ಶಾಸಕ ರವಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜೆಡಿಎಸ್ನಿಂದ ದೂರು
ಚಿಕ್ಕಮಗಳೂರು, ಎ.14: ಶಾಸಕ ಸಿ.ಟಿ.ರವಿ ಇತ್ತೀಚೆಗೆ ನಡೆದ ಪಕ್ಷದ ಸಭೆಯೊಂದರಲ್ಲಿ ಬಿಜೆಪಿಗೆ ಮತ ನೀಡದವರ ಬಗ್ಗೆ ತಾಯಿಗಂಡರು ಎಂದು ಅವಹೇಳನಕಾರಿ ಭಾಷೆಯನ್ನು ಬಳಸಿ ಭಾಷಣ ಮಾಡಿದ್ದಾರೆ. ರವಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಸಿರಾಜ್ ಹುಸೈನ್ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ಶಾಸಕ ಸಿ.ಟಿ.ರವಿ ತಮ್ಮ ಅಭ್ಯರ್ಥಿ ಪರ ಮತ ಯಾಚಿಸುವ ಸಂದರ್ಭದಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡಿ ಬಿಜೆಪಿಗೆ ಮತ ನೀಡದ ಅಲ್ಪಸಂಖ್ಯಾತರು ಮತ್ತು ಕ್ರಿಶ್ಚಿಯನ್ನರು ತಾಯ್ಗಂಡರು ಎಂದಿರುವುದು ಮತ್ತು ಮೋದಿಗೆ ಓಟ್ ನೀಡದವರು ದೇಶದ್ರೋಹಿಗಳು ಎಂದು ಹೀಯಾಳಿಸುವ ಮೂಲಕ ಬಿಜೆಪಿಗೆ ಮತ ಹಾಕುವಂತೆ ಎಚ್ಚರಿಕೆ ರೂಪದಲ್ಲಿ ಮಾತನಾಡಿದ್ದಾರೆ ಎಂದು ದೂರಿದ್ದಾರೆ.
ಈ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ದಮನಿಸುವ ಯತ್ನವಾಗಿದೆ. ಚುನಾವಣಾಧಿಕಾರಿಗಳು ರವಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.