ಗೋ ಮೂತ್ರ ನನ್ನ ಕ್ಯಾನ್ಸರ್ ಗುಣಪಡಿಸಿತು ಎಂದ ಪ್ರಜ್ಞಾ ಸಿಂಗ್!
ಹೊಸದಿಲ್ಲಿ : ''ಗೋ ಮೂತ್ರ ಮತ್ತು ಇತರ ಗೋ ಉತ್ಪನ್ನಗಳ ಮಿಶ್ರಣ ನನ್ನ ಕ್ಯಾನ್ಸರ್ ಗುಣಪಡಿಸಿತು,'' ಎಂದು ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಹೇಳಿದ್ದಾರೆ.
ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದ ನಂತರ ಇಂಡಿಯಾ ಟುಡೆ ಟಿವಿ ವಾಹಿನಿ ಜತೆ ಮಾತನಾಡಿದ ಅವರು ಹಲವೆಡೆ ಗೋವುಗಳನ್ನು ಚೆನ್ನಾಗಿ ನೋಡಿಕೊಳ್ಳದೇ ಇರುವುದನ್ನು ಕಂಡು ತಮಗೆ ನೋವುಂಟಾಗಿದೆ ಎಂದರು. ``ಗೋಧಾನ್ ಅಮೃತ್ ಹೈ'' (ಗೋ ದಾನ ಅಮೃತದಂತೆ),'' ಎಂದು ಆಕೆ ಹೇಳಿದರು.
ಗೋವು ಹಾಗೂ ಗೋ ಉತ್ಪನ್ನಗಳ ಆರೋಗ್ಯ ಲಾಭಗಳ ಕುರಿತಂತೆ ವಿವರಣೆ ನೀಡಿದ ಪ್ರಜ್ಞಾ ಸಿಂಗ್ ಪ್ರಕಾರ ಅದರ ಅತ್ಯಂತ ದೊಡ್ಡ ಆರೋಗ್ಯ ಪ್ರಯೋಜನವೆಂದರೆ ಗೋಮೂತ್ರ ಸೇವಿಸಿದ ನಂತರ ಅದು ಆಕೆಯ ಕ್ಯಾನ್ಸರ್ ಅನ್ನು ಗುಣಪಡಿಸಿದೆ.
2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯೂ ಆಗಿರುವ ಪ್ರಜ್ಞಾ ಸಿಂಗ್ ಸ್ತನ ಕ್ಯಾನ್ಸರ್ ಗೊಳಗಾಗಿದ್ದರಲ್ಲದೆ ನಂತರ ಗುಣಮುಖರಾಗಿದ್ದರು. ''ನಾನು ಕ್ಯಾನ್ಸರ್ ರೋಗಿಯಾಗಿದ್ದೆ ಹಾಗೂ ನಾನು ಗೋ ಮೂತ್ರ ಹಾಗೂ ಪಂಚಗವ್ಯ ಮಿಶ್ರಿತ ಆಯುರ್ವೇದಿಕ್ ಗಿಡಮೂಲಿಕೆಗಳನ್ನು ಸೇವಿಸಿ ನನ್ನನ್ನು ಗುಣ ಪಡಿಸಿಕೊಂಡಿದ್ದೇನೆ,'' ಎಂದರು.
ಇದು ವೈಜ್ಞಾನಿಕ ಚಿಕಿತ್ಸೆಯಾಗಿದ್ದು ಅದು ಪರಿಣಾಮಕಾರಿಯೆಂಬುದಕ್ಕೆ ನಾನು ಜೀವಂತ ಉದಾಹರಣೆ ಎಂದರು. ಗೋವನ್ನು ಒಂದು ನಿರ್ದಿಷ್ಟ ವಿಧಾನದಲ್ಲಿ ನೇವರಿಸಿದರೆ ಅದು ನಮ್ಮ ರಕ್ತದೊತ್ತಡವನ್ನು ನಿಯಂತ್ರಣಪಡಿಸಬಲ್ಲದು ಎಂದು ಆಕೆ ಹೇಳುತ್ತಾರೆ.
''ಗೋಮಾತೆಯನ್ನು ಬೆನ್ನಿನ ಕಡೆಯಿಂದ ಕುತ್ತಿಗೆವರೆಗೆ ನೇವರಿಸಿದರೆ ಆಕೆಗೆ ಖುಷಿಯಾಗುತ್ತದೆ, ನಿಮಗೂ ಖುಷಿಯಾಗುತ್ತದೆ. ಹೀಗೆ ಪ್ರತಿ ದಿನ ಮಾಡಿದರೆ ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದು ಅಮೃತ, ಇದು ವೈಜ್ಞಾನಿಕ. ಗೋಶಾಲೆ ತಪಸ್ಯಕ್ಕೆ ಅತ್ಯಂತ ಪ್ರಶಸ್ತ ಸ್ಥಳ,'' ಎಂದು ಆಕೆ ಹೇಳಿದರು.
ಹಿಂದು ವೈದಿಕ ಕ್ಯಾಲೆಂಡರ್ 'ಚೊಘಡಿಯಾ' ಆಧಾರದಲ್ಲಿ ತಾವು ಸೋಮವಾರ ನಾಮಪತ್ರ ಸಲ್ಲಿಸುವ ಸಮಯ ನಿರ್ಧರಿಸಿದ್ದಾಗಿ ಪ್ರಜ್ಞಾ ಸಿಂಗ್ ಹೇಳಿಕೊಂಡಿದ್ದಾರೆ.