100 ದಿನಗಳ ಕಾರ್ಯಸೂಚಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಮೋದಿ ಸೂಚನೆ

Update: 2019-04-15 03:51 GMT

ಹೊಸದಿಲ್ಲಿ, ಎ.15: ಲೋಕಸಭಾ ಚುನಾವಣೆಯ ಮತ ಎಣಿಕೆ ಮೇ 23ರಂದು ನಡೆಯಲಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಎರಡಂಕಿ ದರದಲ್ಲಿ ಜಿಡಿಪಿ ಪ್ರಗತಿಯಾಗುವುದಕ್ಕೆ ಪೂರಕವಾದ 100 ದಿನಗಳ ಕಾರ್ಯಸೂಚಿಯನ್ನು ಸಿದ್ಧಪಡಿಸುವಂತೆ ಪ್ರಧಾನಿ ಕಚೇರಿ, ನೀತಿ ಆಯೋಗ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರರಿಗೆ ಸೂಚನೆ ನೀಡಿದ್ದಾರೆ.

ಮೋದಿ ಸರ್ಕಾರದ ಮೂವರು ಉನ್ನತ ಅಧಿಕಾರಿಗಳ ಪ್ರಕಾರ, "ಎಡೆಬಿಡದ ಚುನಾವಣಾ ಪ್ರಚಾರ ಕಾರ್ಯದ ನಡುವೆಯೂ, ಪ್ರಧಾನಿ ಕಚೇರಿ, ನೀತಿ ಆಯೋಗದ ಉಪಾಧ್ಯಕ್ಷ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ.ವಿಜಯರಾಘವನ್ ಅವರಿಗೆ ಸೂಚನೆ ನೀಡಿ, ಸ್ವಚ್ಛ ಭಾರತ ಅಭಿಯಾನವನ್ನು ವ್ಯಾಪಕಗೊಳಿಸುವುದು, ದೊಡ್ಡ ಪ್ರಮಾಣದ ಆರ್ಥಿಕ ಹಾಗೂ ಆಡಳಿತಾತ್ಮಕ ಸುಧಾರಣೆಗೆ ಕಾರ್ಯಸೂಚಿ ಸಿದ್ಧಪಡಿಸುವಂತೆ ಆದೇಶ ನೀಡಲಾಗಿದೆ"

"ಪ್ರಮುಖವಾಗಿ ತೈಲ ಮತ್ತು ಅನಿಲ, ಖನಿಜ, ಮೂಲಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಕೆಂಪುಪಟ್ಟಿಯಿಂದ ಮುಕ್ತಗೊಳಿಸಲು ಒತ್ತು ನೀಡಲಾಗುತ್ತಿದೆ. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಅಗತ್ಯವಾದ ಅಡಿಗಲ್ಲನ್ನು ಮುಂದಿನ 100 ದಿನಗಳಲ್ಲಿ ಹಾಕಲಾಗುತ್ತದೆ. ಪ್ರಮುಖ ವಲಯಗಳನ್ನು ಕೆಂಪುಪಟ್ಟಿಯಿಂದ ಮುಕ್ತಗೊಳಿಸುವುದರಿಂದ ಜಿಡಿಪಿ ಪ್ರಗತಿ ದರ ಕನಿಷ್ಠ ಶೇಕಡ 2.5ರಷ್ಟು ಹೆಚ್ಚಲಿದೆ" ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಸೂಚಿ ಸಿದ್ಧಪಡಿಸುವ ಸಲುವಾಗಿ ವಾರಾಂತ್ಯದಲ್ಲಿ ಪ್ರಧಾನಿ ಕಚೇರಿ ಅಧಿಕಾರಿಗಳು, ನೀತಿ ಆಯೋಗ ಮತ್ತು ವೈಜ್ಞಾನಿಕ ಸಲಹೆಗಾರರ ಕಚೇರಿ ಅಧಿಕಾರಿಗಳು ಸಭೆಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕ ಸಂಪರ್ಕ ಬಲಗೊಳಿಸುವುದು, ತ್ಯಾಜ್ಯದಿಂದ ಸಂಪತ್ತು ಸೃಷ್ಟಿ, ಗ್ರಾಮೀಣ ಪ್ರದೇಶಗಳ ಜನರಿಗೆ ಆರೋಗ್ಯಸೇವೆ ಸೌಲಭ್ಯವನ್ನು ವಿಸ್ತರಿಸುವುದು ಪ್ರಮುಖ ಅಂಶವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News