ಸುಮಲತಾ ಅಂಬರೀಶ್‌ಗೆ ನಟ ಪ್ರಕಾಶ್‌ ರೈ ಬೆಂಬಲ ಘೋಷಣೆ

Update: 2019-03-17 14:12 GMT

ಬೆಂಗಳೂರು, ಮಾ.17: ಮಂಡ್ಯದಲ್ಲಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್‌ಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಹುಭಾಷಾ ನಟ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಮಾಗಡಿ ರಸ್ತೆಯ ಅಂಜನ್ ಥಿಯೇಟರ್ ಬಳಿ ತಮ್ಮ ರಾಜಕೀಯ ನೂತನ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಪ್ರಜೆಗಳು ಭಾರತದ ಪ್ರಜೆಗಳಾಗಿ ಯೋಚನೆ ಮಾಡಬೇಕು. ಸುಮಲತಾ ಸರಿಯಾದ ರೀತಿಯಲ್ಲಿ, ಅನುಭವಸ್ಥರ ಹಾಗೆ ಮಾತನಾಡುತ್ತಿದ್ದಾರೆ. ಅವರಿಗೆ ರಾಜಕೀಯ ಗೊತ್ತಿಲ್ಲ ಅಂತ ಹೇಳಲು ಆಗುವುದಿಲ್ಲ ಎಂದು ಹೇಳಿದರು.

ಅವರು ಒಳ್ಳೆಯ ರಾಜಕೀಯ ಬೇಕು ಅಂತಾ ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯವಾಗಿ ಸ್ಪರ್ಧೆ ಮಾಡುವ ಹಕ್ಕು ಅವರಿಗಿದೆ. ಸುಮಲತಾ ಅವರು ಅಂಬರೀಶ್ ಜೊತೆ ಇದ್ದವರು, ಮಂಡ್ಯದ ಸೊಸೆ ಕೂಡ. ನನಗೆ ಹಲವು ವರ್ಷಗಳಿಂದ ಪರಿಚಯ ಇದ್ದಾರೆ. ಅವರಿಗೆ ಬೆಂಬಲವಾಗಿ ನಾನು ನಿಲ್ಲುತ್ತೇನೆ ಎಂದು ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿಗೆ ಇನ್ನೂ ರಾಜಕೀಯಕ್ಕೆ ಬರುವ ವಯಸ್ಸಲ್ಲ. ಅವರು ಇನ್ನೂ ಸ್ವಲ್ಪ ವಿಳಂಬವಾಗಿ ರಾಜಕೀಯಕ್ಕೆ ಪ್ರವೇಶ ಮಾಡಬಹುದಿತ್ತು. ನಿಖಿಲ್ ಇನ್ನೂ ಯುವಕ. ಈಗಷ್ಟೇ ಸಿನಿಮಾ ರಂಗಕ್ಕೆ ಬಂದಿದ್ದು, ಸಾಕಷ್ಟು ಅನುಭವದ ಅಗತ್ಯವಿದೆ. ನಾನಿದನ್ನು ಅವರಿಗೆ ಪ್ರೀತಿಯಿಂದಲೇ ಹೇಳುತ್ತಿದ್ದೇನೆ ಎಂದು ಹೇಳಿದರು.

ಗೌಡರ ಕುಟುಂಬ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿ, ಮಗನಿಗೆ ಅರ್ಹತೆಯಿದ್ದರೆ ಅದು ಕುಟುಂಬ ರಾಜಕೀಯ ಅಲ್ಲ. ಕುಟುಂಬ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದರೆ ಅದು ಕುಟುಂಬ ರಾಜಕೀಯವಾಗುತ್ತದೆ. ಚುನಾವಣೆಯಲ್ಲಿ ಜನರೇ ಅದನ್ನು ನಿರ್ಧಾರ ಮಾಡುತ್ತಾರೆ.

ಕಾಂಗ್ರೆಸ್ ಬೆಂಬಲ ನೀಡುವ ವಿಚಾರದ ಬಗ್ಗೆ ಮಾತನಾಡಿ, ನಾನು ಎಂದಿಗೂ ಬಿಜೆಪಿಯ ಬೆಂಬಲ ಕೇಳುವುದಿಲ್ಲ. ಅವರ ಆಡಳಿತವೂ ಈ ದೇಶಕ್ಕೆ ಬೇಕಾಗಿಲ್ಲ. ನನಗೆ ಆಮ್‌ಆದ್ಮಿ, ಸಿಪಿಎಂ, ಸಿಪಿಐ ಹಾಗೂ ದಲಿತ ಸಂಘಟನೆಗಳು ಬೆಂಬಲಿಸಿವೆ. ಇನ್ನು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಬೆಂಬಲ ಕೇಳಿದ್ದೇನೆ. ಮೈತ್ರಿ ಸರಕಾರವಿದೆ, ನೋಡೋಣ ಎಂದು ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಬೆಂಗಳೂರು ಕೇಂದ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಯಾವುದೇ ನಾಯಕರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಸಲ್ಲ. ಸ್ಪರ್ಧೆ ಮಾಡುವವರಿಗೆ ಗೆಲ್ಲುವ ಶಕ್ತಿಯಿದ್ದರೆ ಎರಡು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಮೋದಿ, ರಾಹುಲ್‌ ಗಾಂಧಿ ಯಾಕೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂದು ಪ್ರಶ್ನಿಸಿದರು.

ಎಲ್ಲಿಂದಲೋ ಇಲ್ಲಿಗೆ ಬಂದು ನಿಲ್ತೀರಲ್ಲ. ಇಲ್ಲಿನ ಜನರ ಸಮಸ್ಯೆ, ಇವರ ಕಷ್ಟ ಸುಖ ನಿಮಗೆ ಗೊತ್ತಾ? ಅಥವಾ ಸೋಲುವ ಭಯದಿಂದ ಎರಡೆರೆಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೀರಾ? ಈಗ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಗೆಲ್ಲುತ್ತೀರಾ? ಆ ಮೇಲೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಹೋಗುತ್ತೀರಾ? ಆಗ ಮತ್ತೆ ಸಾರ್ವಜನಿಕರ ದುಡ್ಡು ಖರ್ಚು ಆಗಲ್ವಾ? ಮತ್ತೆ ಚುನಾವಣೆಗೆ ಖರ್ಚಾಗುವ ಹಣ ಯಾರ ಯಾರ ಮನೆಯದ್ದು ಎಂದು ಪ್ರಕಾಶ್ ರೈ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News