ಬೇಸಿಗೆ ಕಾವು: ಕಾವೇರಿ ನದಿ ನೀರು ಬಳಸಿದರೆ ಕಠಿಣ ಕ್ರಮ- ಜಿಲ್ಲಾಧಿಕಾರಿ ಎಚ್ಚರಿಕೆ

Update: 2019-03-23 11:59 GMT

ಮಡಿಕೇರಿ, ಮಾ.23: ಕಾವೇರಿ ನದಿ ಮೂಲದಲ್ಲಿ ಯಾವುದೇ ಪಂಪ್ ಸೆಟ್‍ಗಳನ್ನು ಅಳವಡಿಸಿಕೊಂಡು ತೋಟಗಳಿಗೆ ಉಪಯೋಗಿಸುವುದಾಗಲಿ ಹಾಗೂ ಇತರ ಯಾವದೇ ಕೆಲಸ ಕಾರ್ಯಗಳಿಗೆ ಕಾವೇರಿನದಿಗೆ ಪಂಪ್ ಸೆಟ್‍ನ್ನು ಅಳವಡಿಸುವದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದನ್ನು ಮೀರಿ ನದಿ ಮೂಲದ ರೈತರು ಪಂಪ್‍ಸೆಟ್ ಮೂಲಕ ಕಾವೇರಿ ನದಿ ನೀರನ್ನು ಎತ್ತುತಿರುವದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ನಡೆದ ಸಭೆಯ ತೀರ್ಮಾನದಂತೆ ಕಾವೇರಿ ನದಿ ಮೂಲದಿಂದ ನೀರು ಸಂಗ್ರಹಿಸಿ ಕುಶಾಲನಗರ ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಪ್ರತಿನಿತ್ಯ 4 ಎಂಎಲ್‍ಡಿ ಕುಡಿಯುವ ನೀರಿನ ಅವಶ್ಯಕತೆ ಇದ್ದು, ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಅಭಾವ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವದರಿಂದ ಮೂರು ಕುಡಿಯುವ ನೀರಿನ ಟ್ಯಾಂಕರನ್ನು ಬಾಡಿಗೆಗೆ ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗಿದೆ.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೇಸಿಗೆಯಿಂದ ನೀರಿನ ಅಭಾವ ಉಂಟಾಗಿದ್ದು, ನೀರಿನ ಮೂಲ ಕಡಿಮೆಯಾಗಿರುವದರಿಂದ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡಲು ಕಷ್ಟ ಸಾಧ್ಯವಾಗಿದೆ. ಕುಶಾಲನಗರಕ್ಕೆ ಕುಡಿಯುವ ನೀರಿನ ಅವಶ್ಯಕತೆ ಇರುವದರಿಂದ ಚಿಕ್ಲಿಹೊಳೆಯಿಂದ 100 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡುವಂತೆ ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಕ್ತ ನಿರ್ದೇಶನ ನೀಡಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಮೂಲದಲ್ಲಿ ಯಾವದೇ ಪಂಪ್ ಸೆಟ್‍ಗಳನ್ನು ಅಳವಡಿಸಿಕೊಂಡು ತೋಟಗಳಿಗೆ ಉಪಯೋಗಿಸುವದಾಗಲಿ ಹಾಗೂ ಇತರ ಯಾವದೇ ಕೆಲಸ ಕಾರ್ಯಗಳಿಗೆ ಕಾವೇರಿ ನದಿಗೆ ಪಂಪ್ ಸೆಟ್‍ನ್ನು ಅಳವಡಿಸುವದನ್ನು ನಿಷೇಧಿಸಲಾಗಿದೆ. ಅಲ್ಲದೆ ಸೆಕ್ಷನ್ 144ನ್ನು  ಜಾರಿಗೊಳಿಸಲಾಗಿರುತ್ತದೆ. ಇದನ್ನು ಮೀರಿ ನದಿ ಮೂಲದ ರೈತರು ಪಂಪ್‍ಸೆಟ್ ಮೂಲಕ ಕಾವೇರಿ ನದಿ ನೀರನ್ನು ಎತ್ತುತಿರುವದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News