ಗೊತ್ತಿಲ್ಲದಂತೆ ಟಿಕೆಟ್ ಘೋಷಣೆ ಮಾಡಿ ಸಪ್ರೈಸ್ ಕೊಟ್ಟಿದೆ: ಶಾಮನೂರು ಶಿವಶಂಕರಪ್ಪ

Update: 2019-03-24 18:45 GMT

ದಾವಣಗೆರೆ,ಮಾ.24: ನನಗೆ ಗೊತ್ತಿಲ್ಲದಂತೆ ನನ್ನ ಹೆಸರು ಘೋಷಣೆ ಮಾಡಿ ನನಗೆ ಸಪ್ರೈಸ್ ಕೊಟ್ಟಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹರ್ಷ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆಲ್ಲಾ ವಯಸ್ಸಾಗಿದೆ ಟಿಕೇಟ್ ನೀಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ಇದೀಗ ಅವರೆ ನನಗೆ ಟಿಕೇಟ್ ನೀಡಿದ್ದಾರೆ. ನಾನು ಟಿಕೇಟ್‍ಗಾಗಿ ದೆಹಲಿಗೆ ಹೋಗಿ ಯಾವುದೇ ಪ್ರಯತ್ನ ನಡೆಸಿಲ್ಲ, ದೆಹಲಿಯಿಂದಲೇ ನನಗೆ ಟಿಕೇಟ್ ಘೋಷಣೆಯಾಗಿದೆ. ನನಗೆ ಟಿಕೇಟ್ ನೀಡಿರುವುದು ಆಶ್ಚರ್ಯದ ಜೊತೆಗೆ ಖುಷಿ ತಂದಿದೆ. ಮಲ್ಲಿಕಾರ್ಜುನ್‍ಗೆ ಟಿಕೇಟ್ ಕೊಡುವಂತೆ ನಾನು ಕೇಳುವುದಿಲ್ಲ, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನಾನು ಈ ಹಿಂದೆ ಒಂದು ಬಾರಿ ಸಂಸದನಾಗಿದ್ದೆ. 5 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಇಂದು ಬೆಂಗಳೂರಿಗೆ ಹೋಗಿ ಚುನಾವಣಾ ಪ್ರಚಾರದ ಬಗ್ಗೆ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.

1 ಲಕ್ಷ ಅಂತರದಲ್ಲಿ ಗೆಲ್ಲುವುದಾಗಿ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಪಕ್ಷದ ಅಭ್ಯರ್ಥಿ ಕೂಡ ಸೋಲುತ್ತೇವೆ ಎಂದು ಹೇಳುವುದಿಲ್ಲ, ಈ ರೀತಿ ಹೇಳಿಕೆ ಸಾಮಾನ್ಯ. ನಾನು ಕೂಡ 2 ಲಕ್ಷದ ಅಂತರದಲ್ಲಿ ಗೆಲ್ಲುತ್ತೇನೆ. ಜಿ.ಎಂ.ಸಿದ್ದೇಶ್ವರ್ ಅವರ ಠೇವಣಿಯನ್ನು ಕಳೆಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಜಿಪಂ ಸದಸ್ಯ ಬಸವಂತಪ್ಪ, ಎಂ.ಹಾಲೇಶ್, ಗೌಡ್ರುಚನ್ನಬಸಪ್ಪ, ಬಿ.ಹೆಚ್.ವೀರಭದ್ರಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News