ಎಸೆಸೆಲ್ಸಿ ಫಲಿತಾಂಶ: ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರು, ಪೋಷಕರ ಮಾರ್ಗದರ್ಶನದ ಫಲ- ಮುಖ್ಯಮಂತ್ರಿ

Update: 2019-05-02 17:34 GMT

ಬೆಂಗಳೂರು, ಮೇ 2: ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಾಸನ ಹಾಗೂ ರಾಮನಗರ ಜಿಲ್ಲೆಗಳು ರಾಜ್ಯದಲ್ಲೇ ಮೊದಲ ಎರಡು ಸ್ಥಾನ ಪಡೆಯಲು ಶಿಕ್ಷಣ ಇಲಾಖೆಯ ಸುಧಾರಣಾ ಕ್ರಮಗಳೊಂದಿಗೆ ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರು, ಪೋಷಕರ ಮಾರ್ಗದರ್ಶನವೂ ಕಾರಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಹಾಸನ ಮತ್ತು ರಾಮನಗರ ಜಿಲ್ಲೆಗಳು ಅತ್ಯುತ್ತಮ ಫಲಿತಾಂಶ ದಾಖಲಿಸಿರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಶಿಕ್ಷಣ ಇಲಾಖೆಯ ಪರಿಹಾರ ಬೋಧನೆಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ. ಪ್ರತಿ ಶಾಲೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗಮನಿಸಿ, ಅವರಿಗೆ ವಿಶೇಷ ತರಗತಿಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಯುವುದರೊಂದಿಗೆ ಪೋಷಕರೂ ತಮ್ಮ ಮಕ್ಕಳು ಅತ್ಯುತ್ತಮ ಅಂಕ ಗಳಿಸಬೇಕೆಂದು ಅವರಿಗೆ ಒತ್ತಾಸೆಯಾಗಿದ್ದು, ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಈ ಬಾರಿ ಬಹುತೇಕ ಜಿಲ್ಲೆಗಳಲ್ಲಿ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ 7 ನೇ ಸ್ಥಾನಕ್ಕೆ ಕುಸಿದಿದೆ ಎಂದು ವಿಷಾಧಿಸಬೇಕಾಗಿಲ್ಲ, ಏಕೆಂದರೆ ಕಳೆದ ವರ್ಷಕ್ಕಿಂತ ಉತ್ತಮ ಫಲಿತಾಂಶ ಇಲ್ಲಿ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಹುತೇಕ ಜಿಲ್ಲೆಗಳ ಶೇಕಡಾವಾರು ಫಲಿತಾಂಶದಲ್ಲಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಇನ್ನಷ್ಟು ಉತ್ತಮ ಸಾಧನೆ ತೋರುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳು ಆಶಾಭಾವ ವ್ಯಕ್ತ ಪಡಿಸಿದ್ದಾರೆ.

ಶಾಲೆಯ ಶೇಕಡಾವಾರು ಫಲಿತಾಂಶವಷ್ಟೇ ಅಲ್ಲ, ಕಲಿಕೆಯ ಗುಣಮಟ್ಟವೂ ಅತಿ ಮುಖ್ಯ. ಕಲಿಕೆಯ ಗುಣಮಟ್ಟ ಸುಧಾರಣೆಗೂ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಕರು ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News