ಕೊಲೆಯತ್ನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Update: 2019-03-16 12:03 GMT

ಮಡಿಕೇರಿ, ಮಾ.16: ನಗರದ ಸ್ಟೋನ್‍ಹಿಲ್ ಬಳಿ ಮಾ.12 ರಂದು ರಾತ್ರಿ ಕಾರ್ಮಿಕ ಶರತ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳಾದ ಸುಜಿತ್, ಕೀರ್ತನ್, ಹರ್ಷ ಹಾಗೂ ಪುನೀತ್ ಕೃತ್ಯ ಎಸಗಿದ್ದು, ಪೊಲೀಸ್ ಕಾಯ್ದೆ 307, ರೆ/ವಿ 34ರ ಅನ್ವಯ ಮೊಕದ್ದಮೆ ದಾಖಲಾಗಿದೆ.

ಮಾ.12 ರಂದು ರಾತ್ರಿ 11.30ರ ಸುಮಾರಿಗೆ ವಿ.ಕೆ. ಉಮೇಶ್ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ರಾತ್ರಿ 8.30ರ ಸುಮಾರಿಗೆ ಆರೋಪಿಗಳು ಶರತ್‍ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದು, ಗಾಯಾಳು ರಕ್ತದ ಮಡುವಿನಲ್ಲಿ ಬಿದ್ದದ್ದನ್ನು ಗಮನಿಸಿದ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ಅಲ್ಲದೆ ಗಾಯಾಳುವನ್ನು ಆಂಬುಲೆನ್ಸ್ ನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.

ಆ ಮೇರೆಗೆ ತನಿಖೆ ಕೈಗೊಂಡು ಆರೋಪಿಗಳಾದ ಪುಟಾಣಿ ನಗರದ ರವಿ ಎಂಬವರ ಪುತ್ರ ಬಿ.ಆರ್. ಕೀರ್ತನ್ (19) ದೇಚೂರು ನಿವಾಸಿ ದಿ.ಸಂಜೀವ್ ಪುತ್ರ ಬಿ.ಎಸ್.ಪುನೀತ್ (25) ಎಂಬಿಬ್ಬರನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳಾದ ಸುಜಿತ್ (23) ಹಾಗೂ ಕೆ. ಹರ್ಷ (22) ಕೆಆರ್‍ಎಸ್ ಬಳಿ ಬಂಧಿಸಲ್ಪಟ್ಟಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಗರ ಠಾಣಾಧಿಕಾರಿ ಷಣ್ಮುಖ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾಗಿ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News