ಅಧಿಕಾರಕ್ಕಾಗಿ ಜನರನ್ನು ಹುಚ್ಚರನ್ನಾಗಿಸುತ್ತಿರುವ ಮೋದಿ: ಸತೀಶ್ ಜಾರಕಿಹೊಳಿ

Update: 2019-04-16 17:34 GMT

ಬೆಳಗಾವಿ, ಎ.16: ಅಧಿಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ 130 ಕೋಟಿ ಜನರನ್ನು ಹುಚ್ಚರನ್ನಾಗಿಸುತ್ತಿದ್ದಾರೆ. ಬಿಜೆಪಿಯವರು ಹಿಂದುತ್ವದ, ಕಾಶ್ಮೀರದ ವಿಷಯದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಡೋಲಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಶ್ಮೀರವನ್ನು ಸೇನೆ ಮತ್ತು ಸರಕಾರ ನಿಭಾಯಿಸುತ್ತದೆ. ಇದು ಬಿಜೆಪಿ ಮತ್ತು ಆರೆಸೆಸ್ಸ್ ಕೆಲಸವಲ್ಲ ಎಂದರು.

ದೇಶದ ಗಂಭೀರ ಸಮಸ್ಯೆಯನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಂಡು ಕೀಳುಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ. ದೇಶಕ್ಕಾಗಿ ಕುಲಕರ್ಣಿ, ಜೋಶಿ, ದೇಶಪಾಂಡೆ ಮನೆತನದವರು ಪ್ರಾಣ ಬಿಟ್ಟಿಲ್ಲ. ದೇಶ ಸೇವೆಯಲ್ಲಿ ದಲಿತರು, ಹಿಂದುಳಿದವರು, ಮುಸ್ಲಿಮರು ಹೆಚ್ಚು ಪ್ರಾಣ ತ್ಯಾಗ ಮಾಡಿದ್ದಾರೆ. ಮೇಲ್ವರ್ಗದವರು ಸೇನೆಗಾಗಿ ಜೀವ ಬಿಟ್ಟ ಇತಿಹಾಸವಿಲ್ಲ ಎಂದು ಅವರು ಹೇಳಿದರು.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತ ಅವಧಿಗಿಂತ ಮೋದಿ ಆಡಳಿತದಲ್ಲಿಯೇ ಹೆಚ್ಚು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಸರಕಾರವಿದ್ದಾಗಲು ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿವೆ. ಅದರ ಶ್ರೇಯಸ್ಸು ಸೇನೆಗೆ ನೀಡಿದೆ. ಆದರೆ, ಮೋದಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದು ದುರಂತ. ಮೋದಿ ಆಡಳಿತ ನಡೆಸಲು ವಿಫಲ(ಫೇಲ್)ರಾಗಿದ್ದರೂ ಕೂಡ ಮಾಧ್ಯಮದವರು ಉತ್ತೀರ್ಣ(ಪಾಸ್) ಮಾಡಿ ಅಂಕಪಟ್ಟಿಗಳನ್ನು ಹಂಚುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನದಲ್ಲಿ ಬಿರಿಯಾನಿ ಸವಿದ ಪ್ರಧಾನಿ: ಪಾಕಿಸ್ತಾನವನ್ನು ಟೀಕಿಸಿ ಭಾಷಣ ಮಾಡುವ ಪ್ರಧಾನಿ ನರೇಂದ್ರಮೋದಿ ಪಾಕಿಸ್ತಾನಕ್ಕೆ ಹೋಗಿ, ಅಲ್ಲಿನ ಪ್ರಧಾನಿಯಾಗಿದ್ದ ನವಾಝ್ ಶರೀಫ್‌ರನ್ನು ತಬ್ಬಿಕೊಂಡು ಬಿರಿಯಾನಿ ತಿಂದು ಬಂದಿದ್ದಾರೆ(ಪಾಕಿಸ್ತಾನ್ ಜಾಕೆ ಪ್ರಧಾನಮಂತ್ರಿಕೋ ಗಲೆ ಲಗಾಕೇ, ಬಿರಿಯಾನಿ ಖಾಕೆ ಆಯಾ). ಇಂತಹವರು ನಮಗೆ ಹಿಂದುತ್ವದ ಬಗ್ಗೆ ಪಾಠ ಮಾಡುತ್ತಾರೆ ಎಂದು ಅವರು ಟೀಕಾ ಪ್ರಹಾರ ಮಾಡಿದರು.

ರೈತರು, ದಲಿತರು, ಬಡವರ ಬಗ್ಗೆ ಪ್ರಧಾನಿ ಮೋದಿ ಮಾತನಾಡೋದೆ ಇಲ್ಲ. ಒಬ್ಬ ವ್ಯಕ್ತಿ ಕುರ್ಚಿ ಮೇಲೆ ಕುಳಿತ ತಕ್ಷಣ ಆತನಿಗೆ ಕೆಲಸ ಮಾಡೋಕೆ ಬರಲ್ಲ. ಕೆಲಸ ಮಾಡೋ ಮನಸ್ಸು ಹುಟ್ಟಿನಿಂದಲೇ ಬರಬೇಕು. ಹಿಂದುತ್ವ ಮತ್ಯಾವುದೇ ವಿಷಯದ ಹಿಂದೆ ಬಿದ್ದು ಜೀವನ ಹಾಳು ಮಾಡಿಕೊಳ್ಳುವ ಬದಲು ವಿಕಾಸದ ಕಡೆ ಸಾಗುವಂತೆ ಅವರು ಕರೆ ನೀಡಿದರು.

ಕೆಲವರು ನಮ್ಮ ವಿರುದ್ದ ಗುಂಪು ಕಟ್ಟಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹ ಅವಿವೇಕಿಗಳ ಬಗ್ಗೆ ಗಮನ ಹರಿಸಬೇಡಿ. ಸಾರಾಯಿ, ಹಣದ ಆಮಿಷಕ್ಕೆ ಯಾರು ಒಳಗಾಗಬೇಡಿ. ಅಭಿವೃದ್ಧಿಯ ಹರಿಕಾರ ಪ್ರಕಾಶ್ ಹುಕ್ಕೇರಿಗೆ ಹೆಚ್ಚು ಮತಗಳ ನೀಡುವ ಮೂಲಕ ಆರಿಸಿ ತರುವಂತೆ ಸತೀಶ್ ಜಾರಕಿಹೊಳಿ ಮನವಿ ಮಾಡಿದರು.

ಈ ವೇಳೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಂಸಿ ಸದಸ್ಯ ಆನಂದ ಪಾಟೀಲ್, ರಾಜು ಮಾಯನ್ನಾ, ಸಂದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೋದಿ ಮತ್ತು ಬೀಫ್

ಬಿಜೆಪಿ ನಾಯಕರು, ಮುಖಂಡರು ಅಂತರ್‌ಜಾತಿ ಮದುವೆ ಮಾಡಿಕೊಂಡರೆ ಇವರ ತಕರಾರಿಲ್ಲ. ಸಾಮಾನ್ಯ ಜನರು ಅಂತರ್‌ಜಾತಿ ಮದುವೆಯಾದರೆ ಮರ್ಯಾದೆ ಹತ್ಯೆಗೆ ಪ್ರೇರಣೆ ನೀಡುತ್ತಾರೆ. ಇದೆಂತಹ ನ್ಯಾಯ, ಒಂದೆಡೆ ಬೀಫ್‌ಗಾಗಿ ಜನರ ಹತ್ಯೆ ನಡೆಯುತ್ತಿದೆ. ಮತ್ತೊಂದೆಡೆ ಮೋದಿ ಆಡಳಿತದಲ್ಲಿಯೇ ಅತೀ ಹೆಚ್ಚು ಬೀಫ್ ವಿದೇಶಕ್ಕೆ ರಫ್ತಾಗಿದೆ. ಇದರಲ್ಲಿ ಹಿಂದುಗಳ ಕಂಪನಿಯೇ ಹೆಚ್ಚು ಎನ್ನುವುದನ್ನು ನೀವು ಗಮನ ಹರಿಸಬೇಕು.

-ಸತೀಶ್ ಜಾರಕಿಹೊಳಿ, ಅರಣ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News