ಸುಮಲತಾ ಪರ ದರ್ಶನ್‍ ಬಿರುಸಿನ ಪ್ರಚಾರ: 'ಕೈ' ನಾಯಕರ ಸಾಥ್

Update: 2019-04-03 16:25 GMT

ಮಂಡ್ಯ, ಎ.3: ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ಬಿರುಸಿನ ಪ್ರಚಾರ ಮುಂದುವರಿಸಿರುವ ನಟ ದರ್ಶನ್, ಬುಧವಾರ ಕೃಷ್ಣರಾಜಪೇಟೆ ತಾಲೂಕಿನಲ್ಲಿ ಮತಯಾಚನೆ ನಡೆಸಿದರು. ಈ ವೇಳೆ ಅವರಿಗೆ ಭರ್ಜರಿ ಬೆಂಬಲ ದೊರೆಯಿತು.

ತೆಂಡೇಕೆರೆ ಗ್ರಾಮದ ಮೂಲಕ ಪ್ರಚಾರ ಆರಂಬಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಅಭಿಮಾನಿಗಳು ಭಾರೀ ಗಾತ್ರದ ಹೂಮಾಲೆಯನ್ನು ಸಮರ್ಪಿಸಿ ಸ್ವಾಗತಿಸಿದರು. ದರ್ಶನ ಅವರ ಪ್ರಚಾರ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ದರ್ಶನ್ ಅವರೊಂದಿಗೆ ಪ್ರಚಾರ ವಾಹನವನ್ನೇರಿ ಸುಮಲತಾ ಅವರ ಪರವಾದ ಪ್ರಚಾರ ಕಾರ್ಯಕ್ಕೆ ಸಾಥ್ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಜಿಪಂ ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡೇ ದರ್ಶನ್ ಅವರೊಂದಿಗೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಮೈತ್ರಿ ಧರ್ಮವನ್ನು ಗಾಳಿಗೆ ತೂರಿದರು.

ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ಅಮ್ಮ ಸುಮಲತಾ ಅವರನ್ನು ಭಾರೀ ಬಹು ಮತಗಳ ಅಂತರದಿಂದ ಗೆಲ್ಲಿಸಿಕೊಡುವ ಮೂಲಕ ಜಿಲ್ಲೆಯಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಬೇಕು ಎಂದು ದರ್ಶನ್ ಮನವಿ ಮಾಡಿದರು. ಅಭಿಮಾನಿಗಳೇ ನನ್ನ ಬಾಸ್. ನಿಮ್ಮಿಂದ ನಾನು ಬಾಸ್ ಆಗಿದ್ದೇನೆ. ಅಭಿಮಾನಿಗಳು ನೀಡುವ ಪ್ರೀತಿ ವಿಶ್ವಾಸ ಕೋಟಿ ರೂ.ಗಳಿಗೂ ಸಮವಲ್ಲ ಎಂದು ದರ್ಶನ್ ಹೇಳಿದರು.

ಅಂಬರೀಷ್ ಅಪ್ಪಾಜಿ ಮಂಡ್ಯ ಸೇರಿದಂತೆ ರಾಜ್ಯದ ಜನರ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಆಶಯಗಳ ಈಡೇರಿಕೆಗಾಗಿ ಅಮ್ಮ ಸುಮಲತಾ ಅವರನ್ನು ಬೆಂಬಲಿಸಿ 20ನೇ ಕ್ರಮಸಂಖ್ಯೆಯ ರಣಕಹಳೆ ಊದುತ್ತಿರುವ ರೈತನ ಗುರುತಿಗೆ ನಿಮ್ಮ ಮತ ನೀಡಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News