23 ಕಾಡಾನೆಗಳ ಹಿಂಡು ಮರಳಿ ಕಾಡಿಗೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Update: 2019-04-20 18:32 GMT

ಮಡಿಕೇರಿ,ಎ.20 : ಚೆಟ್ಟಳ್ಳಿ, ಮೀನುಕೊಲ್ಲಿ ಸೇರಿದಂತೆ ಈ ಭಾಗದ ವಿವಿಧ ಗ್ರಾಮಗಳಲ್ಲಿ ಸಂಚರಿಸುತ್ತಿದ್ದ ಒಟ್ಟು 23 ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗಟ್ಟುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಐದು ಮರಿಯಾನೆಗಳೊಂದಿಗೆ ಗ್ರಾಮ, ಗ್ರಾಮಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಕಾಡಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಡ ಹೇರಿದ್ದ ಹಿನ್ನೆಲೆ ಅರಣ್ಯ ಅಧಿಕಾರಿಗಳು ಒಂದು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿದ್ದರು. ಇಂದು ಕಾಡಾನೆಗಳ ಉಪಟಳ ಹೆಚ್ಚಾದ ಕಾರಣ ರೇಡಿಯೋ ಕಾಲರ್ ನ ಮಾಹಿತಿಯನ್ನು ಅನುಸರಿಸಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಚೆಟ್ಟಳ್ಳಿ, ಮೀನುಕೊಲ್ಲಿ, ವಾಲ್ನೂರು, ತ್ಯಾಗತ್ತೂರು ಭಾಗದಿಂದ ಕುಶಾಲನಗರದ ದುಬಾರೆ ಮೂಲಕ ಮೀಸಲು ಅರಣ್ಯಕ್ಕೆ ಕಾಡಾನೆಗಳನ್ನು ಓಡಿಸುವಲ್ಲಿ ಯಶಸ್ವಿಯಾದರು.  

ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್, ಉಪವಲಯ ಅರಣ್ಯಾಧಿಕಾರಿ ವಿಲಾಸ್ ಅವರ ನೇತೃತ್ವದಲ್ಲಿ ಅರಣ್ಯ ರಕ್ಷಕ ಚರಣ್, ವೀಕ್ಷಕ ಧರ್ಮಪಾಲ್, ಜಗದೀಶ್ ಸೇರಿದಂತೆ ಸಿಬ್ಬಂದಿ ವರ್ಗ ಕಾಡಾನೆಗಳ ಹಿಂಡನ್ನು ಕಾಡಿಗಟ್ಟಲು ಬೆಳಗ್ಗಿನಿಂದಲೇ ಹರಸಾಹಸ ಪಟ್ಟರು. ಸುತ್ತಮುತ್ತಲ ಗ್ರಾಮಸ್ಥರು ಆತಂಕದ ನಡುವೆಯೇ ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News