ಮಾವು ಕೃಷಿಗೆ ಪ್ರೋತ್ಸಾಹದ ಕೊರತೆ: ಹೊರ ರಾಜ್ಯಗಳ ಪಾಲಾಗುತ್ತಿವೆ ಸ್ಥಳೀಯ ಮಾವು

Update: 2019-04-25 17:34 GMT

ಚಿಕ್ಕಮಗಳೂರು, ಎ.25: ಕಾಫಿನಾಡು ಕಾಫಿ, ಅಡಿಕೆ ಸೇರಿದಂತೆ ವಾಣಿಜ್ಯ ಬೆಳೆಗಳಿಗೆ ಹೆಸರಾದ ಜಿಲ್ಲೆಯಾಗಿದೆ. ಈ ಬೆಳೆಗಳೊಂದಿಗೆ ಕಾಫಿನಾಡು ಹಣ್ಣುಗಳ ರಾಜನೆಂದೇ ಖ್ಯಾತಿ ಪಡೆದಿರುವ ಮಾವಿನಹಣ್ಣುಗಳ ಬೆಳೆಗೂ ಹೆಸರಾಗಿದೆ. ಜಿಲ್ಲೆಯಲ್ಲಿ ಮಲೆನಾಡಿನ ವಿಶಿಷ್ಟ ಮಾವಿ ತಳಿಗಳೊಂದಿಗೆ ಹೈಬ್ರಿಡ್ ಮಾವಿನ ತಳಿಗಳನ್ನೂ ಬೆಳೆಯಲಾಗತ್ತಿದೆ. ವಿಪರ್ಯಾಸವೆಂದರೆ ಜಿಲ್ಲೆಯಲ್ಲಿ ಮಾವಿನ ಹಣ್ಣುಗಳ ಮಾರಾಟ ಉದ್ಯಮಕ್ಕೆ ಸೂಕ್ತ ಪ್ರೋತ್ಸಾಹ ನೀಡದ ಪರಿಣಾಮ ಜಿಲ್ಲೆಯ ಜನರು ಹೊರರಾಜ್ಯಗಳ ಮಾವುಗಳನ್ನೇ ಸವಿಯಬೇಕಾಗಿದೆ.

ಜಿಲ್ಲೆಯ ನೂರಾರು ಎಕರೆ ಪ್ರದೇಶದಲ್ಲಿ ನಮ್ಮದೇ ಜಿಲ್ಲೆಯ ಕೃಷಿಕರು ರಸ ಭರಿತ ಮಾವಿನ ಹಣ್ಣುಗಳೊಂದಿಗೆ ಮಲೆನಾಡಿನ ಸ್ಥಳೀಯ ತಳಿಗಳ ಮಾವಿನ ಕೃಷಿಯಲ್ಲಿ ತೊಡಗಿದ್ದಾರೆ. ಆದರೆ ಮಾವು ಬೆಳೆಗೆ ಸರಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೇ ಮಾವು ಬೆಳೆಗಾರರು ಸಂಘಟಿತರಾಗಿ ಮಾವು ಮಾರುಕಟ್ಟೆ ರೂಪಿಸಿಕೊಳ್ಳದಿರುವುದರಿಂದ ಜಿಲ್ಲೆಯಲ್ಲಿ ಮಾವಿನ ಬೆಳೆಯ ಕೃಷಿ ಲಾಭದಾಯಕವಾಗಿಲ್ಲ ಎಂಬ ಕೊರಗು ರೈತರನ್ನು ಕಾಡುತ್ತಿದೆ.

ಇದೀಗ ಮಾವಿನ ಹಣ್ಣುಗಳ ಸೀಸನ್ ಆರಂಭವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹಣ್ಣಿನಂಗಡಿಗಳ ಮಾರುಕಟ್ಟೆ, ಹಾಪ್‍ಕಾಮ್ಸ್‍ಗಳಲ್ಲಿ ವಿವಿಧ ಬಗೆಯ ಹೈಬ್ರೀಡ್ ಮಾವಿನ ಹಣ್ಣುಗಳು ಮಾವು ಪ್ರಿಯರನ್ನು ಕೈಬೀಸಿ ಕರೆಯಲಿವೆ. ವಿಪರ್ಯಾಸ ಎಂದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗ್ರಾಹಕರನ್ನು ಸೆಳೆಯುವ ಮಾವಿನನ ಹಣ್ಣುಗಳು ಸ್ಥಳೀಯವಾಗಿ ಬೆಳೆದ ಹಣ್ಣುಗಳಲ್ಲ. ಇಲ್ಲಿನ ಮಾರುಕಟ್ಟೆಯಲ್ಲಿ ಮಾರುವ ಮಾವು ನಮ್ಮ ಜಿಲ್ಲೆಯದಲ್ಲ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ, ಹೊರ ರಾಜ್ಯಗಳಲ್ಲಿ ಬೆಳೆದ ಮಾವವನ್ನು ಜಿಲ್ಲೆಯಲ್ಲಿ ಮಾರಲಾಗುತ್ತದೆ. ಜಿಲ್ಲೆಯಲ್ಲಿ ಮಾವಿನ ಮಾರುಕಟ್ಟೆ ಹಾಗೂ ಮಾವಿನ ಹಣ್ಣುಗಳ ಸಂಸ್ಕರಣ ಘಟಕಗಳ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬೆಳೆದ ಮಾವಿನ ಬೆಳೆ ಹೊರ ರಾಜ್ಯಗಳ ಪಾಲಾಗುತ್ತಿದೆ.

ಜಿಲ್ಲೆಯಲ್ಲಿ ತೋತಪುರಿ, ರಸಪುರಿ, ಆಲ್ಪೋನ್ಸಾ ಸೇರಿದಂತೆ ವಿವಿಧ ಜಾತಿಯ ಮಾವು ಸಾಕಷ್ಟು ಬೆಳೆದು ನಿಂತಿದೆಯಾದರೂ ನಮ್ಮ ಜಿಲ್ಲೆಯ ರೈತರು ತಾವೇ ಬೆಳೆದ ಮಾವನ್ನು ಮಾರುಕಟ್ಟೆಯಲ್ಲಿ ಮಾರುತ್ತಿಲ್ಲ. ಬದಲಿಗೆ ತಮ್ಮ ಮಾವಿನ ತೋಟಗಳನ್ನು ಹೊರ ಜಿಲ್ಲೆ, ರಾಜ್ಯಗಳ ದಲ್ಲಾಳಿ, ವ್ಯಾಪಾರಿಗಳಿಗೆ ಗೇಣಿಗೆ ನೀಡುತ್ತಿರುವುದರಿಂದ ಗೇಣಿಗೆ ಪಡೆದ ವ್ಯಾಪಾರಿಗಳು ನಮ್ಮ ಜಿಲ್ಲೆಯ ಮಾವನ್ನು ಬಾಂಬೆ, ಪೂನಾ, ಸಾಂಗ್ಲಿ, ದೆಹಲಿ ರಾಜ್ಯಗಳಿಗೆ ರಫ್ತು ಮಾಡಿ ಕೈತುಂಬಾ ಹಣಗಳಿಸುತ್ತಿದ್ದಾರೆ. ಆದರೆ ನಮ್ಮ ಜಿಲ್ಲೆಯ ಜನರಿಗೆ ನಮ್ಮದೇ ಭೂಮಿಯಲ್ಲಿ ಬೆಳೆದ ಮಾವನ್ನು ಸವಿಯಲು ಸಾಧ್ಯವಾಗುತ್ತಿಲ್ಲ. ಜೊತೆಗೆ ರೈತರ ಕೈಗೆ ನ್ಯಾಯಯುತ ಬೆಲೆಯೂ ಸಿಗುತ್ತಿಲ್ಲ.

ಜಿಲ್ಲೆಯಲ್ಲಿ ಮಾವು ಕೃಷಿಕರು ತಾವು ಬೆಳೆದ ಮಾವನ್ನು ಲಾಭಾ ದಾಯಕವನ್ನಾಗಿಸುವ ಯಾವುದೇ ಗೋಜಿಗೆ ಹೋಗದೇ ಸಾರಾಸಗಟಾಗಿ ಗೇಣಿದಾರರಿಗೆ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಗೇಣಿದಾರರು ಖರೀದಿಸಿದ ಮಾವನ್ನು ಬೇರೆ ರಾಜ್ಯಗಳಿಗೆ ರಫ್ತು ಮಾಡುವ ಮನಸ್ಸು ಮಾಡುತ್ತಾರೆಯೇ ವಿನಃ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಲು ಇಚ್ಛಿಸುವುದಿಲ್ಲ ಎಂಬ ದೂರೂ ಇದೆ. 

ಜಿಲ್ಲೆಯಲ್ಲಿ ಈಗಾಗಲೇ ಫಸಲು ನೀಡುತ್ತಿರುವ ಮಾವಿನ ತೋಟಗಳಿಗೆ ಸರ್ಕಾರ ರಾಷ್ಟ್ರೀಯ ತೋಟಗಾರಿಕಾ ಮಿಷನ್‍ಡಿಯಲ್ಲಿ ಅಗತ್ಯ ಪ್ರೋತ್ಸಾಹವನ್ನು ನೀಡಿದ ಕಾರಣ ಜಿಲ್ಲೆಯಲ್ಲಿ ಒಂದಷ್ಟು ಮಾವಿನ ಬೆಳೆ ಉಳಿದುಕೊಳ್ಳಲು ಕಾರಣವಾಗಿದೆ. ಮಾವಿನ ಬೆಳೆಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಕಾರ್ಬೇಟ್ ಬಳಸಿ ಹಣ್ಣು ಮಾಡಿದ ಮಾವು ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಮನಗಂಡಿರುವ ತೋಟಗಾರಿಕಾ ಇಲಾಖೆ  ಇಥೇಲಿನ್ ಬಳಸಿ ಹಣ್ಣು ಮಾಗಿಸುವ ಘಟಕ ಸ್ಥಾಪನೆಗೆ ಮುಂದಾಗುವ ಕೃಷಿಕರು ಅಥವಾ ಮಾರಾಟಗಾರರಿಗೆ ಸುಮಾರು 8 ಲಕ್ಷ ರೂ. ವರೆಗೂ ಸಹಾಯಧನ ನೀಡಲಾಗುತ್ತಿದೆ. ತಾವು ಬೆಳೆದ ಮಾವನ್ನು ಶೇಖರಿಸಿ ಪ್ಯಾಕ್ ಮಾಡಲು ಅಗತ್ಯವಿರುವ ಗೋಡಾನ್‍ಗಳನ್ನು ನಿರ್ಮಾಣ ಮಾಡಲು ಸಾಮಾನ್ಯ ವರ್ಗಕ್ಕೆ 2 ಲಕ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತಿದೆಯಾದರೂ ತೋಟಗಾರಿಕಾ ಇಲಾಖೆ ನೀಡುತ್ತಿರುವ ನೆರವನ್ನು ಪಡೆದು ಮಾವಿನ ಬೆಳೆಯನ್ನು ಲಾಭಾದಾಯಕವನ್ನಾಗಿಸುವ ಪ್ರಯತ್ನವನ್ನು ಜಿಲ್ಲೆಯ ಕೃಷಿಕರು ಮಾಡಿರುವುದಿಲ್ಲ. ಇತ್ತೀಚೆಗೆ ಮಾವಿನ ಪ್ಯಾಕಿಂಗ್ ಗೋಡಾನ್ ನಿರ್ಮಿಸಲು 300 ಮಂದಿ ಅರ್ಜಿ ಸಲ್ಲಿಸಿದ್ದಾರೆ, ಆದರೆ ಹಣ್ಣು ಮಾಗಿಸುವ ಘಟಕ ನಿರ್ಮಾಣಕ್ಕೆ ಚಿಕ್ಕಮಗಳೂರು ಜಿಲ್ಲೆಯ ಯಾವುದೇ ಮಾವು ಕೃಷಿಕರು ಈವರೆಗೂ ಮುಂದಾಗಿಲ್ಲ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 710 ಹೆಕ್ಟೇರ್ ಪ್ರದೇಶದಲ್ಲಿ 5815 ಟನ್, ಕಡೂರಿನಲ್ಲಿ 5044 ಹೆಕ್ಟೇರ್ ಪ್ರದೇಶದಲ್ಲಿ 8110 ಟನ್, ತರೀಕೆರೆಯಲ್ಲಿ 2901 ಹೆಕ್ಟೇರ್ ಪ್ರದೇಶದಲ್ಲಿ 48104 ಟನ್ ಮಾವನ್ನು ಈ ಬಾರಿ ನಿರೀಕ್ಷಿಸಲಾಗಿದೆ. ಹಾಗೆಯೇ ಮಲೆನಾಡಿನ ಭಾಗಗಳಲ್ಲಿ ಬರುವ ಜೀರಿಗೆ ಮಾವು ಸೇರಿದಂತೆ ನಾಟಿ ಮಾದರಿ ಹಾಗೂ ಸಂಪ್ರದಾಯಿಕ ಮಾದರಿ ಮಾವನ್ನು ಬೆಳೆಯಲಾಗುತ್ತಿದ್ದು, ಕೊಪ್ಪದಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ 605 ಟನ್, ಎನ್.ಆರ್.ಪುರದಲ್ಲಿ 42 ಹೆಕ್ಟೇರ್ ನಲ್ಲಿ 280 ಟನ್, ಶೃಂಗೇರಿಯಲ್ಲಿ 31 ಹೆಕ್ಟೇರ್ ನಲ್ಲಿ 345 ಟನ್ ಮಾವಿನ ಬೆಳೆಯನ್ನು ನಿರೀಕ್ಷಿಸಲಾಗಿದೆ. ಮುಂಬರುವ ದಿನಗಳಲ್ಲಿ ಮಾವು ಬೆಳೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿಕರಿಂದ ಗ್ರಾಹಕರಿಗೆ ಆರೋಗ್ಯ ಪೂರ್ಣ ಮಾವಿನಹಣ್ಣುಗಳನ್ನು ದೊರಕಿಸುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾವು ಮೇಳ ಆಯೋಜಿಸುವ ಚಿಂತನೆ ನಡೆಸಲಾಗಿದೆ.
- ಲೋಹಿತ್, ಸಹಾಯಕ ತೋಟಗಾರಿಕಾ ನಿರ್ದೇಶಕರು.

ಬೇರೆ ಬೇರೆ ಜಿಲ್ಲೆಗಳಲ್ಲಿ ಮಾವು ಕೃಷಿಕರು ಒಕ್ಕೂಟಗಳನ್ನು ರಚಿಸಿಕೊಂಡು ನೇರವಾಗಿ ತಾವು ಬೆಳೆದ ಮಾವನ್ನು ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಅದನ್ನೇ ಉದ್ದಿಮೆಯನ್ನಾಗಿಸಿ ಲಾಭಾದಾಯಕವಾಗಿ ನಡೆಸುತ್ತಿದ್ದಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ಮಾವು ಕೃಷಿಕರು ಯಾವುದೇ ಒಕ್ಕೂಟಗಳನ್ನು ರಚಿಸಿಕೊಳ್ಳಲು ಮನಸ್ಸು ಮಾಡಿಲ್ಲ. ಸರಕಾರ ಮಾವು ಕೃಷಿಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಮಾವಿನ ಗಿಡಗಳನ್ನು ನೆಡಲು ಅಗತ್ಯವಿರುವ ಗುಂಡಿ ತೊಡಲು ಹಣ, ಗಿಡ ಖರೀದಿಸಲು ಸೇರಿದಂತೆ ಮೂರು ವರ್ಷಗಳ ಕಾಲ ಗಿಡಗಳ ನಿರ್ವಹಣೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಮಾವಿನ ಫಸಲನ್ನು ಕಾಡುವ ಜಿಗಿ ಹುಳ ಕಾಟ ತಪ್ಪಿಸಲು ಅಗತ್ಯವಿರುವ ಔಷಧ ಮತ್ತು ಕೀಟನಾಶಕಗಳನ್ನು ಸಹ ನೀಡಲಾಗುತ್ತಿದೆ. ಆದರೆ ಇದರ ಪ್ರಯೋಜನವನ್ನು ಬಹಳಷ್ಟು ರೈತರು ಪಡೆಯುತ್ತಿಲ್ಲ ಎಂಬುದು ತೋಟಗಾರಿಕೆ ಇಲಾಖಾಧಿಕಾರಿಗಳ ದೂರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News