ಅಂತಹವರು ನನ್ನ ಶೂಲೇಸ್ ಬಿಚ್ಚುವಂತೆ ಮಾಡುತ್ತೇನೆ: ಪ್ರತಿಸ್ಪರ್ಧಿಗಳ ಬಗ್ಗೆ ವರುಣ್‍ ಗಾಂಧಿ ಹೇಳಿಕೆ

Update: 2019-05-05 07:34 GMT

ಹೊಸದಿಲ್ಲಿ, ಮೇ 5: “ನಾನು ಸಂಜಯ್ ಗಾಂಧಿಯವರ ಪುತ್ರ. ಅಂತಹ ವ್ಯಕ್ತಿಗಳು ನನ್ನ ಶೂಲೇಸ್ ಬಿಚ್ಚುವಂತೆ ಮಾಡುತ್ತೇನೆ” ಎಂದು ತಾಯಿ ಮೇನಕಾ ಗಾಂಧಿಯವರ ಪ್ರತಿಸ್ಪರ್ಧಿ ಚಂದ್ರ ಭದ್ರ ಸಿಂಗ್ ಅಲಿಯಾಸ್ ಸೋನು ಸಿಂಗ್ ಬಗ್ಗೆ ಹಾಲಿ ಸಂಸದ ವರುಣ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುಲ್ತಾನ್‍ ಪುರ ಕ್ಷೇತ್ರದ ಹಾಲಿ ಸಂಸದರಾಗಿರುವ ವರುಣ್‍ ಗಾಂಧಿ ಈ ಬಾರಿ ತಾಯಿಯ ಕ್ಷೇತ್ರವಾದ ಫಿಲಿಬಿಟ್‍ ನಿಂದ ಕಣಕ್ಕೆ ಇಳಿದಿದ್ದು, ಮಗನ ಸ್ಥಾನದಲ್ಲಿ ಮೇನಕಾ ಗಾಂಧಿ ಕಣಕ್ಕೆ ಇಳಿದಿದ್ದಾರೆ.

"ಜನ ತಮ್ಮ ಪಾಪಕ್ಕೆ ಹೆದರಬೇಕೇ ವಿನಃ ಮೋನು ಅಥವಾ ಟೋನುವಿಗೆ ಹೆದರಬೇಕಾಗಿಲ್ಲ" ಎಂದು ತಾಯಿಯ ಪರ ಪ್ರಚಾರದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿ ಸೋನು ಸಿಂಗ್ ಅವರ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಹೇಳಿದರು.

"ಆತ್ಮಗೌರವ ಇಲ್ಲದ ವ್ಯಕ್ತಿ ಹೆಣಕ್ಕೆ ಸಮ. ನಾನು ಒಂದು ಅಂಶವನ್ನು ಸ್ಪಷ್ಟಪಡಿಸುತ್ತೇನೆ. ದೇವರಿಗೆ ಬಿಟ್ಟು ನೀವು ಯಾರಿಗೂ ಹೆದರಬೇಕಾಗಿಲ್ಲ. ನಿಮಗೆ ಯಾರೂ ಏನೂ ಮಾಡಲಾಗದು. ನಾನು ಇಲ್ಲಿ ನಿಂತಿದ್ದೇನೆ. ನಾನು ಸಂಜಯ್‍ ಗಾಂಧಿ ಮಗ. ಅಂಥ ವ್ಯಕ್ತಿಗಳಿಂದ ನಾನು ನನ್ನ ಶೂಲೇಸ್ ಬಿಚ್ಚಿಸಿಕೊಳ್ಳುತ್ತೇನೆ" ಎಂದು ಅವರು ಹೇಳಿಕೆ ನೀಡಿದರು.

ಕಳೆದ ಎರಡು ದಶಕಗಳಿಂದ ಚುನಾವಣೆಯಲ್ಲಿ ಸೋಲು ಕಾಣದ ಮೇನಕಾ ಗಾಂಧಿ 2014ರಲ್ಲಿ ಫಿಲಿಬಿಟ್‍ ನಲ್ಲಿ ಗೆದ್ದಿದ್ದರು. ವರುಣ್‍ ಗಾಂಧಿ ಸುಲ್ತಾನ್‍ಪುರದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಪಕ್ಷದ ಮುಖಂಡರ ಜತೆ ಅವರ ಸಂಬಂಧ ಹದಗೆಟ್ಟಿದ್ದು, ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದರು. ಭಿನ್ನಾಭಿಪ್ರಾಯದ ಹೊರತಾಗಿಯೂ ತಾಯಿಯ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಅವರಿಗೆ ಲಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News