ಮಾ.22 ರಿಂದ ಕೊಂಡಂಗೇರಿ ಮಖಾಂ ಉರೂಸ್
ಮಡಿಕೇರಿ, ಮಾ.21: ಕೊಂಡಂಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಬಹು ಮರ್ಹೂಂ ಅಸಯ್ಯಿದ್ ಅಬ್ದುಲ್ಲಾಹಿ ಸಖಾಫ್ ಅಲ್ ಹಳ್ರಮಿ ಹಾಗೂ ಪವಾಡ ಪುರುಷರುಗಳ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮಖಾಂ ಉರೂಸ್ ಮಾ.22 ರಿಂದ 29ರ ವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಕೊಂಡಗೇರಿ ಸುನ್ನಿ ಮುಸ್ಲಿಂ ಜಮಾಅತ್ನ ಸಂಚಾಲಕ ಹನೀಫ್ ಸಖಾಫಿ ಈ ಬಗ್ಗೆ ಮಾಹಿತಿ ನೀಡಿ, ಮಾ. 22 ರಂದು ಮಧ್ಯಾಹ್ನ 2 ಗಂಟೆಗೆ ಮಸೀದಿಯ ಮುಖ್ಯ ದ್ವಾರದ ಉದ್ಘಾಟನೆ ನಡೆಯಲಿದ್ದು, ಇದರ ನೇತೃತ್ವವನ್ನು ಕಣ್ಣೂರು ಮಡಕರದ ಸುಹೈಲ್ ಸಖಾಫ್ ತಂಙಳ್ ಮತ್ತು ಕೊಂಡಂಗೇರಿ ಮುದರಿಸ್ ಉಮ್ಮರ್ ಸಖಾಫಿ ವಹಿಸಲಿದ್ದಾರೆ. ಬಳಿಕ ಧ್ವಜಾರೋಹಣದ ಮೂಲಕ ಉರೂಸ್ಗೆ ಚಾಲನೆ ಸಿಗಲಿದೆ. ಅಂದು ರಾತ್ರಿ 8.30 ಗಂಟೆಗೆ ಕೊಂಡಂಗೇರಿ ಉಮ್ಮರ್ ಸಖಾಫಿ ಅವರು ಮತ ಪ್ರಭಾಷಣಗೈಯಲಿದ್ದಾರೆ. ಜಲಾಲಿಯ ರಾತೀಬ್ ನೇತೃತ್ವವನ್ನು ಕುಂಬೋಲ್ ಅಸ್ಸಯ್ಯಿದ್ ಜಹಫರ್ ಸಾದಿಕ್ ತಂಙಳ್ ವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಮಾ.23 ರಂದು ರಾತ್ರಿ 8.30 ಗಂಟೆಗೆ ಆಟೀರಿ ತಂಙಳ್ ಸಯ್ಯದ್ ಅಬ್ದುಲ್ ರಹ್ಮಾನ್ ದಾರಿಮಿ, ಮಾ.24 ರಂದು ಪಾಂಡಿಕಾಡ್ ಝಬೈರ್ ಲತೀಫಿ ಮುಖ್ಯ ಭಾಷಣ ಮಾಡಲಿದ್ದಾ. ಮಾ.25 ರಂದು ಬೆಳಿಗ್ಗೆ 5 ಗಂಟೆಗೆ ಮೌಲೂದ್ ಪಾರಾಯಣ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಧಾರ್ಮಿಕ ಪ್ರವಚನ ನಡೆಯಲಿದೆ. ಕೊಡಗು ಜಿಲ್ಲಾ ನಾಯಿಬ್ ಖಾಝಿ ಅಲ್ಹಾಜ್ ಕೆ.ಎ.ಮಹಮೂದ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಕೂಟಂಬಾರ ಅಬ್ದುಲ್ ರೆಹಮಾನ್ ದಾರಿಮಿ ಮುಖ್ಯ ಭಾಷಣ ಮಾಡಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಅನ್ನದಾನ ನಡೆಯಲಿದ್ದು, ರಾತ್ರಿ 8.30 ಗಂಟೆಗೆ ಕಾಂತಪುರಂ ಡಾ.ಎ.ಪಿ.ಅಬ್ದುಲ್ ಹಕೀಮ್ ಅಝ್ಹರಿ ಮುಖ್ಯ ಭಾಷಣ ಮಾಡಲಿದ್ದಾರೆ.
ಮಾ. 26 ರಂದು ರಾತ್ರಿ 8.30ಕ್ಕೆ ಕಳಸ ನೌಫಲ್ ಸಖಾಫಿ, ಮಾ.27 ರಂದು ಕಿಲ್ಲೂರ್ ಹಮೀದ್ ಫೈಝಿ, ಮಾ. 28 ರಂದು ಗೂಡಲ್ಲೂರ್ ಮಶ್ಹೂದ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆಂದು ವಿವರಿಸಿದರು.
ಮಾ.29 ರಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಭಾಷಣಕಾರರಾಗಿ ಕುಟ್ಯಾಡಿ ಸಿರಾಜುಲ್ ಹುದಾ ಜನರಲ್ ಸೆಕ್ರೆಟರಿ ಪೇರೋಡ್ ಅಬ್ದುಲ್ ರೆಹ್ಮಾನ್ ಸಖಾಫಿ ಭಾಗವಹಿಸಲಿದ್ದಾರೆ. ಉರೂಸ್ ನಡೆಯುವ ಪ್ರತಿ ದಿನ ರಾತ್ರಿ 7 ಗಂಟೆಗೆ ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ದಫ್ ಕಾರ್ಯಕ್ರಮ ಹಾಗೂ ಎಂ.ಎಸ್.ಎಸ್.ಎ ದರ್ಸ್ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತ್ನ ಮುಖ್ಯಸ್ಥ ಕೆ.ಎಂ.ಯಾಹ್ಯಾ, ಉಪಾಧ್ಯಕ್ಷ ಎಂ.ಎಂ. ಮುಹಮ್ಮದ್ ಹಾಜಿ, ಪ್ರಧಾನ ಕಾರ್ಯದರ್ಶಿ ಪಿ.ಇ.ಶಾದುಲಿ, ಸದಸ್ಯರಾದ ಪಿ.ಎ. ಅಬ್ಬಾಸಿ ಉಪಸ್ಥಿತರಿದ್ದರು.