ಲೋಕಸಭಾ ಚುನಾವಣೆ: ಜನಪ್ರತಿನಿಧಿಗಳಿಗೆ ತಲೆ ನೋವು ತಂದ ಮತದಾನ ಬಹಿಷ್ಕಾರ

Update: 2019-04-18 15:24 GMT

ಬೆಂಗಳೂರು, ಎ.18: ಜನ ಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡದ ಕಾರಣವನ್ನು ಮುಂದಿಟ್ಟು ಹಾಸನ, ಚಿತ್ರದುರ್ಗ, ಮಂಡ್ಯ, ಚಾಮರಾಜನಗರ ಹಾಗೂ ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಮತದಾರರು ಮತದಾನವನ್ನು ಬಹಿಷ್ಕಾರ ಮಾಡಿದ್ದರಿಂದ ಜನಪ್ರತಿನಿಧಿಗಳು ಹಾಗೂ ಚುನಾವಣಾ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿತ್ತು.

ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣೆ ಗರಿಗೆದರಿದೆ. ಪ್ರಮುಖ ನಾಯಕರು, ಸಿನಿಮಾ ನಟ ನಟಿಯರು ಸೇರಿದಂತೆ ಸಾಮಾನ್ಯ ಜನ ಮತಗಟ್ಟೆಗಳ ಬಳಿ ಸಾಲುಗಟ್ಟಿ ನಿಂತು ಮತ ಚಲಾಯಿಸಿದರು. ಆದರೆ, ರಾಜ್ಯದ ಕೆಲವೆಡೆ ತಮ್ಮ ಗ್ರಾಮ ಅಭಿವೃದ್ಧಿಯಾಗದೆ ನಾವು ಮತಚಲಾಯಿಸುವುದಿಲ್ಲ ಎಂದು ಜನ ಸಾಮಾನ್ಯರು ಮತದಾನ ಬಹಿಷ್ಕರಿಸುವ ಮೂಲಕ ಜಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದರು.

ಎಲ್ಲೆಲ್ಲಿ ಬಹಿಷ್ಕಾರ?: ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕಬೇಡಗೆರೆ ಗ್ರಾಮಸ್ಥರು ಸಾಮೂಹಿಕ ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದ ಮತಗಟ್ಟೆ ಸಂಖ್ಯೆ 118 ರಲ್ಲಿ ಸುಮಾರು 1,500 ಕ್ಕೂ ಹೆಚ್ಚು ಮತದಾರರು ಮತದಾನ ಮಾಡಬೇಕಿತ್ತು. ಆದರೆ, ತಮ್ಮ ಗ್ರಾಮ ಅಭಿವೃದ್ಧಿಯಾಗುವವರೆಗೆ ನಾವು ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದರು.

ಗ್ರಾಮಸ್ಥರ ಮನವೊಲಿಸಲು ಆಗಮಿಸಿದ ನಾಯಕರನ್ನೂ ಸಹ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಗ್ರಾಮವನ್ನು ಅಭಿವೃದ್ಧಿಪಡಿಸಿ ಆನಂತರ ಮತಯಾಚಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ವರದಿಯಾಗಿದೆ.

ಸಾಮೂಹಿಕ ಮತದಾನ ಬಹಿಷ್ಕಾರ: ಚಿತ್ರದುರ್ಗ ತಾಲೂಕಿನ ನಗರಘಟ್ಟೆ ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ಗ್ರಾಮ. 650 ಮತದಾರರನ್ನು ಹೊಂದಿರುವ ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಬಿದ್ದು ಹೋಗಿರುವ ಅಂಗನವಾಡಿ ರಿಪೇರಿ ಹಾಗೂ ನೀರು ಶುದ್ದೀಕರಣ ಘಟಕ ಸ್ಥಾಪನೆಗೆ ಗ್ರಾಮಸ್ಥರು ಹಲವಾರು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದಾರೆ. ಹಲವು ಬಾರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವ ಅಧಿಕಾರಿಯೂ ಸ್ಪಂದಿಸಿರಲಿಲ್ಲ. ಪರಿಣಾಮ ಗ್ರಾಮಸ್ಥರು ಸಾಮೂಹಿಕ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು.

ಇದಲ್ಲದೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಮತ್ತೆರಡು ಗ್ರಾಮಗಳಾದ ಪಂಜಯ್ಯನಹಟ್ಟಿ ಮತ್ತು ಐಯ್ಯನಹಳ್ಳಿಯಲ್ಲೂ ಸಹ ಗ್ರಾಮಸ್ಥರು ಮೂಲಭೂತ ಸೌಕರ್ಯ ನೀಡಿಲ್ಲ ಎಂದು ಸಾಮೂಹಿಕ ಮತದಾನ ಬಹಿಷ್ಕಾರಕ್ಕೆ ಆಗ್ರಹಿಸಿದ್ದರು.

ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ತಹಶೀಲ್ದಾರ್ ನಾಗರಾಜ್ ಹಾಗೂ ಸಿಇಓ ಸತ್ಯಭಾಮ ಸ್ಥಳಕ್ಕೆ ಆಗಮಿಸಿ ಮನವೊಲಿಸಿದರು ಸಹ ಗ್ರಾಮಸ್ಥರು ಅಧಿಕಾರಿಗಳ ಮಾತು ಕೇಳುವ ಯಾವ ಲಕ್ಷಣಗಳು ಕಂಡು ಬಂದಿಲ್ಲ.

ಮಂಡ್ಯದಲ್ಲಿ ಮತದಾನ ಬಹಿಷ್ಕಾರ: ರಾಜ್ಯದ ಜಿದ್ದಾಜಿದ್ದಿ ಕಣಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಗ್ರ ಸ್ಥಾನವಿದೆ. ಕಳೆದ ಒಂದು ತಿಂಗಳಿನಿಂದ ಈ ಕ್ಷೇತ್ರದ ಚುನಾವಣಾ ಪ್ರಚಾರ ಇಡೀ ರಾಜ್ಯದ ಗಮನ ಸೆಳೆದಿತ್ತು. ಆದರೆ, ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮಸ್ಥರು ಮತದಾನಕ್ಕೆ ಬಹಿಷ್ಕಾರ ಹಾಕಿರುವುದು ಚುನಾವಣೆಗೆ ಕಪ್ಪುಚುಕ್ಕಿಯಾಗಿ ಪರಿಣಮಿಸಿದೆ.

ಬೈಪಾಸ್ ರಸ್ತೆ ನಿರ್ಮಾಣಕ್ಕೆ ಜಮೀನು ಭೂಸ್ವಾಧೀನ ಮಾಡಿದ್ದಾರೆ. ಆದರೆ, ಪರಿಹಾರ ನೀಡುವಾಗ ಬಡವರು ಹಾಗೂ ಶ್ರೀಮಂತರ ನಡುವೆ ತಾರತಮ್ಯವಾಗಿದೆ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿರುವ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಎದುರು ಕುಳಿತು ಧರಣಿ ನಡೆಸುತ್ತಿದ್ದರು. ಅಧಿಕಾರಿಗಳು ಎಷ್ಟೇ ಮನವೊಲಿಸಿದರು ಗ್ರಾಮಸ್ಥರು ಪಟ್ಟು ಸಡಿಸಲಿಲ್ಲ.

ಚಿಕ್ಕಮಗಳೂರಿನ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಜಿಗೆ ಗ್ರಾಮದಲ್ಲಿದ್ದಂತಹ ಮತಗಟ್ಟೆಯನ್ನು ಪಕ್ಕದ ಬಾಳೆಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಚುನಾವಣಾ ಅಧಿಕಾರಿಗಳು ಬೂತ್ ಬದಲಿಸಿದ್ದಕ್ಕೆ ಆಕ್ರೋಶಗೊಂಡಿರುವ ಕೆಂಜಿಗೆ ಗ್ರಾಮಸ್ಥರು ಮತದಾನಕ್ಕೆ ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ. ಈ ಗ್ರಾಮದಲ್ಲಿ ಒಟ್ಟು 600ಕ್ಕೂ ಹೆಚ್ಚು ಮತದಾರರಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮತದಾನ ಬಹಿಷ್ಕಾರ: ಚಾಮರಾಜ ನಗರ ಆಲೂರು ಸುತ್ತಮುತ್ತಲಿನ ರೈತರಿಗೆ ಇಲ್ಲಿನ ಸುವರ್ಣಾವತಿ ಜಲಾಶಯದ ನೀರೆ ಆಧಾರ. ಆದರೆ, ಸೂಕ್ತ ಸಮಯದಲ್ಲಿ ಕಾವೇರಿ ನೀರಾವರಿ ನಿಗಮ ನೀರು ಹರಿಸದ ಕಾರಣ ಬೆಳೆಗಳು ಒಣಗಿ ಹೋಗಿವೆ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷವನ್ನು ಖಂಡಿಸಿರುವ ಆಲೂರು ಗ್ರಾಮಸ್ಥರು ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಕುಡಿಯುವ ನೀರು ಬೇಕೆಂದು ಮತದಾನ ಬಹಿಷ್ಕಾರ: ಚಿಕ್ಕಬಳ್ಳಾಪುರ ಜಿಲ್ಲೆ ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚಿಂತಾಮಣಿ ತಾಲೂಕು ಎಗವ ಮಿಂಡಿಗಲ್ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಈ ಬಾರಿಯ ಮತದಾನವನ್ನು ಬಹಿಷ್ಕರಿಸಿದ್ದಾರೆ.

ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಸಮರ್ಪಕ ನೀರು ಪೂರೈಕೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರು ಜಿಲ್ಲಾಡಳಿತ ಕ್ರಮ ಕೈಗೊಂಡಿರಲಿಲ್ಲ. ಅಧಿಕಾರಿಗಳ ಈ ನಿರ್ಲಕ್ಷಕ್ಕೆ ಬೇಸತ್ತಿರುವ ಗ್ರಾಮಸ್ಥರು ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಪಿಂಡಕೋರ ತಿಮ್ಮನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಸಮರ್ಪಕ ರಸ್ತೆ ಸಾರಿಗೆ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕಾರ ಮಾಡಿದ್ದರು. ಕಳೆದ 40 ವರ್ಷಗಳಿಂದ ರಸ್ತೆ ನಿರ್ಮಾಣಕ್ಕಾಗಿ ಹೋರಾಟ ನಡೆಸಲಾಗುತ್ತಿದೆ. ಆದರೆ, ಎಷ್ಟೇ ಹೋರಾಟ ಮಾಡಿದರೂ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಜನರ ಮನವೊಲಿಸಲು ಅಧಿಕಾರಿಗಳು ಮುಂದಾಗಿದ್ದರೂ ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News