ಕುಡಿಯುವ ನೀರಿನ ಸಮಸ್ಯೆಗೆ 24 ಗಂಟೆಯೊಳಗೆ ಸ್ಪಂದಿಸಿ: ಧಾರವಾಡ ಜಿಲ್ಲಾಧಿಕಾರಿ

Update: 2019-03-16 16:22 GMT

ಧಾರವಾಡ, ಮಾ.16: ಜಿಲ್ಲೆಯಲ್ಲಿ ತಹಶೀಲ್ದಾರರು ಸೇರಿದಂತೆ ಎಲ್ಲ ಅಧಿಕಾರಿಗಳು ಬರ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಯಾವುದೇ ಗ್ರಾಮ ಅಥವಾ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ತಕ್ಷಣ ಸ್ಪಂದಿಸಿ, 24 ಗಂಟೆಯಲ್ಲಿ ಪರಿಹರಿಸಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶಿಸಿದ್ದಾರೆ.

ಶನಿವಾರ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ, ಬರ ನಿರ್ವಹಣೆ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ನೀರಿನ ಮೂಲಗಳ ಕೊರತೆಯಿದ್ದಲ್ಲಿ ಖಾಸಗಿ ಬೋರ್‌ವೆಲ್ ನೀರು ಪಡೆಯುವ ಮೂಲಕ ಸಮಸ್ಯೆ ಪರಿಹರಿಸಿ ಎಂದು ಅವರು ಸೂಚನೆ ನೀಡಿದರು.

ಗ್ರಾಮಮಟ್ಟದ ಅಧಿಕಾರಿಗಳು ನೀಡುವ ವರದಿಯನ್ನು ಇಓ ಮತ್ತು ತಹಶೀಲ್ದಾರರು ಪರಿಶೀಲಿಸಿ, ಕಾಲಕಾಲಕ್ಕೆ ಸ್ಥಳ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ಮಾಡಬೇಕು. ಪ್ರತಿಯೊಂದರಲ್ಲೂ ಪಾರದರ್ಶಕತೆ ಇರಲಿ ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯವಿರುವ ಜನರಿಗೆ ಸ್ಥಾನಿಕವಾಗಿ ಉದ್ಯೋಗ ನೀಡಿ, ಯಾವುದೇ ಕುಟುಂಬ ಉದ್ಯೋಗ ಅರಸಿ ಬೇರೆ ಕಡೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ದೀಪಾ ಚೋಳನ್ ಹೇಳಿದರು.

ಗೋ ಶಾಲೆಗಳ ಮೂಲಕ ಮತ್ತು ಅಗತ್ಯವಿರುವ ಕಡೆ ದನಕರುಗಳಿಗೆ ಮೇವು ನೀಡಿ, ಮೇವು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು, ಅಗತ್ಯವಿರುವ ಭಾಗದಲ್ಲಿ ಸರಬರಾಜು ಮಾಡಿ ಮತ್ತು ಸರಿಯಾದ ನಿರ್ವಹಣೆ ಮಾಡಬೇಕೆಂದು ಅವರು ತಿಳಿಸಿದರು. ಕುಡಿಯುವ ನೀರು, ಉದ್ಯೋಗ ಹಾಗೂ ದನಕರುಗಳಿಗೆ ಮೇವು ಸೇರಿದಂತೆ ಬರ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆ, ಅಹವಾಲುಗಳಿದ್ದಲ್ಲಿ ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಚಿತ ಸಹಾಯವಾಣಿ ಸಂಖ್ಯೆ: 1077 ಗೆ ಕರೆ ಮಾಡಿ ಸಾರ್ವಜನಿಕರು ತಿಳಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಬರ ನಿರ್ವಹಣೆ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಸಂಯೋಜನೆ ಮಾಡುವ ಉದ್ದೇಶದಿಂದ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿ.ಪಂ.ಸಿಇಓ ಡಾ.ಬಿ.ಸಿ.ಸತೀಶ್, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ರಾಮಚಂದ್ರ ಕೆ. ಮಡಿವಾಳ, ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News