ಅನಂತಕುಮಾರ್ ಹೆಗಡೆ ಅತ್ಯಂತ ಕಳಪೆ ಸಂಸದ: ದಿನೇಶ್ ಗುಂಡೂರಾವ್

Update: 2019-03-15 17:45 GMT

ಚಾಮರಾಜನಗರ,ಮಾ.15: ಬಿಜೆಪಿಯಲ್ಲಿರುವ ಸಂಸದರಲ್ಲಿ ಅತ್ಯಂತ ಕಳಪೆ ಸಂಸದರೆಂದರೆ ಅದು ಅನಂತ್ ಕುಮಾರ್ ಹೆಗಡೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಚಾಮರಾಜನಗರದಲ್ಲಿ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ವಿರೋಧಿಯಾಗಿ ಮಾತನಾಡುತ್ತಾರೆ. ಅಂತಹವರನ್ನು ಮನೆಗೆ ಕಳುಹಿಸಲು ಮತದಾರರು ತಿರ್ಮಾನಿಸಿದ್ದಾರೆ. ಅದರೊಂದಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅನಂತಕುಮಾರ್ ಹೆಗಡೆಯನ್ನು ಸೋಲಿಸಲು ಶ್ರಮಿಸಲಿದೆ ಎಂದರು.

ಅನಂತಕುಮಾರ್ ಹೆಗಡೆ ಈ ಬಾರಿ ಹೀನಾಯವಾಗಿ ಸೋಲುತ್ತಾರೆ. ಉತ್ತರ ಕರ್ನಾಟಕದವರು ಅನಂತಕುಮಾರ್ ಹೆಗಡೆಯವರನ್ನು ಮನೆಗೆ ಕಳುಹಿಸುತ್ತಾರೆ ಎಂದ ಅವರು, ಅನಂತ್ ಕುಮಾರ್ ಹೆಗಡೆ ಮಾತುಗಳು ದ್ವೇಷವನ್ನು ಸೃಷ್ಟಿಸುತ್ತವೆ. ಉತ್ತರ ಕರ್ನಾಟಕ ಕಾಂಗ್ರೆಸ್ ಮುಕ್ತ ಮಾಡುತ್ತಾರೆನ್ನುವ ಉಡಾಫೆಯ ಮಾತುಗಳಿಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಅಂಬರೀಶ್ ಕೂಡ ಕಾಂಗ್ರೆಸ್ ನಾಯಕರಾಗಿದ್ದರು, ಹಾಗಾಗಿ ಸುಮಲತ ಜೊತೆ ಮಾತನಾಡುತ್ತೇನೆ ಎಂದರು.

ತುಮಕೂರಿನ ವಿಚಾರದಲ್ಲಿ ಮುದ್ದಹನುಮೇಗೌಡರ ಜೊತೆ ಮಾತನಾಡುತ್ತೇವೆ. ಹಾಸನದ ಎ.ಮಂಜು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. 28 ಸಂಸದರಲ್ಲಿ ಹೆಚ್ಚು ಅಂತರದಲ್ಲಿ ಗೆಲ್ಲುವವರು ಆರ್.ದ್ರುವನಾರಾಯಣ್ ಎಂದು ವಿಶ್ವಾಸ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್, ಸಾಕಷ್ಡು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಬಿಜೆಪಿಯಿಂದ ಯಾರೇ ನಿಂತರೂ ದ್ರುವನಾರಾಯಣ್ ಗೆಲ್ಲುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಈಶ್ವರ್ ಖಂಡ್ರೆ, ಲೋಕಸಭಾ ಅಭ್ಯರ್ಥಿ ದ್ರುವನಾರಾಯಣ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News