ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ: ಉದ್ಯಮಿ ರಮೇಶ್ ಮೃತದೇಹದ ನಿರೀಕ್ಷೆಯಲ್ಲಿ ಕುಟುಂಬಸ್ಥರು
Update: 2019-04-23 15:47 GMT
ತುಮಕೂರು,ಎ.23: ಚುನಾವಣೆ, ಮತದಾನ ಪ್ರಕ್ರಿಯೆ ಎಲ್ಲ ಮುಗಿದ ನಂತರ ಬೆಂಗಳೂರಿನ ಗೆಳೆಯರೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಉದ್ಯಮಿ ರಮೇಶ್ ಗೌಡ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹ ಆಗಮನದ ನಿರೀಕ್ಷೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು ಕಾಯುತ್ತಿದ್ದು, ದುಖಃದ ಮಡುವಿನಲ್ಲಿ ಮುಳುಗಿದ್ದಾರೆ.
ತಾಯಿ ಹಾಗೂ ಹೆಂಡತಿ ಮಂಜುಳಾ, ಮಗಳು ದೀಕ್ಷ ಆಹಾರ ತ್ಯಜಿಸಿದ್ದು, ಡ್ರಿಪ್ ಅಳವಡಿಸಲಾಗಿದೆ. ತಾಯಿ, ಮಗಳನ್ನು ಸಮಾಧಾನ ಪಡಿಸಲು ಕುಟುಂಬಸ್ಥರು ಪ್ರಯತ್ನಿಸುತ್ತಿದ್ದಾರೆ. ಶಾಸಕ ಜ್ಯೋತಿಗಣೇಶ್, ಸಂಸದ ಮುದ್ದಹನುಮೇಗೌಡ ಅವರು ಸಹ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮೃತದೇಹ ಬುಧವಾರ ಆಗಮಿಸುವ ನಿರೀಕ್ಷೆಯಿದ್ದು, ಸರಸ್ವತಿಪುರಂ ನಿವಾಸ ಹಾಗೂ ಕುಣಿಗಲ್ನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಿಟ್ಟು ನಂತರ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಸ್ವಗ್ರಾಮದ ಬೆಟ್ಟದ ಕೋಟೆಯಲ್ಲಿ ಅಂತ್ಯಕ್ರಿಯೆ ನೆರವೇರಿಸುವುದಾಗಿ ಅವರ ಸಹೋದರ ಪ್ರಕಾಶ್ ತಿಳಿಸಿದ್ದಾರೆ.