ಶಿರಸಿ: ಕೊಲೆಯಾದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

Update: 2019-04-24 11:04 GMT

ಶಿರಸಿ, ಎ.24: ಬಯಲು ಪ್ರದೇಶದಲ್ಲಿ ಕೊಲೆಗೈಯ್ಯಲ್ಪಟ್ಟ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದಲ್ಲಿ ಇಂದು ನಡೆದಿದೆ.

ಮೃತರನ್ನು ಅಸ್ಲಂ ಬಾಬಾಜಾನ್(22) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಮಂಗಳವಾರ ರಾತ್ರಿ ಶಿರಸಿಯ ಕಸ್ತೂರ್ಬಾ ನಗರದಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಇದೇ ಸ್ಥಳದಲ್ಲಿ ಅಸ್ಲಂ ಬಾಬಾಜಾನ್(22) ಅವರ  ಮೃತದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.

ನಿನ್ನೆ ರಾತ್ರಿ  ನಡೆದ ಗಲಾಟೆಯ ಸಂದರ್ಭ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಹನೀಫ್ ತಹಸೀಲ್ದಾರ್ ಎಂಬರಿಗೆ ಚೂರಿಯಿಂದ ಇರಿಯಲಾಗಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಲಾಟೆಯನ್ನು ತಹಬದಿಗೆ ತಂದಿದ್ದರು. ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಹನೀಫ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಗಲಾಟೆ ನಡೆದ ಸ್ಥಳದಲ್ಲೇ ಇಂದು ಬೆಳಗ್ಗೆ ಅಸ್ಲಂ ಅವರ ಮೃತದೇಹ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅಸ್ಲಂ ತಲೆಗೆ ರಾಡ್ ನಿಂದ ಹೊಡೆದು, ಇರಿದು ಕೊಲೆಗೈಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳದಲ್ಲಿ ಕಬ್ಬಿಣದ ರಾಡ್ ಕೂಡ ಪತ್ತೆಯಾಗಿದೆ.

 ಈ ಬಗ್ಗೆ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News