ಶಿವಮೊಗ್ಗ- ಶಿಕಾರಿಪುರದಲ್ಲಿ ರಸ್ತೆ ಅಪಘಾತ: ಮೂವರು ಸಾವು, ಇಬ್ಬರಿಗೆ ಗಾಯ

Update: 2019-04-13 13:53 GMT

ಶಿವಮೊಗ್ಗ, ಎ.13: ಜಿಲ್ಲೆಯ ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ. 

ಶಿವಮೊಗ್ಗ ವರದಿ: ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಹಾಲ್ಕುಣಿ ಗ್ರಾಮದ ದೊಡ್ಡಹಳ್ಳದ ಬಳಿ ಮಾರುತಿ ಓಮ್ನಿ ಢಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಬೈಕ್ ಚಲಾಯಿಸುತ್ತಿದ್ದ ಮನೋಜ್ (22) ಹಾಗೂ ಹಿಂಬದಿ ಸವಾರ ಆತನ ಸ್ನೇಹಿತ ಧನಂಜಯ (24) ಮೃತಪಟ್ಟವರೆಂದು ಗುರುತಿಸಲಾಗಿದೆ. ಮನೋಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಧನಂಜಯ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಮಾರುತಿ ಓಮ್ನಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಮಾರುತಿ ಓಮ್ನಿ ಚಾಲಕನ ಅಜಾಗರೂಕತೆ, ಅತೀ ವೇಗದ ಚಾಲನೆಯೇ ಕಾರಣವೆಂದು ಹೇಳಲಾಗಿದೆ. ಓಮ್ನಿ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಶಿಕಾರಿಪುರ ವರದಿ: ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಮಳವಳ್ಳಿ ಗ್ರಾಮದ ಬಳಿ ರಸ್ತೆ ಮೇಲೆ ಹಾಕಿದ್ದ ಮೆಕ್ಕೆಜೋಳದ ರಾಶಿಯಿಂದ ಬೈಕ್ ಸ್ಕಿಡ್ ಆಗಿ ಬಿದ್ದು ಚಾಲಕ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಮಲ್ಲೇನಹಳ್ಳಿ ಗ್ರಾಮದ ನಿವಾಸಿ ಕೆ. ಬಸವನಗೌಡ ಮೃತಪಟ್ಟವರೆಂದು ಗುರುತಿಸಲಾಗಿದೆ. ಹರೀಶ ಎಂಬುವರಿಗೆ ಗಾಯವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News