ಪಕ್ಷೇತರ ಅಭ್ಯರ್ಥಿ ಭಾಷಣಕ್ಕೆ ಮಂಡ್ಯದ ಜನತೆ ಉತ್ತರ ನೀಡಲಿದ್ದಾರೆ: ಕುಮಾರಸ್ವಾಮಿ
Update: 2019-04-16 16:46 GMT
ಬೆಂಗಳೂರು, ಎ.16: ಮಂಡ್ಯ ಕ್ಷೇತ್ರದಲ್ಲಿಂದು ಪಕ್ಷೇತರ ಅಭ್ಯರ್ಥಿ ಪರವಾಗಿ ನಡೆದ ಸಮಾವೇಶದ ದಿಗ್ಗಜರ ಭಾಷಣದ ಸಾರಾಂಶವನ್ನು ಗ್ರಹಿಸಿದ್ದೇನೆ. ನನ್ನ ಬಗ್ಗೆ ಮಾಡಿರುವ ವೈಯಕ್ತಿಕ ಆಪಾದನೆಗಳಿಗೆ ಉತ್ತರ ನೀಡುವ ಶಕ್ತಿ ಮಂಡ್ಯ ಜಿಲ್ಲೆಯ ನನ್ನ ಬಾಂಧವರಿಗಿದೆ. ಉತ್ತರ ಕೊಡುವ ರೀತಿಯೂ ಅವರಿಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ‘ಅಂಬರೀಶ್ ಹಾಗೂ ನನ್ನ ನಡುವಿನ ಸ್ನೇಹ ಮೂರು ದಶಕಗಳದ್ದು. ಅದು ರಾಜಕಾರಣದ ವ್ಯಾಪ್ತಿಯನ್ನೂ ಮೀರಿದ ಅಪ್ಪಟ ಗೆಳೆತನ. ಈ ಸ್ನೇಹಕ್ಕೆ ಅವರ ಕುಟುಂಬ ಸೂಕ್ತ ಕಾಣಿಕೆ ನೀಡಿದೆ’.
‘ಮಂಡ್ಯದ ಮಣ್ಣಿನ ಮೇಲೆ ನಿಂತು ನಾನು ಮಾತನಾಡುತ್ತಿದ್ದೇನೆ. ಪಕ್ಷೇತರ ಅಭ್ಯರ್ಥಿಯ ಪ್ರತಿಯೊಂದು ಮಾತು ಕೂಡ ಮಂಡ್ಯದ ಮತದಾರರನ್ನು ಮೋಡಿ ಮಾಡುವ ತಂತ್ರ ಎಂಬುದರ ನಿಚ್ಚಳ ಅರಿವು ಮಂಡ್ಯದ ಜನರಿಗಿದೆ. ಇದಕ್ಕಿಂತ ಹೆಚ್ಚು ಹೇಳಲು ನಾನು ಇಚ್ಛಿಸುವುದಿಲ್ಲ’ ಎಂದು ತಿಳಿಸಿದ್ದಾರೆ.