ಅನಂತ್‌ ಕುಮಾರ್‌ ಹೆಗಡೆಗೆ ಸಿದ್ದರಾಮಯ್ಯ ಟ್ವೀಟ್ ತಿರುಗೇಟು

Update: 2019-03-16 15:03 GMT

ಬೆಂಗಳೂರು, ಮಾ.16: ಜಾತ್ಯತೀತರಿಗೆ ಅಪ್ಪ-ಅಮ್ಮನ ರಕ್ತದ ಪರಿಚಯವಿರುವುದಿಲ್ಲ ಎಂಬ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆಯ ಟೀಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಅನಂತ್‌ಕುಮಾರ್ ಇತ್ತೀಚಿಗೆ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ, 'ನಮ್ಮ ತಂದೆ ಕಟ್ಟಾ ಕಾಂಗ್ರೆಸ್ಸಿಗ. ಬಿಜೆಪಿಯಿಂದ ಮೊದಲ ಬಾರಿಗೆ ಸ್ಪರ್ಧೆ ಮಾಡಿದಾಗ ನನಗೆ ಬೈದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವಂತೆ ನನಗೆ ಹೇಳಿದ್ದರು. ಐದು ಬಾರಿ ಚುನಾವಣೆಗೆ ನಿಂತಾಗಲೂ ಅವರು ನನಗೆ ಮತ ಹಾಕಿದ್ದಾರೆ ಎಂದು ನಾನು ನಂಬಿಲ್ಲ. ಆದರೆ, ಈ ಬಾರಿ ಅವರು ಮೋದಿಯನ್ನು ನೋಡಿ ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ್ದಾರೆ' ಎಂದಿದ್ದರು. ಆ ಮೂಲಕ ತಮ್ಮ ತಂದೆ ಕಟ್ಟಾ ಕಾಂಗ್ರೆಸ್‌ವಾದಿ ಎಂದು ಹೇಳಿದ್ದರು.

ಇದೇ ವಿಚಾರವನ್ನಿಟ್ಟುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಜಾತ್ಯತೀತ ಸಿದ್ಧಾಂತಕ್ಕೆ ಬದ್ಧವಾಗಿರುವ ಪಕ್ಷ. ಕಾಂಗ್ರೆಸ್‌ಗೆ ಮತ ನೀಡುವವರು ಪರೋಕ್ಷವಾಗಿ ಜಾತ್ಯತೀತರೇ ಆಗಿರುತ್ತಾರೆ. ಹಿಂದೊಮ್ಮೆ ಅನಂತ್‌ಕುಮಾರ್ ಹೆಗಡೆ ಜಾತ್ಯತೀತರಿಗೆ ಅಪ್ಪ-ಅಮ್ಮನ ರಕ್ತದ ಪರಿಚಯವಿಲ್ಲ ಎಂದು ಹೇಳಿದ್ದರು. ಅಂದು ಅನಂತ್‌ಕುಮಾರ್ ಅಪಮಾನಿಸಿದ್ದು ಜಾತ್ಯತೀತರನ್ನು ಮಾತ್ರವಲ್ಲದೆ, ಅವರ ತಂದೆಯನ್ನೂ ಅವಮಾನಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಹೆಗಡೆಯನ್ನು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News