ಮೂರು ಎಂಜಿನಿಯರ್ ಕಾಲೇಜು ಆರಂಭಕ್ಕೆ ಪತ್ರ
ಬೆಂಗಳೂರು, ಎ.13: ರಾಜ್ಯದಲ್ಲಿ 2019-20ನೆ ಸಾಲಿನಿಂದ ಮೂರು ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಆರಂಭವಾಗುವ ಸಾಧ್ಯತೆಯಿದ್ದು, ತಾಂತ್ರಿಕ ಶಿಕ್ಷಣ ಇಲಾಖೆ ಎಐಸಿಟಿಇಗೆ ಪತ್ರ ಬರೆದಿದೆ.
ರಾಜ್ಯಾದ್ಯಂತ 11 ಸರಕಾರಿ ಕಾಲೇಜುಗಳಿದ್ದು, ಅದರಲ್ಲಿ ಸುಮಾರು 2400 ವಿದ್ಯಾರ್ಥಿಗಳು ಕಲಿಯಲು ಅವಕಾಶವಿದೆ. ಅದರ ಜತೆಗೆ ಮೂರು ಕಾಲೇಜುಗಳು ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಇನ್ನು ಹೆಚ್ಚುವರಿಯಾಗಿ 700 ಸೀಟುಗಳು ಸಿಗಲಿವೆ ಎಂದು ಅಂದಾಜಿಸಲಾಗಿದೆ.
ಎಲ್ಲೆಲ್ಲಿ ಆರಂಭ: ಕೊಪ್ಪಳದ ತಳಕಲ್, ಹಾಸನದ ಮೊಸಳೆಹೊಸಹಳ್ಳಿ ಮತ್ತು ಗಂಗಾವತಿಯಲ್ಲಿ ಹೊಸದಾಗಿ 3 ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿದಂತೆ ಅಖಿಲ ಭಾರತಿಯ ತಾಂತ್ರಿಕ ಶಿಕ್ಷಣ ಪರಿಷತ್ತಿಗೆ (ಎಐಸಿಟಿಇ) ತಾಂತ್ರಿಕ ಶಿಕ್ಷಣ ಇಲಾಖೆ ಪತ್ರ ಬರೆದಿದೆ ಎನ್ನಲಾಗಿದೆ.
ಎಐಟಿಇ ಅಧಿಕಾರಿಗಳ ತಂಡ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸಿ ಅನುಮತಿ ನೀಡಬೇಕು. ಹೀಗಾಗಿ, ಎಪ್ರಿಲ್ ಅಥವಾ ಮೇ ನಲ್ಲಿ ಅಧಿಕಾರಿಗಳ ತಂಡ ರಾಜ್ಯಕ್ಕಾಗಮಿಸುವ ಸಾಧ್ಯತೆಯಿದ್ದು, ಪ್ರತಿ ಕಾಲೇಜಿನಲ್ಲಿ ನಾಲ್ಕು ಕೋರ್ಸ್ ಹಾಗೂ 60 ವಿದ್ಯಾರ್ಥಿಗಳಿಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಕಡಿಮೆ ಶುಲ್ಕ: ಸರಕಾರಿ ಕಾಲೇಜುಗಳಲ್ಲಿ ವಾರ್ಷಿಕ ಪ್ರವೇಶ ಶುಲ್ಕ 18,090 ರೂ. ಇರುತ್ತದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಖಾಸಗಿ ಕಾಲೇಜುಗಳ ಶುಲ್ಕ ಹೆಚ್ಚಳದಿಂದ ವಿದ್ಯಾರ್ಥಿಗಳು ಬೇಸತ್ತಿದ್ದಾರೆ. ಹೀಗಾಗಿ ಹೆಚ್ಚೆಚ್ಚು ಇಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುವಂತೆ ಹಲವು ಬಾರಿ ಎಂಜಿನಿಯರಿಂಗ್ ಕಾಲೇಜು ತೆಗೆಯಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದರು.