ಕಾರುಗಳು ಮುಖಾಮುಖಿ ಢಿಕ್ಕಿ: ಮೂವರು ಸಾವು, ಇಬ್ಬರಿಗೆ ಗಾಯ

Update: 2019-04-19 13:11 GMT

ಬೀರೂರು, ಎ.19: ಎರಡು ಕಾರುಗಳು ನಡುವೆ ಮುಖಾಮುಖಿ ಢಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಶಿವಪುರ ಸಮೀಪ ಗುರುವಾರ ಮಧ್ಯರಾತ್ರಿ ನಡೆದಿದೆ. 

ಬೀರೂರಿನಿಂದ ಮುರುಡೇಶ್ವರಕ್ಕೆ ತೆರಳುತ್ತಿದ್ದ ಟವೇರಾ ವಾಹನಕ್ಕೆ ಸಿಗಂಧೂರು ಪ್ರವಾಸ ಮುಗಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟಕ್ಕೆ ಸಾಗುತ್ತಿದ್ದ ಮಾರುತಿ ಇಕೋ ಕಾರು ಬೀರೂರು ಸಮೀಪದ ಶಿವಪುರ ಸಮೀಪದಲ್ಲಿರುವ ಭಾರತ್‍ಡಾಬಾ ಮುಂಭಾಗ ಢಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಢಿಕ್ಕಿಯ ರಭಸಕ್ಕೆ ಇಕೋ ವಾಹನದಲ್ಲಿದ್ದ ಶಿಡ್ಲಘಟ್ಟ ಮೂಲದ ಮುನಿಸ್ವಾಮಿ (65), ಬಾಲಕಿ ಜ್ಯೋತಿ (14) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ತೀವ್ರ ಪೆಟ್ಟಾಗಿದ್ದ ಸುಬ್ಬಲಕ್ಷ್ಮಮ್ಮ (60) ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆನ್ನಲಾಗಿದ್ದು, ಕಾರಿನಲಿದ್ದ ರಮ್ಯಾ (25) ಮತ್ತು ಹೇಮಾ (10) ತರೀಕೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ. 

ಅಪಘಾತದ ಸಮಯದಲ್ಲಿ ಬೀರೂರು-ಶಿವಮೊಗ್ಗ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬೀರೂರು ಪೋಲಿಸ್ ಉಪನಿರೀಕ್ಷಕ ರಾಜಶೇಖರ್ ಸ್ಥಳಕ್ಕೆ ತೆರಳಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಎರಡೂ ಕಾರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News