ಪೆರುಂಬಾಡಿ ಚೆಕ್‍ಪೋಸ್ಟ್ ನಲ್ಲಿ ಕರ್ತವ್ಯ ಲೋಪ: ಪ್ರಬಾರ ಸಾರಿಗೆ ಅಧಿಕಾರಿ ಅಮಾನತು

Update: 2019-04-09 18:39 GMT

ಮಡಿಕೇರಿ,ಎ.9 : ವಿರಾಜಪೇಟೆ ಸಮೀಪದ ಪೆರುಂಬಾಡಿ ಚೆಕ್‍ಪೋಸ್ಟ್‍ನಲ್ಲಿ ಮಾ.28ರಂದು ರಾತ್ರಿ 10ಗಂಟೆಯ ಸಮಯದಲ್ಲಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕೊಡಗು ಜಿಲ್ಲಾ ಸಾರಿಗೆ ಇಲಾಖೆಯ ಪ್ರಬಾರ ಅಧಿಕಾರಿ ಜೆ.ಪಿ.ಗಂಗಾಧರ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. 

ಕೊಡಗು ಜಿಲ್ಲಾಧಿಕಾರಿಗಳು ಪ್ರಬಾರ ಸಾರಿಗೆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸಾರಿಗೆ ಆಯುಕ್ತರಿಗೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಸಾರಿಗೆ ಆಯುಕ್ತರು ಮತ್ತು ಶಿಸ್ತು ಸಮಿತಿಯು ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. 

ಚುನಾವಣಾ ಕರ್ತವ್ಯದಲ್ಲಿದ್ದ ಎಸ್.ಎಸ್.ಟಿ ತಂಡದ ಅಧಿಕಾರಿ ಹಾಗೂ ಪೆರುಂಬಾಡಿ ಚೆಕ್‍ಪೋಸ್ಟ್ ನಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದ ಹಾತೂರು ಗ್ರಾಪಂ ಪಿಡಿಓ ಕೆ.ಎಂ.ತಿಮ್ಮಯ್ಯ ಅವರು ಗಂಗಾಧರ್ ಅವರೊಂದಿಗೆ ಕಲಹ ನಡೆಸಿದ ಆರೋಪದಡಿ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ಸ್ ಅವರು ಜಿ.ಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ಸೂಚನೆ ನೀಡಿದ್ದಾರೆ. 

ಸಾರಿಗೆ ಇಲಾಖೆಯ ಪ್ರಭಾರ ಅಧಿಕಾರಿ ಗಂಗಾಧರ ಅವರನ್ನು ಜಿಲ್ಲಾ ಚುನಾವಣಾ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಆದರೆ ಚೆಕ್‍ಪೋಸ್ಟ್ ನಲ್ಲಿ ತಪಾಸಣೆ ಮಾಡುವಂತೆ ಯಾವುದೇ ಸೂಚನೆ ನೀಡಿರಲಿಲ್ಲ. ಹೀಗಿದ್ದರೂ, ಮಾರ್ಚ್ 28ರಂದು ರಾತ್ರಿ 10ಗಂಟೆಗೆ ಪೆರುಂಬಾಡಿ ಚೆಕ್‍ಪೋಸ್ಟ್ ಗೆ ತೆರಳಿ ಕೇರಳ-ಕೊಡಗು ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪ್ರಬಾರ ಸಾರಿಗೆ ಅಧಿಕಾರಿ ಗಂಗಾಧರ ತಪಾಸಣೆ ನಡೆಸಿದ್ದರು. ಈ ವಿಚಾರವಾಗಿ ಸ್ಥಳದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಎಸ್.ಎಸ್.ಟಿ ಅಧಿಕಾರಿ ಕೆ.ಎಂ ತಿಮ್ಮಯ್ಯ ಮತ್ತು ಸಾರಿಗೆ ಅಧಿಕಾರಿ ಗಂಗಾಧರ ಅವರುಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. 

ಗಂಗಾಧರ ಅವರು ವಾಹನ ತಪಾಸಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಿದಲ್ಲದೇ, ಚುನಾವಣಾ ಕರ್ತವ್ಯದಲ್ಲಿದ್ದ ನನ್ನನ್ನು ಕೂಡ ಅವಮಾನಿಸಿದ್ದಾರೆ ಎಂದು ತಿಮ್ಮಯ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಪ್ರತಿಯಾಗಿ ಗಂಗಾಧರ ಅವರು ಕೂಡ ತಿಮ್ಮಯ್ಯ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿಡಿಯೋ ಕ್ಲಿಪ್ ಸಾಕ್ಷಿಯೊಂದಿಗೆ ದೂರು ನೀಡಿದ್ದರು. ಈ ಎರಡೂ ದೂರುಗಳ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯಾದ ಅನೀಸ್ ಕಣ್ಮಣಿ ಜಾಯ್ ಅವರು ಕರ್ತವ್ಯದಲ್ಲಿದ್ದ ಇಬ್ಬರೂ ಅಧಿಕಾರಿಗಳು ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ವರದಿ ನೀಡಿದ್ದರು. 

ಸಾರಿಗೆ ಇಲಾಖೆಯ ಅಧಿಕಾರಿ ಅವರನ್ನು ಕರ್ತವ್ಯದಿಂದ ಅಮಾನತು ಮಾಡುವಂತೆ ಸಾರಿಗೆ ಆಯುಕ್ತರಿಗೆ ಶಿಫಾರಸು ಮಾಡಿದ್ದರು. ಎಸ್.ಎಸ್.ಟಿ. ಅಧಿಕಾರಿ ಕೆ.ಎಂ.ತಿಮ್ಮಯ್ಯ ಅವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿ.ಪಂ ಸಿ.ಇ.ಓ. ಅವರಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News