರಿಂಗ್ ರಸ್ತೆ ಸ್ಥಾಪಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು. 

ನೀರಿನ ಕೊರತೆ ಹಾಗೂ ಎಷ್ಟೇ ಸಂಕಷ್ಟಗಳಿದ್ದರೂ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಲ್ಲ. ಇದು ಹೆಮ್ಮೆಪಡುವ ವಿಷಯ. ಇಲ್ಲಿನ ರೈತರು ದೃಢ ನಿರ್ಧಾರ ಹಾಗೂ ಛಲದಿಂದ ಬದುಕುತ್ತಿದ್ದಾರೆ. ಇದು ಇತರ ಜಿಲ್ಲೆಯವರಿಗೂ ಮಾದರಿಯಾಗಬೇಕು. ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ 10 ಸಾವಿರ ರೂಗಳ ಪ್ರೋತ್ಸಾಹ ಧನ ಹಾಗೂ ಸಿರಿಧಾನ್ಯಗಳನ್ನು ಮಾರಲು ಸರ್ಕಾರದ ವತಿಯಿಂದ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು. 

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಮಾತನಾಡಿ, ನಮ್ಮ ಜಿಲ್ಲೆಯ ಆಧಾರ ಸ್ಥಂಭ ಹಾಲು ಉತ್ಪಾದಕರು. ಹೈನುಗಾರಿಕೆಯನ್ನು ವ್ಯವಸ್ಥಿತವಾಗಿ ಜಿಲ್ಲೆಗೆ ಪರಿಚಯಿಸಿದ ಎಂ.ವಿ. ಕೃಷ್ಣಪ್ಪ ಅವರ ಹೆಸರಿನಲ್ಲಿ ನಾವು  ಇಂದು ಈ ಮೆಗಾ ಡೇರಿಯನ್ನು ಮಾಡುತ್ತಿದ್ದೇವೆ. ಮಾನ್ಯ ಮುಖ್ಯಮಂತ್ರಿಗಳು ಮೆಗಾ ಡೇರಿಗೆ ಶಂಕುಸ್ಥಾಪನೆ ಮಾಡಿದ್ದಲ್ಲದೆ ಮೆಗಾ ಡೇರಿ ಸ್ಥಾಪನೆಗೆ 50 ಕೋಟಿ ರೂ. ಸಹಾಯ ಧನ ನೀಡುವುದಾಗಿ ತಿಳಿಸಿರುವುದು ಸಂತೋಷವಾಗಿದೆ ಎಂದರು. 

ಈ ಜಾಗದಲ್ಲಿ ಡೇರಿ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಂತಹ ಮುನಿಸ್ವಾಮಿ ಅವರನ್ನು ಸ್ಮರಿಸಬೇಕಾಗುವುದು ನಮ್ಮ ಕರ್ತವ್ಯ. ಹಾಲು ಉತ್ಪಾದಕರ ನಿರ್ದೇಶಕರು ಯಾವ ರೀತಿ ಎಂ.ವಿ ಕೃಷ್ಣಪ್ಪನವರನ್ನು ಸ್ಮರಿಸುತ್ತಿದ್ದೇವೊ ಅದೇ ರೀತಿ ಮುನಿಸ್ವಾಮಿ ಅವರನ್ನು ಸ್ಮರಿಸಬೇಕಾದ ಕೆಲಸವಾಗಬೇಕು ಎಂದು ತಿಳಿಸಿದರು. 

ಕೋಚಿಮುಲ್ ಅಧ್ಯಕ್ಷರಾದ ನಂಜೇಗೌಡರು ಹಾಲು ಉತ್ಪಾದಕರ ಒಕ್ಕೂಟದವರಿಗೆ ಮತ್ತು ರೈತರಿಗೆ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ಇನ್ನಷ್ಟು ಅಭಿವೃದ್ಧಿಗೆ ಶ್ರಮಿಸಬೇಕು. ರೈತರ ಹಾಲಿಗೆ ಉತ್ತಮ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕು. ಕೋಲಾರ ಜಿಲ್ಲೆಗೆ ಮನೆ ಮನೆಗೆ ಕುಡಿಯುವ ನೀರನ್ನು ನೀಡುವಂತಹ ಜಲಧಾರೆ ಯೋಜನೆ ಅಡಿಯಲ್ಲಿ 4 ಜಿಲ್ಲೆಗಳ ಪೈಕಿ ಈ ಬಾರಿ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಈ ವರ್ಷದಲ್ಲಿ ಚಾಲನೆ ನೀಡುತ್ತಿದ್ದಾರೆ. ನಮ್ಮ ಜಿಲ್ಲೆಗೆ ಮಾನ್ಯ ಮುಖ್ಯಮಂತ್ರಿಗಳು ಬೆನ್ನೆಲುಬಾಗಿ ನಿಂತಿದ್ದಾರೆ. 1500 ಕೋಟಿ ಹಣವನ್ನು ನಮ್ಮ ಕೋಲಾರ ಜಿಲ್ಲೆಗೆ ಮುಡಿಪಾಗಿಟ್ಟಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.

ಉತ್ತರ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳನ್ನು ಅಭಿವೃದ್ದಿಪಡಿಸುವುದಾಗಿ ತಿಳಿಸಿದ್ದಾರೆ. ಅದರ ಜೊತೆಗೆ ಸಣ್ಣ ನೀರಾವರಿ ಇಲಾಖೆ ಮುಖಾಂತರ 100 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಹಾಗೂ ಅವಶ್ಯಕತೆ ಇದ್ದರೆ ಆ ಅನುದಾನವನ್ನು ದ್ವಿಗುಣಗೊಳಿಸುವುದಾಗಿ ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ದ್ವಿಗುಣ ಮಾಡುವ ಹಣದ ಅಡಿಯಲ್ಲಿ ಕೆ.ಸಿ ವ್ಯಾಲಿಯ ಮೂಲಕ ಬರುವ ನೀರನ್ನು ಇತರೆ ಕೆರೆಗಳಿಗೆ ತುಂಬಿಸುವ ಯೋಜನೆಗೆ ಹೆಚ್ಚಿನ 200 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಡಿ ಅನುಮತಿ ಕೊಡಬೇಕು. ಯೋಜನೆಯ ಡಿ.ಪಿ.ಆರ್ ಸಿದ್ಧತೆಯಾಗಿದೆ. ಅನುಮೋದನೆ ಕೊಟ್ಟು ಟೆಂಡರ್ ಕರೆದರೆ ಈ ವರ್ಷದ ಅಂತ್ಯದವರೆಗೆ ಕಾರ್ಯಾರಂಭ ಮಾಡುವುದಾಗಿ ತಿಳಿಸಿದರು. ಈ ವರ್ಷ 50 ಕೋಟಿ ಅನುದಾನ ಕೊಟ್ಟರೆ ಸಾಕು. ಮುಂದಿನ ವರ್ಷ ಉಳಿದ ಖರ್ಚನ್ನು ಭರಿಸಬಹುದು. ಕೆಸಿ ವ್ಯಾಲಿ ಯೋಜನೆ ಮೂಲಕ 127 ಕೆರೆಗಳಿಗೆ ನೀರು ಹರಿಸಲಾಗಿದೆ. ಅದರ ಜೊತೆಗೆ ಹೆಚ್ಚುವರಿಯಾಗಿ 200 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು. 

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ವೈ. ನಂಜೇಗೌಡ ಅವರು ಮಾತನಾಡಿ, ಕೋಲಾರದ ಕ್ಷೀರ ಪಿತಾಮಹರಾದ ಎಂ.ವಿ ಕೃಷ್ಣಪ್ಪ ಅವರು ಹೆಸರಿನಲ್ಲಿ 160 ಕೋಟಿ ವೆಚ್ಚದ ಗೋಲ್ಡನ್ ಡೇರಿ ಶಂಕುಸ್ಥಾಪನೆಯನ್ನು ಇಂದು ನೆರವೇರಿಸಲಾಗುತ್ತಿದೆ. ಹಾಲು ಉತ್ಪಾದಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಹಾಸ್ಟೆಲ್ ನಿರ್ಮಾಣಕ್ಕೆ ಸರ್ಕಾರವು ನಿವೇಶನವನ್ನು ನೀಡಿದೆ. ಚಿಕ್ಕಬಳ್ಳಾಪುರದಲ್ಲಿ 165 ಕೋಟಿ ವೆಚ್ಚದಲ್ಲಿ ಮೆಗಾ ಡೇರಿಯನ್ನು ಸ್ಥಾಪಿಸಲಾಗಿದೆ. ಕೋಲಾರ ಹಾಲು ಒಕ್ಕೂಟದಿಂದ ದಿನದಲ್ಲಿ 10 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ ಎಂದರು. 

ಕಾರ್ಯಕ್ರಮದಲ್ಲಿ ಮಾನ್ಯ ಉಪಸಭಾಪತಿಗಳಾದ ಎಂ. ಕೃಷ್ಣರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಎನ್.ಎಸ್ ಶಿವಶಂಕರ್ ರೆಡ್ಡಿ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ಎನ್ ನಾರಾಯಣಸ್ವಾಮಿ ಕೆ.ಎಂ., ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಶ್ರೀನಿವಾಸಗೌಡ, ಸಂಸದೀಯ ಕಾರ್ಯದರ್ಶಿ ಹಾಗೂ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾ ಶಶಿಧರ್. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಮುನಿಯಪ್ಪ, ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್. ನಾಗೇಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಗೀತಾ ಜಿ. ಆನಂದರೆಡ್ಡಿ, ಮಾಜಿ ಸಭಾಪತಿಗಳಾದ ವಿ.ಆರ್ ಸುದರ್ಶನ್, ಎಂ.ವಿ ಕೃಷ್ಣಪ್ಪ ಅವರ ಧರ್ಮಪತ್ನಿ ಪ್ರಮೀಳಮ್ಮ, ವಡಗೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾವತಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News