ಶಿವಮೊಗ್ಗ ಲೋಕಸಭಾ ಕ್ಷೇತ್ರ: ಮಧು ಬಂಗಾರಪ್ಪ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನ
ಶಿವಮೊಗ್ಗ, ಮಾ. 17: ಮಧು ಬಂಗಾರಪ್ಪ ಕೂಡ ನನಗೆ ಮೊಮ್ಮಗ ಇದ್ದ ಹಾಗೆ. ಅವರ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಮೊಮ್ಮಕ್ಕಳ ಗೆಲುವಿಗೆ ದೇವೇಗೌಡರು ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರಚಾರವಾಗುತ್ತಿದೆ. ಒಟ್ಟಾರೆ ನನ್ನ ಮೊಮ್ಮಕ್ಕಳ ಗೆಲುವಿಗೆ ಶ್ರಮಿಸುವ ರೀತಿಯಲ್ಲಿ ಮಧು ಬಂಗಾರಪ್ಪರ ಗೆಲುವಿಗೂ ಶ್ರಮಿಸುತ್ತೇನೆ ಎಂದು ಅವರು ಹೇಳಿದರು. ಮಧು ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತಂತೆ, ಮಾಜಿ ಸಚಿವ ಕಾಗೋಡು ತಿಮ್ಮಪ್ಪರ ಜೊತೆ ಸಮಾಲೋಚನೆ ನಡೆಸುತ್ತೇನೆ. ಸಚಿವ ಡಿ.ಕೆ.ಶಿವಕುಮಾರ್ ಕೂಡ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಮೈತ್ರಿ ಪಕ್ಷದ ನಾಯಕರು ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ಅವರು ನುಡಿದರು.
ಸಚಿವ ದೇಶಪಾಂಡೆಯವರು ತಮ್ಮನ್ನು ಭೇಟಿಯಾಗಿ ಚರ್ಚೆ ನಡೆಸಿದ ವೇಳೆ, ಅವರ ಮಗನನ್ನ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ವಿಷಯದ ಕುರಿತಂತೆ ಯಾವುದೇ ಚರ್ಚೆಯಾಗಿಲ್ಲ. ಆ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ನಿರಾಕರಣೆ: ಪಕ್ಷದ ಮುಖಂಡ ದಾನಿಶ್ ಅಲಿ ಬಿಎಸ್ಪಿ ಸೇರ್ಪಡೆಯಾದ ಕುರಿತಂತೆ ಪ್ರತಿಕ್ರಿಯೆ ನೀಡಲು ದೇವೇಗೌಡರು ನಿರಾಕರಿಸಿದರು. ದಾನಿಶ್ ಅಲಿ ಕುರಿತಂತೆ ಸುದ್ದಿಗಾರರು ಪ್ರಶ್ನಿಸುತ್ತಿದ್ದಂತೆ, ದೇವೇಗೌಡರು ಸುದ್ದಿಗಾರರತ್ತ ಕೈ ಮುಗಿದು ಮುಂದೆ ಸಾಗಿದರು.