ರೈತರ ಕಷ್ಟ ಗೊತ್ತು, ಬಿಸಿಲಿನ ತಾಪವೂ ಗೊತ್ತು: ಸಿಎಂ ಹೇಳಿಕೆಗೆ ಯಶ್ ತಿರುಗೇಟು

Update: 2019-04-03 17:17 GMT

ಮಂಡ್ಯ, ಎ.3: ನಾವು ಬಡವರು. ಬಿಸಿಲಿನಲ್ಲೇ ಚಿನ್ನಿದಾಂಡು ಆಡಿ ಬೆಳೆದವರು. ಬಿಸಿಲಿನಲ್ಲಿ ಬದುಕು ಕಂಡುಕೊಂಡವರು. ಬಿಸಿಲಿಗೆ ಹೆದರಲು ಹೇಗೆ ಸಾಧ್ಯ ಎಂದು ನಟ ಯಶ್ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಛತ್ರಿ ನೆರಳಿನಲ್ಲಿ ಶೂಟಿಂಗ್ ಮಾಡಿಕೊಂಡಿರುವವರಿಗೆ ಬಿಸಿಲಿನಲ್ಲಿ ದುಡಿಯುತ್ತಿರುವ ನಮ್ಮ ರೈತರ ಕಷ್ಟ ಹೇಗೆ ಗೊತ್ತು ಎಂಬುದಾಗಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಬುಧವಾರ ಶ್ರೀರಂಗಪಟ್ಟಣ, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರ ಪ್ರಶ್ನೆಗೆ ಯಶ್ ಈ ರೀತಿ ಪ್ರತಿಕ್ರಿಯೆ ನೀಡಿದರು.

ನಾನು ಸಾಮಾನ್ಯ ಡ್ರೈವರೊಬ್ಬರ ಮಗ. ಬಿಸಿಲಿನಲ್ಲಿ ಚಿನ್ನಿದಾಂಡು ಆಡಿಕೊಂಡು ಬೆಳೆದವನು. ರೈತರ ಕಷ್ಟ ಗೊತ್ತು, ಬಿಸಿಲಿನ ತಾಪವೂ ಗೊತ್ತು. ಬಹುಶಃ ಅವರ ಪುತ್ರ ನಿಖಿಲ್ ಕುರಿತು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿರಬಹುದು ಎಂದು ಪರೋಕ್ಷವಾಗಿ ಯಶ್ ತಿರುಗೇಟು ನೀಡಿದರು.

ಸುಮಲತಾ ಜಾತಿ ಮೂಲವನ್ನು ಕೆದಕ್ಕಿದ್ದ ಸಂಸದ ಎಲ್.ಆರ್.ಶಿವರಾಮೇಗೌಡ, ತಾವು ಆ ಬಗ್ಗೆ ಹೇಳಿಯೇ ಇಲ್ಲವೆಂದು ಹೇಳಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಮಾತನ್ನು ಬದಲಿಸಿಕೊಳ್ಳುವವರ ವಿಚಾರಗಳಿಗೆ ಕಿವಿಗೊಡದಿರುವುದೇ ಸರಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News