ಕೊಡಗು ಜೆಡಿಎಸ್ ನಲ್ಲಿ ಭಿನ್ನಮತದ ಬಿಸಿ: ಜಿಲ್ಲಾಧ್ಯಕ್ಷ ನೇಮಕಕ್ಕೆ ಕಾರ್ಯಕರ್ತರ ವಿರೋಧ

Update: 2019-03-15 18:20 GMT

ಮಡಿಕೇರಿ, ಮಾ.15: ಜಾತ್ಯತೀತ ಜನತಾದಳದ ಕೊಡಗು ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರ ನೇಮಕಾತಿಯನ್ನು ಮೂರು ದಿನಗಳ ಒಳಗಾಗಿ ರದ್ದುಪಡಿಸದಿದ್ದಲ್ಲಿ ಬಿ.ಎ. ಜೀವಿಜಯ ಅವರ ನೇತೃತ್ವದಲ್ಲಿ ಕುಶಾಲನಗರದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಯಾಲದಾಳು ಡಾ.ಮನೋಜ್ ಬೋಪಯ್ಯ ಸ್ವಪಕ್ಷಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಲೋಕಸಭಾ ಚುನಾವಣೆ ಯಲ್ಲಿ ಯಾರಿಗೆ ಮತ ನೀಡಬೇಕೆಂಬ ನಿರ್ಧಾರ ಕೈಗೊಳ್ಳಲಿರುವುದಾಗಿ ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಜೆಡಿಎಸ್‌ಗೆ ತನ್ನದೇ ಆದ ಅಸ್ತಿತ್ವವಿಲ್ಲ. ಮಾಜಿ ಸಚಿವ ಬಿ.ಎ. ಜೀವಿಜಯ ಅವರಿಂದಾಗಿ ಜಿಲ್ಲೆಯಲ್ಲಿ ಜೆಡಿಎಸ್ ಜೀವಂತವಾಗಿದೆ. ಆದರೆ, ಅವರನ್ನೂ ಸೇರಿದಂತೆ ಜಿಲ್ಲೆಯ ಯಾವುದೇ ಪ್ರಮುಖರೊಂದಿಗೆ ಚರ್ಚಿಸದೆ, ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆಯದೆ ಏಕಾಏಕಿ ಕೆ.ಎಂ.ಗಣೇಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರು ನೇಮಕ ಮಾಡಿದ್ದಾರೆ. ಗಣೇಶ್ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಪಕ್ಷದ ಕಾರ್ಯಕರ್ತರು ಸಿದ್ಧರಿಲ್ಲ ಎಂದು ಪಕ್ಷದ ವರಿಷ್ಠರ ನಡೆಯನ್ನು ಖಂಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಜಿಲ್ಲೆಯಲ್ಲಿ ಜೆಡಿಎಸ್ ನಾವಿಕನಿಲ್ಲದ ಹಡಗಿನಂತಿತ್ತು. ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವಂತೆ ಹಲವು ಹಿರಿಯ ನಾಯಕರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೂ ವರಿಷ್ಠರು ಗಮನಹರಿಸಿರಲಿಲ್ಲ. ಆದರೆ, ಇದೀಗ ಲೋಕಸಭಾ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ತಮ್ಮ ಬೆಂಬಲಿಗರು ಎಂಬ ಕಾರಣಕ್ಕಾಗಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಕೆ.ಎಂ.ಗಣೇಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಆದರೆ, ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಾವುದೇ ಪ್ರಮುಖರು, ಕಾರ್ಯಕರ್ತರು ಗಣೇಶ್ ಅವರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ವಿಶ್ವನಾಥ್ ಅವರ ನಡೆಯನ್ನು ಟೀಕಿಸಿದರು.

ಗಣೇಶ್ ಅವರಿಗೆ ರಾಜಕೀಯ ಪರಿಪಕ್ವತೆಯ ಕೊರತೆ ಇದೆ. ಅವರ ನಾಯಕತ್ವದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಒಳಗಾಗಿ ಜಿಲ್ಲಾಧ್ಯಕ್ಷರನ್ನು ಬದಲಾಯಿಸಬೇಕು. ಇಲ್ಲವಾದಲ್ಲಿ ಕುಶಾಲ ನಗರದಲ್ಲಿ ಜೀವಿಜಯ ಅವರ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖರು ಸಭೆ ನಡೆಸಿ, ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ನೀಡಬೇಕು ಎಂಬುದನ್ನು ನಿರ್ಧರಿಸುವುದಾಗಿ ಮನೋಜ್ ಬೋಪಯ್ಯ ತಿಳಿಸಿದರು.

ಪಕ್ಷದ ಪರಿಶಿಷ್ಟ ಪಂಗಡ ಘಟಕದ ರಾಜ್ಯ ಉಪಾಧ್ಯಕ್ಷ ಎಸ್.ಎನ್.ರಾಜಾರಾವ್ ಮಾತನಾಡಿ, ಕೊಡಗಿನಲ್ಲಿ ಜೀವಿಜಯ ಅವರಿಲ್ಲದೆ ಜೆಡಿಎಸ್‌ಗೆ ತನ್ನದೇ ಆದ ಅಸ್ತಿತ್ವವಿಲ್ಲ. ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಅವರದ್ದೇ ಆದ ಸುಮಾರು 50 ಸಾವಿರಕ್ಕೂ ಅಧಿಕ ಮತದಾರರು ಸೋಮವಾರಪೇಟೆ ತಾಲೂಕಿನಲ್ಲಿದ್ದಾರೆ. ಈ ಮತದಾರರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿ ಸಿಲ್ವಾ ಮಾತನಾಡಿ, ಕೆ.ಎಂ. ಗಣೇಶ್ ಅವರ ನೇಮಕಾತಿಗೆ ಪಕ್ಷದ ಶೇ.95ರಷ್ಟು ಕಾರ್ಯಕರ್ತರ ವಿರೋಧವಿದೆ. ಪಕ್ಷದ ವರಿಷ್ಠರಿಗೆ ಕಾರ್ಯಕರ್ತರ ಧ್ವನಿಯನ್ನು ತಲುಪಿಸುವುದಕ್ಕಾಗಿ ಮಾಧ್ಯಮದ ಮುಂದೆ ಬಂದಿರುವುದಾಗಿ ಸುದ್ದಿಗೋಷ್ಠಿಯಬಗ್ಗೆ ಸ್ಪಸ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಎಚ್.ಬಿ. ಜಯಮ್ಮ, ಮಹಿಳಾ ಘಟಕದ ಅಧ್ಯಕ್ಷೆ ಜಾನಕಿ ವೆಂಕಟೇಶ್, ಪ್ರೆಸ್ಸಿ ಉಪಸ್ಥಿತರಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದರೊಂದಿಗೆ ಜೀವಿಜಯ ಅವರ ಸೋಲಿಗೆ ಕಾರಣರಾದವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಪಕ್ಷದ ಕಾರ್ಯಕರ್ತರು ಇದನ್ನು ಒಪ್ಪಲು ಸಾಧ್ಯವಿಲ್ಲ. ಇದು ಪರೀಕ್ಷೆ ಬರೆಯದೆ ಹಿಂಬಾಗಿಲ ಮೂಲಕ ಸರ್ಟಿಫಿಕೇಟ್‌ಪಡೆದಂತೆ ಎಂದು ಟೀಕಿಸಿದರು.
-ಯಾಲದಾಳು ಡಾ.ಮನೋಜ್ ಬೋಪಯ್ಯ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ

ತಾಕತ್ತಿದ್ದರೆ ಜೀವಿಜಯರನ್ನು ಪಕ್ಷದಿಂದ ಉಚ್ಚಾಟಿಸಲಿ: ನೂತನ ಜಿಲ್ಲಾಧ್ಯಕ್ಷರಿಗೆ ಕಾರ್ಯಕರ್ತರ ಸವಾಲ್
ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಕೆ.ಎಂ. ಗಣೇಶ್ ಅವರನ್ನು ನೇಮಕ ಮಾಡಿರುವ ಆಘಾತದಿಂದ ಕಾರ್ಯಕರ್ತರು ಹೊರಬರುವ ಮೊದಲೇ ಗಣೇಶ್ ಅವರು ಪತ್ರಿಕಾ ಹೇಳಿಕೆ ನೀಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ಕಂಡು ಬಂದರೆ ಎಷ್ಟೇ ಹಿರಿಯರಾದರೂ ಅವರನ್ನು ಉಚ್ಛಾಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಅವರ ಉದ್ಧಟತನಕ್ಕೆ ಸಾಕ್ಷಿಯಾಗಿದ್ದು, ಅವರಿಗೆ ತಾಕತ್ತಿದ್ದರೆ ಜೀವಿಜಯ ಅವರನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರಿಗೆ ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News